ದರ್ಶನ್ -ಉಮಾಪತಿ ಮತ್ತೊಮ್ಮೆ ಮುಖಾಮುಖಿ ; 'ಯುಗಾದಿ'ಯಂದು ಬೆಂಕಿ ಸಮರ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಅವರ ನಡುವಿನ ಬಿಕ್ಕಟ್ಟಿನ ಕಥೆ ಎಲ್ಲವೂ ನಿಮಗೆ ಗೊತ್ತಿರುವುದೇ. 'ತಗಡು' ಹಾಗೂ 'ಗುಮ್ಮುಸ್ಕೋತಿಯಾ' ಪದಗಳಿಗೆ ಬೆಲೆ ಬಂದಿದ್ದೇ ಇವರಿಬ್ಬರಿಂದ.
ಕ್ರೆಡಿಟ್ ವಿಚಾರದಲ್ಲಿ ಕಾಲ್ ಕೆರ್ಕೊಂಡು ಪರಸ್ಪರ ಜಗಳಕ್ಕೆ ಇಳಿದಿದ್ದ ಇವರಿಬ್ಬರು ಈಗ ಪ್ರತಿಷ್ಠೆಯ ಕಣದಲ್ಲಿ ಇನ್ನೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹಾಗಂಥ ಆ ಕಣ ಚುನಾವಣೆಯದ್ದು ಅಂತ ಅಂದುಕೊಳ್ಳುವಂತೆ ಇಲ್ಲ. ಸಭೆ ಸಮಾರಂಭದಲ್ಲಿ ಇಬ್ಬರು ಎದುರು ಬದುರಾಗುತ್ತಾರೆ ಎಂದು ಊಹಿಸುವಂತೆ ಇಲ್ಲ. ಯಾಕೆಂದರೆ ಇಬ್ಬರು ಪರಸ್ಪರ ಎದುರಾಗುತ್ತಿರುವುದು ಕಿರುತೆರೆಯಲ್ಲಿ.

ಹೌದು. ಇನ್ನೇನು ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿವೆ. ಬೆಳ್ಳಿತೆರೆಯ ಕಥೆ ಗೊತ್ತಿಲ್ಲ. ಆದರೆ ಕಿರುತೆರೆಯಲ್ಲಿ ಆಗ್ಲೇ ಹಬ್ಬದ ವಾತಾವರಣ ಕಳೆಗಟ್ಟಿದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ವಾಹಿನಿಗಳು ಕೂಡ ಟೊಂಕ ಕಟ್ಟಿ ನಿಂತಿವೆ. ತಾವು ಖರೀದಿಸಿರುವ ಸಿನಿಮಾಗಳನ್ನ ಪ್ರಸಾರ ಮಾಡಿ ಭರ್ಜರಿ ಜಾಹೀರಾತು ಪಡೆಯುವ ಪ್ಲಾನುಗಳನ್ನೂ ಕೂಡ ಮಾಡಿಕೊಂಡಿವೆ. ಇದಕ್ಕೆ ಕೈಗನ್ನಡಿ ಎನ್ನುವಂತೆ 'ಜೀ ಕನ್ನಡ' 'ಕಾಟೇರ'ನನ್ನು 'ಯುಗಾದಿ'ಯಂದು ಕಣಕ್ಕಿಳಿಸುತ್ತಿದೆ. ಸಾಲು ಸಾಲು ದಾಖಲೆಗಳೊಂದಿಗೆ ಹೊಸ ಅಧ್ಯಾಯ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ 'ಕಾಟೇರ' ಅತೀ ಶೀಘ್ರದಲ್ಲಿ ಎಂಬ ಪ್ರೋಮೋವನ್ನೂ ಕೂಡ ಹರಿಬಿಟ್ಟಿದೆ. ವಿಶೇಷ ಅಂದರೆ ಅವತ್ತೇ ಅಂದರೆ 'ಯುಗಾದಿ' ಹಬ್ಬದಂದೇ 'ಉದಯ ಟಿವಿ'ಯಲ್ಲಿ 'ಉಪಾಧ್ಯಕ್ಷ' ಪ್ರಸಾರವಾಗಲಿದೆ.
ನಿಜಾ, 'ಉಪಾಧ್ಯಕ್ಷ'ನ ಪ್ರೋಮೋವನ್ನ 'ಉದಯ ಟಿವಿ' ಇನ್ನೂ ಅನಾವರಣಗೊಳಿಸಿಲ್ಲ. ಆದರೆ 'ಕಿರುತೆರೆ'ಯಲ್ಲಿ 'ಕಾಟೇರ' ಪ್ರಸಾರವಾಗುವ ದಿನದಂದೇ, 'ಉಪಾಧ್ಯಕ್ಷ' ಕೂಡ ಪ್ರಸಾರವಾಗಲಿದೆ ಎಂಬ ಮಾತು ಕಿರುತೆರೆಯಲ್ಲಿ ಸದ್ಯಕ್ಕೆ 'ಗುಲ್ಲಾಗಿದೆ'.

ಇನ್ನೂ ನಿಮಗೆ ಗೊತ್ತು ಇದು 'ಟಿ.ಆರ್.ಪಿ' ಯುಗ. ಯಾವ ಚಿತ್ರಕ್ಕೆ ಎಷ್ಟು 'ಟಿ.ಆರ್.ಪಿ' ಬಂತು ಅನ್ನುವ ಕುತೂಹಲ ಅವರ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ. ಹೀಗಾಗಿಯೇ ಯುಗಾದಿಯಂದು 'ಕಾಟೇರ' ಹಾಗೂ 'ಉಪಾಧ್ಯಕ್ಷ' ಮುಖಾಮುಖಿಯಾಗಲಿರುವ ಸುದ್ದಿ ಕೇಳಿ, ಸ್ಮಾಲ್ ಸ್ಕ್ರೀನ್ ಅಂಗಳದಲ್ಲಿಯೂ ಇವೆರಡು ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಎಷ್ಟು 'ಟಿ.ಆರ್.ಪಿ' ಬರಬಹುದು ಎನ್ನುವ ಲೆಕ್ಕಾಚಾರವನ್ನ ಅನೇಕರು ಹಾಕಲು ಶುರುಮಾಡಿದ್ದಾರೆ.
ಇನ್ನೂ ಎಲ್ಲರಿಗೂ ಗೊತ್ತು ಕರ್ನಾಟಕದಲ್ಲಿ ದರ್ಶನ್ ಅತ್ಯುತ್ತಮ ಟಿ.ಆರ್.ಪಿ ಮೆಟೀರಿಯಲ್ಲು. ಅದು ಸ್ವತಃ ದರ್ಶನ್ ಗೂ ಗೊತ್ತಿರುವ ವಿಚಾರ. ಈ ಕಾರಣಕ್ಕೆ 'ಕಾಟೇರ ವರ್ಸಸ್ ಉಪಾಧ್ಯಕ್ಷ'ನ ಈ ಕಿರುತೆರೆಯ ಸಮರ ಅನೇಕರ ಕಣ್ಣಿಗೆ ಈಗ ಕುತೂಹಲದ ಕೇಂದ್ರ ಬಿಂದುವಿನಂತೆ ಕಾಣುತ್ತಿದೆ.

ಅಂದ್ಹಾಗೇ 'ಕಾಟೇರ' ಹಾಗೂ 'ಉಪಾಧ್ಯಕ್ಷ' ಎರಡು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ 'ಗೆದ್ದು' ಬೀಗಿದ್ದ ಸಿನಿಮಾಗಳೇ. 2023ರಲ್ಲಿನ ಕೆಟ್ಟ ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ 2024ರ ಆರಂಭದಲ್ಲಿ 'ಗುಟುಕು' ಜೀವ ಕೊಟ್ಟ ಚಿತ್ರಗಳಿವು. ಇನ್ನೂ.. ಕಿರುತೆರೆ ಹಾಗೂ ಚಿತ್ರರಂಗದ ಸಂಬಂಧ ಅನುಬಂಧದ ವಿಚಾರಕ್ಕೆ ಬಂದರೆ, ಇತ್ತೀಚೆಗೆ 'ಸ್ಯಾಟ್ ಲೈಟ್' ಹಕ್ಕುಗಳನ್ನ ವಾಹಿನಿಗಳು ಖರೀದಿ ಮಾಡುತ್ತಿಲ್ಲ ಅನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರ್ತಾನೆ ಇದೆ. ಇದಕ್ಕೆ ಸಾಕ್ಷಿಅನ್ನುವಂತೆ ಸ್ಟಾರ್ ಗಳ ಸಿನಿಮಾ ಹೊರತು ಪಡಿಸಿದರೆ ಹೊಸಬರ ಅನೇಕ ಸಿನಿಮಾಗಳು 'ವ್ಯಾಪಾರ'ವಾಗದೇ ಹಾಗೇ ಕುಳಿತಿವೆ. ಹೀಗಾಗಿಯೇ 'ಕಾಟೇರ' ಹಾಗೂ 'ಉಪಾಧ್ಯಕ್ಷ' ಸಿನಿಮಾಗಳು ವಾಹಿನಿಗಳಿಗೆ ಮಾಡಿಕೊಡುವ 'ಸಂಪಾದನೆ' ಮೇಲೆ ಸ್ಯಾಂಡಲ್ವುಡ್ಡಿನ 'ಸ್ಯಾಟ್ ಲೈಟ್ ಭವಿಷ್ಯ' ಕೂಡ ನಿಂತಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗ್ತಿದೆ.

ಯಾಕೆಂದರೆ ಬಾಕ್ಸಾಫೀಸ್ ನಲ್ಲಿ ಗೆದ್ದ ಈ ಎರಡು ಸಿನಿಮಾಗಳು ಗಳಿಕೆ ಮಾಡಿಕೊಟ್ಟರೆ ಬಹುಶಃ ಮತ್ತೆ ವಾಹಿನಿಗಳು ಇತರೆ ಚಿತ್ರಗಳನ್ನು ಖರೀದಿಸಲು ವ್ಯಾಪಾರ ಶುರುಮಾಡಬಹುದು ಅನ್ನುವ ಆಲೋಚನೆ ಅನೇಕರದ್ದು. ಏನೇ ಇರಲಿ ಸದ್ಯಕ್ಕೆ ಕಾಟೇರ ಹಾಗೂ ಉಪಾಧ್ಯಕ್ಷ ಎರಡು ಸಿನಿಮಾಗಳು ಯುಗಾದಿಯಂದು ಕಿರುತೆರೆಯಲ್ಲಿ ಪ್ರಸಾರವಾಗಲಿವೆ. ಎರಡು ಸಿನಿಮಾಗಳಿಗೂ ಎಷ್ಟು ಟಿ.ಆರ್.ಪಿ ಬರಲಿದೆ ಅನ್ನುವುದು ಸದ್ಯದ ಯಕ್ಷ ಪ್ರಶ್ನೆ. ಉತ್ತರ ಸದ್ಯದಲ್ಲಿಯೇ ಗೊತ್ತಾಗಲಿದೆ.


Click it and Unblock the Notifications











