ದುಬೈ ಫ್ಯಾನ್ಸ್ ಜೊತೆ ದರ್ಶನ್- ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಸಂಭ್ರಮ
ಕನ್ನಡ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಇತ್ತೀಚೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದಂಪತಿಗೆ ಶುಭ ಕೋರಿದ್ದರು. 2003 ಮೇ 10 ಹಾಗೂ 19ರಂದು ದರ್ಶನ್-ವಿಜಯಲಕ್ಷ್ಮಿ ಮದುವೆ ಧರ್ಮಸ್ಥಳದಲ್ಲಿ ನಡೆದಿತ್ತು.
ದರ್ಶನ್ ಹೀರೊ ಆಗಿ ಸಕ್ಸಸ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಕೈ ಹಿಡಿದಿದ್ದರು. ಅಂದು ಚಿತ್ರರಂಗದ ಕೆಲವೇ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. 'ಲಂಕೇಶ್ ಪತ್ರಿಕೆ' ಸಿನಿಮಾ ಬಿಡುಗಡೆ ಬೆನ್ನಲ್ಲೇ ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ವಿನೀಶ್ ಎನ್ನುವ ಒಬ್ಬ ಮಗನಿದ್ದಾನೆ. ವಿನೀಶ್ ಕೂಡ ತಂದೆಯ ಎರಡು ಸಿನಿಮಾಗಳಲ್ಲಿ ಮಿಂಚಿದ್ದಾನೆ.

21 ವರ್ಷಗಳ ಹಿಂದೆ ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ಇಬ್ಬರ ಮದುವೆ ನಡೆದಿತ್ತು. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ನಟ ದರ್ಶನ್ ಮಾಂಗಲ್ಯಧಾರಣೆ ಮಾಡಿದ್ದರು. ಇತ್ತೀಚೆಗೆ ಧರ್ಮಸ್ಥಳದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದರ್ಶನ್ ಭಾಗಿ ಆಗಿದ್ದರು. ಆ ಸಮಯದಲ್ಲಿ ತಮ್ಮ ಮದುವೆ ನಡೆದಿದ್ದನ್ನು ನೆನಪಿಸಿಕೊಂಡಿದ್ದರು.
ಈ ಬಾರಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದುಬೈನಲ್ಲಿ ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ನೆಚ್ಚಿನ ಜೋಡಿಗೆ ಶುಭ ಕೋರಿದ್ದಾರೆ. ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ದರ್ಶನ್ ಫ್ಯಾಮಿಲಿ ಸಮೇತ ದುಬೈಗೆ ಹೊರಟಿದ್ದ ವಿಡಿಯೋ ವೈರಲ್ ಆಗಿತ್ತು.

ದುಬೈನಲ್ಲಿ ನಟ ದರ್ಶನ್ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಕಾಟೇರ' ಸಿನಿಮಾ ಪ್ರೀಮಿಯರ್ ಶೋಗೆ ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ದುಬೈ ಕನ್ನಡಿಗರು 'ಕರುನಾಡ ಅಧಿಪತಿ' ಎನ್ನುವ ಬಿರುದು ಕೊಟ್ಟಿದ್ದರು. ಈ ಹಿಂದೆ ಕೂಡ ಹಲವು ಬಾರಿ ಚಾಲೆಂಜಿಂಗ್ ಸ್ಟಾರ್ ದುಬೈಗೆ ಹೋಗಿ ಬಂದಿದ್ದಾರೆ.
ಇದಕ್ಕೂ ಮುನ್ನ ಮಗನ ಜೊತೆ ವಿಜಯಲಕ್ಷ್ಮಿ ದುಬೈ ಪ್ರವಾಸಕ್ಕೆ ಹೋಗಿದ್ದ ಫೋಟೊಗಳನ್ನು ಹಂಚಿಕೊಂಡಿದ್ದರು. ಕಳೆದೆರಡು ದಶಕಗಳಲ್ಲಿ ನಟ ದರ್ಶನ್ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಕನ್ನಡ ಚಿತ್ರರಂಗದ ನಂಬರ್ ವನ್ ಹೀರೋ ಆಗಿ ಮರೆಯುತ್ತಾ ಬರುತ್ತಿದ್ದಾರೆ. ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದಲೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಕೈಗೆ ಪೆಟ್ಟಾಗಿತ್ತು. 'ಡೆವಿಲ್' ಸಿನಿಮಾ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದರು. ಬಳಿಕ ಎಡಗೈಗೆ ಸರ್ಜರಿ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 'ಡೆವಿಲ್' ಚಿತ್ರದ 2ನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದೆ. ಆದರೆ ಇನ್ನು ನಟ ದರ್ಶನ್ ಭಾಗಿ ಆಗಿಲ್ಲ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಸೇರಿದಂತೆ ಬೇರೆ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶೀಘ್ರದಲ್ಲೇ ದರ್ಶನ್ ಕೂಡ ಕ್ಯಾಮರಾ ಮುಂದೆ ನಿಲ್ತಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
'ಡೆವಿಲ್' ಚಿತ್ರವನ್ನು ಈ ವರ್ಷವೇ ತೆರೆಗೆ ತರುವ ಪ್ರಯತ್ನ ನಡೀತಿದೆ. ಮಿಲನಾ ಪ್ರಕಾಶ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











