ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗುವ ಕಾಲ ಬಂತು..!
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ಏಳೂವರೆ ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ.
ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು. ಯಾಕೆಂದರೆ, ಅಂಬರೀಶ್ ಅವರಿಗೆ ಇಬ್ಬರನ್ನೂ ಮತ್ತೆ ಜೊತೆಯಾಗಿ ನೋಡಬೇಕೆಂಬ ಹೆಬ್ಬಯಕೆ ಇತ್ತು. ಆದರೆ ಈ ಆಸೆ ಈಡೇರಲಿಲ್ಲ. ಕಾಲಾಂತರಗಳ ಈ ಮುನಿಸು ಮುಗಿಯಲಿಲ್ಲ. ಅಂಬರೀಶ್ ಅವರ ಕನಸು ನನಸಾಗಲಿಲ್ಲ.

ಆದರೆ ಈಗ ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗುವ ಸಮಯ ಬಂದಿದೆ. ದರ್ಶನ್ ಮತ್ತು ಸುದೀಪ್ ಅವರ ಅಸಂಖ್ಯಾತ-ಅಗಣಿತ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ಈ ಪವಾಡ ನಡೆಯಲಿದೆ. ಹೀಗೊಂದು ಭವಿಷ್ಯವನ್ನು ಪ್ರಸಿದ್ಧ ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಶಾಂತ್ ಕಿಣಿ, ಸುದೀಪ್ ಮತ್ತು ದರ್ಶನ್ ಇಬ್ಬರು ಮತ್ತೆ ಯಾವಾಗ ಒಂದಾಗುತ್ತಾರೆ ಎಂದು ನನಗೆ ಇವರ ಇಬ್ಬರ ಅನೇಕ ಅಭಿಮಾನಿಗಳು ಕೇಳುತ್ತಿದ್ದಾರೆ. ಫೆಬ್ರವರಿ 2026ರ ನಂತರ ಈ ಇಬ್ಬರು ತಾರೆಯರು ಸ್ನೇಹಿತರಾಗುತ್ತಾರೆ ಎಂದಿದ್ದಾರೆ.
ಸಹಜವಾಗಿ ಪ್ರಶಾಂತ್ ಕಿಣಿ ಅವರ ಈ ಭವಿಷ್ಯವನ್ನು ಕೇಳಿ ಸುದೀಪ್ ಮತ್ತು ದರ್ಶನ್ ಅವರನ್ನು ಜೊತೆಯಲ್ಲಿ ನೋಡಲು ಬಯಸುವ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮ ಈ ಭವಿಷ್ಯ ನಿಜವಾಗಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಇಷ್ಟೇ ವರ್ಷ ಕಾದಿದ್ದೇವೆ 2026ರವರೆಗೆ ಕೂಡ ಕಾದು ನೋಡುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಇಬ್ಬರು ದೂರ ದೂರ ಇರುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ 'ಎಕ್ಸ್'ನಲ್ಲಿ 56.939 ಫಾಲೋವರ್ಸ್ಗಳನ್ನೊಂದಿರುವ ಪ್ರಶಾಂತ್ ಕಿಣಿ ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ಕೂಡ ಭವಿಷ್ಯ ಹೇಳಿದ್ದರು. 2027ಕ್ಕೆ ದರ್ಶನ್ ರಾಜಕೀಯಕ್ಕೆ ಬರುವುದು ಖಚಿತ ಎಂದು ಹೇಳಿದ್ದರು. ರಾಜಕೀಯದಲ್ಲಿ ಅದ್ಭುತವಾದ ಯಶಸ್ಸು ದರ್ಶನ್ ಅವರಿಗೆ ಸಿಗಲಿದೆ ಎಂದು ಹೇಳಿದ್ದ ಪ್ರಶಾಂತ್ ಕಿಣಿ ತಮ್ಮ ಗತಕಾಲದ ದಿನಗಳನ್ನು ದರ್ಶನ್ ಮತ್ತೆ ನೋಡಲಿದ್ದಾರೆ ಎಂದಿದ್ದರು. ರಾಜಕೀಯಕ್ಕೆ ಹೋದ ಮೇಲೆ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಾರೆ ಆದರೆ ಆ ಎಲ್ಲ ಸಿನಿಮಾಗಳು ಚೆನ್ನಾಗಿರುತ್ತವೆ ಎಂದು ಹೇಳಿದ್ದರು. ಆದರೆ ಇದೇ ಸಮಯದಲ್ಲಿ 2025ರ ಏಪ್ರಿಲ್ ಅಥವಾ ಮೇನಲ್ಲಿ ದರ್ಶನ್ ಜೈಲಿಂದ ಬಿಡುಗಡೆಯಾಗುತ್ತಾರೆ ಎಂದು ಕೂಡ ಹೇಳಿದ್ದರು. ಎಲ್ಲರಿಗೆ ಗೊತ್ತಿರುವಂತೆ ಈಗಾಗಲೇ ಜೈಲಿಂದ ಹೊರ ಬಂದಿದ್ದಾರೆ. ತಮ್ಮ ಪತ್ನಿ ಮತ್ತು ಮಗನ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಈ ಕಾರಣಕ್ಕೆ ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಇವರು ಹೇಳಿದ ಭವಿಷ್ಯದ ಬಗ್ಗೆ ಕೆಲವರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಕಳೆದ ವರ್ಷ ನಡೆದ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ ನಡೆದ ಪಾರ್ಟಿಯಲ್ಲಿ ದರ್ಶನ್ ಮತ್ತು ಸುದೀಪ್ ಅನೇಕ ವರ್ಷಗಳ ನಂತರ ಒಂದೇ ವೇದಿಕೆಯನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.ನಿಜಾ, ಅವತ್ತು ಒಂದೇ ವೇದಿಕೆಯಲ್ಲಿದ್ದರೂ ಕೂಡ ಸುದೀಪ್ ಮತ್ತು ದರ್ಶನ್ ಮಾತನಾಡಿರಲಿಲ್ಲ. ಆದರೆ ವರ್ಷದ ಹಿಂದೆ ದರ್ಶನ್ ಮತ್ತು ಸುದೀಪ್ ಅವರ ಗೆಳೆತನ ಮತ್ತೆ ಕೂಡಿಕೊಳ್ಳುತ್ತದೆ ಎಂಬಂಥಾ ವಾತಾವರಣ ನಿರ್ಮಾಣವಂತೂ ಆಗಿತ್ತು. ಆದರೆ.. ಆ ವಾತಾವರಣ ವರ್ಷ ಕಳೆದರೂ ಇನ್ನೂ ಮೋಡ ಕವಿದಂತೆ ಇದೆ. ಯಾರಿಗೆ ಗೊತ್ತು ಪ್ರಶಾಂತ್ ಕಿಣಿ ಅವರು ಹೇಳಿದಂತೆ 2026ರಲ್ಲಿ ದರ್ಶನ್ ಮತ್ತು ಸುದೀಪ್ ಮುನಿಸು ಮರೆತು ಮತ್ತೆ ಒಂದಾದರು ಆಗಬಹುದು.


Click it and Unblock the Notifications











