ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ದರ್ಶನ್ ಭಾಗಿ; ರಾದ್ಯಾ ಕೆನ್ನೆ ಮುಟ್ಟಿ ಶುಭಕೋರಿದ ದಾಸ
ಕಾಂತಾರ ಸಿನಿಮಾ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಸದ್ಯ ಕಾಂತಾರ ಎರಡನೇ ಭಾಗದ ಕಥೆ ಬರೆಯುವಲ್ಲಿ ನಿರತರಾಗಿದ್ದಾರೆ. ಇನ್ನು ಕಾಂತಾರ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಸಾಧಿಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ತಮ್ಮ ಮುದ್ದು ಮಗಳ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಹೀಗೆ ಫೋಟೊ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ ತಮ್ಮ ಮಗಳಿಗೆ ರಾದ್ಯಾ ಎಂದು ಹೆಸರನ್ನು ಇಟ್ಟಿರುವುದಾಗಿ ತಿಳಿಸಿದ್ದರು. ಇತ್ತೀಚೆಗೆ ತಮ್ಮ ಮಗಳು ರಾದ್ಯಾ ಒಂದು ವರ್ಷ ಪೂರೈಸಿದ್ದರ ಬಗ್ಗೆಯೂ ಸಹ ರಿಷಬ್ ಶೆಟ್ಟಿ ಪೋಸ್ಟ್ ಮಾಡಿ ತಿಳಿಸಿದ್ದರು. ರಾದ್ಯಾಳ ಮುದ್ದಾದ ಫೋಟೊಶೂಟ್ ಮಾಡಿಸುವ ಮೂಲಕ ಆ ವಿಡಿಯೊವನ್ನು ಹಂಚಿಕೊಂಡು "ರಾದ್ಯಾಳ ಮೊದಲ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ" ಎಂದು ಬರೆದುಕೊಂಡಿದ್ದರು.

ಹಳದಿ, ಬಿಳಿ ಹಾಗೂ ಹಸಿರು ಡ್ರೆಸ್ನಲ್ಲಿ ಸಖರ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ರಾದ್ಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಳು. ಇನ್ನು ಕೇವಲ ರಾದ್ಯಾಳ ಫೋಟೊಶೂಟ್ನ ವಿಡಿಯೊವನ್ನು ಮಾತ್ರ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಕಾರ್ಯಕ್ರಮ ಹೇಗೆ ನಡೆಯಿತು, ಯಾರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂಬ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಆದರೀಗ ರಾದ್ಯಾ ಹುಟ್ಟುಹಬ್ಬ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾದ್ಯಾ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಟರಾದ ಅಭಿಷೇಕ್ ಅಂಬರೀಶ್, ಝೈದ್ ಖಾನ್ ಜತೆ ಈ ಕಾರ್ಯಕ್ರಮಕ್ಕೆ ದರ್ಶನ್ ಹಾಜರಾಗಿದ್ದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಪ್ಪು ಬಣ್ಣದ ಡ್ರೆಸ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ರಿಷಬ್ ಶೆಟ್ಟಿ ದಂಪತಿ ಜತೆ ಸಂತಸದಿಂದ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಮೊದಲ ಮಗನನ್ನು ಎತ್ತಿಕೊಂಡು ಮುದ್ದು ಮಾಡಿದ್ದಾರೆ. ರಾದ್ಯಾಳ ಕೆನ್ನೆ ಗಿಂಡಿ ಮುದ್ದು ಮಾಡುತ್ತಿರುವ ದರ್ಶನ್ ಅವರ ಈ ವಿಡಿಯೊಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.
ಇನ್ನು ಈ ವಿಡಿಯೊದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಿಷಬ್ ಶೆಟ್ಟಿ ತುಂಬಾ ಆತ್ಮೀಯತೆಯಿಂದ ಮಾತನಾಡಿದ್ದನ್ನು ಕಂಡಿರುವ ದರ್ಶನ್ ಅಭಿಮಾನಿಗಳು ರಿಷಬ್ ಶೆಟ್ಟಿ ನಮ್ಮ ಬಾಸ್ಗೆ ಒಂದು ಸಿನಿಮಾ ನಿರ್ದೇಶಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ರಾದ್ಯಾಳ ಆಗಮನವಾದ ಬಳಿಕ ರಿಷಬ್ ಶೆಟ್ಟಿ ಲಕ್ ಬದಲಾಗಿ ಹೋಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದು, ಕಾಂತಾರ 2 ಚಿತ್ರ ಬೇಗನೆ ಬರಲಿ ಎಂದು ಕಾತರತೆ ವ್ಯಕ್ತಪಡಿಸಿದ್ದಾರೆ. ಸದ್ಯ ಕಾಂತಾರ ಎರಡನೇ ಭಾಗದ ಕಥೆ ಬರೆಯುವಲ್ಲಿ ನಿರತರಾಗಿರುವ ರಿಷಬ್ ಶೆಟ್ಟಿ ಇದಕ್ಕಾಗಿ ಬ್ಯಾಚುಲರ್ ಪಾರ್ಟಿ ಚಿತ್ರದಿಂದ ಹೊರಬಂದಿದ್ದಾರೆ.
ಕಾಂತಾರ ಚಿತ್ರದಲ್ಲಿ ಕಾಡುಬೆಟ್ಟು ಶಿವನ ಕಥೆಯನ್ನು ಹೇಳಿದ್ದ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದಲ್ಲಿ ಕಾಡುಬೆಟ್ಟು ಶಿವನ ಅಪ್ಪನ ಕಥೆಯನ್ನು ಹೇಳಲಿದ್ದಾರೆ. ಕಾಂತಾರ ಶತದಿನೋತ್ಸವ ಆಚರಣೆ ಕಾರ್ಯಕ್ರಮದಲ್ಲಿಯೂ ಸಹ ಇದರ ಕುರಿತು ಹೇಳಿಕೆ ನೀಡಿದ್ದ ರಿಷಬ್ ಶೆಟ್ಟಿ ಈಗ ನೀವು ನೋಡಿರುವುದು ಕಾಂತಾರ ಎರಡನೇ ಭಾಗ, ಮುಂದೆ ಒಂದನೇ ಭಾಗ ಬರಲಿದೆ ಎಂದು ಹೇಳಿಕೆ ನೀಡಿ ಕುತೂಹಲವನ್ನು ಹೆಚ್ಚಿಸಿದ್ದರು.


Click it and Unblock the Notifications











