Darshan- Sudeep: ಸುಮಲತಾ ಬರ್ತ್ಡೇ ಪಾರ್ಟಿಗೆ 'ಹಳೇ ಫ್ರೆಂಡ್ಸ್' ಬಂದಿದ್ದೇಕೆ? ಅಲ್ಲಿ ಏನೇನಾಯ್ತು? ಪಿನ್ ಟು ಪಿನ್ ಡಿಟೈಲ್ಸ್
ಸ್ಯಾಂಡಲ್ವುಡ್ನಲ್ಲಿ ಉತ್ತರ ಧ್ರುವ ದಕ್ಷಿಣ ಧ್ರುವದಂತಿದ್ದ ನಟ ದರ್ಶನ್ ಹಾಗೂ ಸುದೀಪ್ ಬಹಳ ದಿನಗಳ ನಂತರ ಮುಖಾಮುಖಿ ಆಗಿದ್ದಾರೆ. ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರು ಭಾಗವಹಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಇಬ್ಬರು ಆಪ್ತರಾಗಿದ್ದರಿಂದ ಆಹ್ವಾನವನ್ನು ಮನ್ನಿಸಿ ದರ್ಶನ್ ಮತ್ತು ಸುದೀಪ್ ಪಾರ್ಟಿಗೆ ಹಾಜರಾಗಿದ್ದರು.
6 ವರ್ಷಗಳ ಹಿಂದೆ ದರ್ಶನ್ ಹಾಗೂ ಸುದೀಪ್ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಕಳೆದ ವರ್ಷ ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್ ಹಾಗೂ ಯಶ್ ಭಾಗಿ ಆಗಿದ್ದರು. ಆದರೆ ಇವರಿಬ್ಬರನ್ನು ಒಂದೆಡೆ ಸೇರಿಸಬೇಕೆಂದು ಸುಮಲತಾ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪಟ್ಟು ಹಿಡಿದಂತೆ ಕಾಣುತ್ತಿತ್ತು. ಪರಿಣಾಮ ಇಬ್ಬರು ಕಾರ್ಯಕ್ರಮಕ್ಕೆ ಬರುವಂತಾಯಿತು.

ನಿನ್ನೆ ರಾತ್ರಿ (ಆಗಸ್ಟ್ 27) ಖಾಸಗಿ ಹೋಟೆಲ್ನಲ್ಲಿ ಸುಮಲತಾ ಅಂಬರೀಶ್ ಅವರ 60ನೇ ವರ್ಷದ ಹುಟ್ಟುಹಬ್ಬ ಪಾರ್ಟಿ ನಡೀತು. ದರ್ಶನ್, ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಗುರುಕಿರಣ್ ಸೇರಿದಂತೆ ಹಲವರನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ರಾತ್ರಿ 10 ಗಂಟೆಯಿಂದಲೇ ಪಾರ್ಟಿ ರಂಗೇರಿತ್ತು. ಮೊದಲಿಗೆ ಸುದೀಪ್ ಪಾರ್ಟಿ ಹಾಲ್ ಪ್ರವೇಶಿಸಿದ್ದರು. ಬಳಿಕ ಪತ್ನಿ ವಿಜಯಲಕ್ಷ್ಮಿ ಸಮೇತರಾಗಿ ದರ್ಶನ್ ಬಂದರು. ಆ ನಂತರ ಕೇಕ್ ಕಟ್ಟಿಂಗ್ ಸೆಲೆಬ್ರೇಷನ್ ಶುರುವಾಯಿತು.
ದರ್ಶನ್ ವೇದಿಕೆ ಏರುತ್ತಿದ್ದಂತೆ ರಾಕ್ಲೈನ್ ವೆಂಕಟೇಶ್ ಸುದೀಪ್ ಅವರನ್ನು ವೇದಿಕೆ ಕರೆದೊಯ್ದರು. ಸುಮಲತಾ ಅಂಬರೀಶ್ ಕೇಕ್ ಕಟ್ ಮಾಡುತ್ತಿದ್ದಂತೆ ಸುದೀಪ್ ಇಳಿದು ಹೊರಡಲು ಮುಂದಾದರು. ಕೂಡಲೇ ರಾಕ್ಲೈನ್ ವೆಂಕಟೇಶ್ ಕೈ ಹಿಡಿದು ಸುಮಲತಾ ಅವರಿಗೆ ಕೇಕ್ ತಿನ್ನಿಸುವಂತೆ ಹೇಳಿದ್ದರು. ಈ ವೇಳೆ ದರ್ಶನ್ ಅಲ್ಲೇ ಹಿಂಭಾಗದಲ್ಲಿ ಅಭಿಷೇಕ್ ಜೊತೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದವರು ಹೇಳುವ ಪ್ರಕಾರ ದರ್ಶನ್- ಸುದೀಪ್ ಇಬ್ಬರು ಮುಖಾಮುಖಿ ಆದರೂ ಕೂಡ ಮಾತನಾಡಲಿಲ್ಲ.
ಕೇಕ್ ಕಟ್ಟಿಗ್ ವೇಳೆ ಇಬ್ಬರು ಮಾತನಾಡಿಬಿಡುತ್ತಾರೆ ಅಂತಲೇ ಕೆಲವರು ಊಹಿಸಿದ್ದರು. ಆದರೆ ಅದು ಆಗಲಿಲ್ಲ. ಇನ್ನು ಬೆಳಗಿನ ಜಾವ 5 ಗಂಟೆಯವರೆಗೂ ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿ ಮುಂದುವರಿಯಿತು. ಬೆಳಗಿನ ಜಾವ 3 ಗಂಟೆ ವೇಳೆಗೆ ದರ್ಶನ್ ನಿರ್ಗಮಿಸಿದರೆ ಸುದೀಪ್ 5 ಗಂಟೆಗೆ ಮನೆಗೆ ಹೊರಟರಂತೆ. ಇಬ್ಬರು ಶೀಘ್ರದಲ್ಲೇ ಒಂದಾಗುತ್ತಾರೆ. ಅದರ ಮೊದಲ ಮೆಟ್ಟಿಲು ಎನ್ನುವಂತೆ ಸುಮಲತಾ ಅವರ ಬರ್ತ್ಡೇ ಪಾರ್ಟಿಯಲ್ಲಿ ಭೇಟಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಈ ಹಿಂದೆ ಕೂಡ ಹಲವು ಬಾರಿ ದರ್ಶನ್- ಸುದೀಪ್ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಬೇಕಿತ್ತು. ಆದರೆ ಯಾರಾದರೂ ಒಬ್ಬರು ಹಿಂದೇಟು ಹಾಕುತ್ತಿದ್ದರು. ಆದರೆ ಅಂಬಿ ಮನೆ ಇಬ್ಬರಿಗೂ ಆಪ್ತ. ತೂಗುದೀಪ ಶ್ರೀನಿವಾಸ್ ಹಾಗೂ ಅಂಬರೀಶ್ ನಡುವೆ ದಶಕಗಳಿಂದ ಆತ್ಮೀಯ ಒಡನಾಟ ಇತ್ತು. ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದಲ್ಲೂ ಅಂಬಿ ಬೆನ್ನಿಗೆ ನಿಂತಿದ್ದರು. ಅಂಬಿ ಕೊನೆಯ ದಿನಗಳವರೆಗೂ ಇದೇ ಆತ್ಮೀಯತೆ ಇತ್ತು. ಅಂಬಿನ ದರ್ಶನ್ ಅಪ್ಪಾಜಿ ಎನ್ನುತ್ತಿದ್ದಾರೆ. ಸುಮಲತಾ ಅವರನ್ನು ಮದರ್ ಇಂಡಿಯಾ ಎಂದು ಕರೆಯುತ್ತಾರೆ.
ಇನ್ನು ಸುದೀಪ್ ತಂದೆಗೂ ಕೂಡ ಅಂಬಿ ಜೊತೆ ಉತ್ತಮ ಬಾಂಧವ್ಯ ಇತ್ತು. ಸುದೀಪ್ ಕೂಡ ಅಂಬಿ ಮಾಮ, ಸುಮಲತಾ ಅಕ್ಕ ಎಂದೇ ಸಂಬೋಧಿಸುತ್ತಾರೆ. ಹಾಗಾಗಿಯೇ ಈ ಬಾರಿ ಸುಮಲತಾ ಅವರ 60ನೇ ವರ್ಷದ ಹುಟ್ಟುಹಬ್ಬದ ಆಮಂತ್ರಣವನ್ನು ಇಬ್ಬರು ತಿರಸ್ಕರಿಸದೇ ಹಾಜರಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮೂರ್ನಾಲ್ಕು ಮೀಟರ್ ಹತ್ತಿರ ಬಂದಿರುವವರು ಆದಷ್ಟು ಬೇಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮತ್ತೆ ಮೊದಲಿನಂತೆ ಸ್ನೇಹಿತರಾಗುತ್ತಾರೆ ಎನ್ನುವ ಆಸೆ ಮೂಡಿದೆ.
ದರ್ಶನ್ ಹಾಗೂ ಸುದೀಪ್ ಇಬ್ಬರನ್ನು ಸೇರಿದಿ 'ದಿಗ್ಗಜರು' ಟೈಟಲ್ನಲ್ಲಿ ಸಿನಿಮಾ ಮಾಡುವ ಬಗ್ಗೆಯೂ ಊಹಾಪೋಹ ಶುರುವಾಗಿದೆ. ದರ್ಶನ್ ಹಾಗೂ ಸುದೀಪ್ ಇಬ್ಬರು ಸುಮಲತಾ ಅವರ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ಬಗ್ಗೆ ಮಾಜಿ ಸಚಿವ, ನಿರ್ಮಾಪಕ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ. ನ್ಯೂಸ್ 18 ಕನ್ನಡ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ರೀತಿ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಹಾಗೂ ಸುದೀಪ್. ಶಿವಣ್ಣ, ರವಿಚಂದ್ರನ್ ಹಿರಿಯರು. ಆನಂತರ ಸ್ಥಾನದಲ್ಲಿ ಬರೋದು ಸುದೀಪ್, ದರ್ಶನ್. ಇವರೆಲ್ಲಾ ಒಟ್ಟಾಗಿ ಇರಲೇಬೇಕು. ಮುಂದಿನ ಪೀಳಿಗೆ ಇನ್ನು ಬರ್ತಿದ್ದಾರೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಬಾಯಕರ ಸಂಖ್ಯೆ ಕಮ್ಮಿ ಇದೆ. ಪರಭಾಷೆಯಲ್ಲಿ ನಮ್ಮ ಚಿತ್ರಗಳು ಚೆನ್ನಾಗಿ ಓಡುತ್ತಿದೆ. ಗಳಿಕೆಯಲ್ಲೂ ದೊಡ್ಡ ಸಾಧನೆ ಮಾಡುತ್ತಿದೆ."
"ಈಗ ನಮ್ಮದು ಬೇರೆ ಭಾಷೆಗಳ ಸ್ಯಾಟಲೈಟ್ ರೈಟ್ಸ್ ಸೇರಿದಂತೆ ಎಲ್ಲವೂ ಚೆನ್ನಾಗಿದೆ. ಇಂತಹ ಸಮಯದಲ್ಲಿ ಸಣ್ಣ ಸಣ್ಣ ಮನಸ್ತಾಪ ಮರೆತು ಒಟ್ಟಾಗಿ ಸಿನಿಮಾ ಮಾಡುವುದು, ಒಟ್ಟಿಗೆ ಇರುವುದು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ. ಯಾವಾಗಲೂ ಹಿಂಗೇ ಇರಬೇಕು, ಹಿಂಗೇ ಇರುತ್ತದೆ. ದರ್ಶನ್- ಸುದೀಪ್ ಕನ್ನಡದ ಆಸ್ತಿ. 24 ಗಂಟೆ ಜೊತೆಗಿರುವುದ ಒಂಥರ ಸ್ನೇಹ, ಸಿಕ್ಕಾಗ ಮಾತನಾಡುವುದು ಒಂದೇ ಸ್ನೇಹ, ಎಲ್ಲೋ ಇದ್ದರು ಅವರು ಚೆನ್ನಾಗಿರಲಿ, ಇವರು ಚೆನ್ನಾಗಿರಲಿ ಅನ್ನೋದು ಸ್ನೇಹವೇ. ಆ ಸಾಲಿನಲ್ಲಿ ಇವರು ಇದ್ದರು. ಒಳ್ಳೆ ಕತೆ ಸಿಕ್ಕರೆ ಖಂಡಿತ ಇಬ್ಬರ ಜೊತೆ ಸಿನಿಮಾ ಮಾಡ್ತೀನಿ" ಎಂದಿದ್ದಾರೆ.


Click it and Unblock the Notifications











