ಲಕ್ಕಿಮ್ಯಾನ್ ಕಲೆಕ್ಷನ್ ಎಷ್ಟು ಎಂದ ಕೂಡಲೇ ಡಾರ್ಲಿಂಗ್ ಕೃಷ್ಣ, ಚಿತ್ರತಂಡ ಗಪ್ಚುಪ್!
ಸದ್ಯ ಕನ್ನಡ ಚಲನಚಿತ್ರರಂಗದಲ್ಲಿ ಲಕ್ಕಿ ಮ್ಯಾನ್ ಹವಾ ನಡೆಯುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿನಯದ ಕೊನೆಯ ಕಮರ್ಷಿಯಲ್ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರವನ್ನು ನೋಡಲೇಬೇಕೆಂದು ಅಭಿಮಾನಿಗಳು ಚಿತ್ರಮಂದಿರಗಳೆಡೆಗೆ ಮುಖ ಮಾಡುತ್ತಿದ್ದಾರೆ. ಹೌದು, ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಅಕ್ಟೋಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆಯಾದರೂ ಅದೊಂದು ಕಂಪ್ಲೀಟ್ ಡಾಕುಮೆಂಟರಿ ಚಿತ್ರವಾಗಿದ್ದು, ಲಕ್ಕಿಮ್ಯಾನ್ನಲ್ಲಿರುವಂತ ಡಾನ್ಸ್ ಗಂಧದ ಗುಡಿಯಲ್ಲಿ ಇರುವುದಿಲ್ಲ. ಆದ್ದರಿಂದ ಅಪ್ಪುವಿನ ಕೊನೆಯ ಡಾನ್ಸ್ ಕಣ್ತುಂಬಿಕೊಳ್ಳಲು ಅಪ್ಪು ಅಭಿಮಾನಿಗಳ ಹಿಂಡು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು.
ಕಳೆದ ಶುಕ್ರವಾರ ಲಕ್ಕಿಮ್ಯಾನ್ ಚಿತ್ರ ತೆರೆಗೆ ಅಪ್ಪಳಿಸಿತ್ತು. ಹಲವಾರು ತಿಂಗಳುಗಳಿಂದ ಮುಚ್ಚಿದ್ದ ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರ ಲಕ್ಕಿಮ್ಯಾನ್ಗಾಗಿ ಪುನರಾರಂಭಗೊಂಡಿತು. ಬಿಡುಗಡೆಯ ಹಿಂದಿನ ದಿನವೇ ರಾಜ್ಯದ ಹಲವು ದೊಡ್ಡ ನಗರಗಳಲ್ಲಿನ ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಇನ್ನು ಈ ಪ್ರೀಮಿಯರ್ ಶೋಗಳು ಬಹುತೇಕ ತುಂಬಿದ ಪ್ರದರ್ಶನವನ್ನು ಕಂಡಿದ್ದವು.
ಬಿಡುಗಡೆಯಾದ ದಿನವೂ ಲಕ್ಕಿಮ್ಯಾನ್ ಹಲವೆಡೆ ತುಂಬು ಮಂದಿರದ ಪ್ರದರ್ಶನ ಕಂಡಿತ್ತು. ಹೀಗಾಗಿ ಲಕ್ಕಿಮ್ಯಾನ್ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಸಾಮಾನ್ಯವಾಗಿಯೇ ಇತ್ತು. ಅದರಂತೆ ಈ ಅಂಶವನ್ನು ಜನರಿಗೆ ತಿಳಿಸಲು ಪತ್ರಕತ್ರರೋರ್ವರು ಲಕ್ಕಿಮ್ಯಾನ್ ಚಿತ್ರತಂಡದ ಸಂದರ್ಶನದ ಸಮಯದಲ್ಲಿ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆಯನ್ನು ಹಾಕಿದ್ದರು. ಆದರೆ ಈ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಲೇ ಇಲ್ಲ.

ನಂಗೆ ಗೊತ್ತಿಲ್ಲ ಎಂದ ತಂಡ
ಇನ್ನು ಈ ಪ್ರಶ್ನೆ ಮೊದಲು ಎದುರಾದದ್ದು ಚಿತ್ರದ ನಟ ಡಾರ್ಲಿಂಗ್ ಕೃಷ್ಣಗೆ. ಸೋಮವಾರ ನಡೆದ ಸಂದರ್ಶನದಲ್ಲಿ ಕಲೆಕ್ಷನ್ ಎಷ್ಟಾಗಿದೆ ಎಂಬ ಪ್ರಶ್ನೆ ಕೇಳಿದಾಗ ನನಗೆ ನಿಖರವಾಗಿ ನಂಬರ್ಸ್ ಗೊತ್ತಿಲ್ಲ ಎಂದು ಮೈಕನ್ನು ಪಕ್ಕದಲ್ಲಿದ್ದ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರಿಗೆ ನೀಡಿದ್ದರು. ಇನ್ನು ನಾಗೇಂದ್ರ ಪ್ರಸಾದ್ ಕೂಡ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅಷ್ಟೇ ಅಲ್ಲದೇ ಈ ಪ್ರಶ್ನೆಗೆ ನಿರ್ಮಾಪಕರು ಉತ್ತರ ಕೊಡ್ತಾರೆ, ಈಗ ಅವರಿಲ್ಲ, ನಾವೇ ಒಂದು ಹೇಳೋದು, ಅವರಿನ್ನೊಂದು ಹೇಳೋದು ಬೇಡ ಎಂದು ನಾಗೇಂದ್ರ ಪ್ರಸಾದ್ ಕಲೆಕ್ಷನ್ ವಿಷಯಕ್ಕೆ ಅಂತ್ಯ ಹಾಡಿದರು.

ಆದರೆ ಬಿಡುಗಡೆ ದಿನಕ್ಕಿಂತ ನಂತರ ಹೆಚ್ಚು ಕಲೆಕ್ಷನ್
ಇನ್ನು ಒಟ್ಟಾರೆ ಕಲೆಕ್ಷನ್ ಕುರಿತು ನಿಖರವಾದ ನಂಬರ್ಸ್ ಹೇಳಲು ನಿರಾಕರಿಸಿದರೂ ಸಹ ನಟ ಡಾರ್ಲಿಂಗ್ ಕೃಷ್ಣ ಚಿತ್ರವು ಶುಕ್ರವಾರಕ್ಕಿಂತ ಶನಿವಾರ ಹೆಚ್ಚು ಹಾಗೂ ಶನಿವಾರಕ್ಕಿಂತ ಭಾನುವಾರ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ವಿಷಯವನ್ನು ಮಾತ್ರ ಖಾತರಿಯಾಗಿ ತಿಳಿಸಿದರು. ಹಾಗೂ ಸೋಮವಾರದ ಬೆಳಗ್ಗಿನ ಪ್ರದರ್ಶನ ಕೂಡ ಒಳ್ಳೆಯ ಗಳಿಕೆಯನ್ನು ಮಾಡಿದೆ ಎಂದು ಅವರು ತಿಳಿಸಿದ್ದರು.

ಒಟಿಟಿ ಕುರಿತು ಸ್ಪಷ್ಟನೆ
ಇನ್ನೂ ಮುಂದುವರೆದು ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ ಚಿತ್ರ ಒಟಿಟಿಯಲ್ಲಿ ಇದೇ ತಿಂಗಳ 23ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯ ಕುರಿತು ಮಾತನಾಡಿದರು. ಇದೆಲ್ಲಾ ಸುಳ್ಳು, ಚಿತ್ರ ಕನಿಷ್ಟವೆಂದರೂ ಐವತ್ತು ದಿನಗಳ ಕಾಲ ಚಿತ್ರಮಂದಿರದಲ್ಲಿ ಇರಲಿದೆ ಎಂದರು ಹಾಗೂ ದೇವರ ದರ್ಶನವನ್ನು ದೇವಸ್ಥಾನದಲ್ಲಿ ಪಡೆದುಕೊಂಡರೆ ಚಂದ ಮನೆಯಲ್ಲಿ ಬೇಡ ಎಂದರು.


Click it and Unblock the Notifications











