ಮತ್ತೆ ಚುನಾವಣೆ ಅಖಾಡಕ್ಕೆ ದರ್ಶನ್-ಯಶ್? ಯಾರ ಪರ ಪ್ರಚಾರ?
ನಟ ದರ್ಶನ್ ಮತ್ತು ಯಶ್ ಚುನಾವಣೆ ಅಖಾಡಕ್ಕೆ ಒಟ್ಟಾಗಿ ಧುಮುಕಿ ದೇಶವೇ ತಿರುಗಿ ನೋಡಿದಂತಹಾ ಜಯದ ಭಾಗವಾಗಿದ್ದು ಎಲ್ಲರಿಗೂ ಗೊತ್ತಿರುವಂತಹುದೇ. ಹೊಸ ಸುದ್ದಿಯೆಂದರೆ ಈ ಜೋಡಿ ಮತ್ತೆ ಒಂದಾಗುತ್ತಿದೆ ಎಂಬುದು.
ನಟ ದರ್ಶನ್ ಹಾಗೂ ಯಶ್ ಮತ್ತೆ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂಬ ದಟ್ಟ ಸುದ್ದಿ ಹರಿದಾಡುತ್ತಿದೆ. ಇದೀಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಉಪಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಪರವಾಗಿ ಈ ಇಬ್ಬರು ಚುನಾವಣೆ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಖ್ಯಾತ ನಿರ್ಮಾಪಕ, ರಾಜಕಾರಣಿ ಮುನಿರತ್ನ ಆರ್ಆರ್ ನಗರ ಉಪಚುನಾವಣೆಗೆ ಸ್ಪರ್ಧಿಸಿದ್ದು, ಮುನಿರತ್ನಗೆ ನಟ ದರ್ಶನ್ ಹಾಗೂ ಯಶ್ ಇಬ್ಬರೂ ಸಹ ಬಹು ಆಪ್ತರು. ಹಾಗಾಗಿ ಮುನಿರತ್ನ ಪರ ಚುನಾವಣೆ ಪ್ರಚಾರಕ್ಕೆ ಇವರೀರ್ವರೂ ಬರುತ್ತಾರೆ ಎನ್ನಲಾಗುತ್ತಿದೆ.

ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಪಾತ್ರ
ಮುನಿರತ್ನ ಅವರ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ನಾಯಕ ನಟನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಹೊರತಾಗಿಯೂ ಇಬ್ಬರ ನಡುವೆ ಉತ್ತಮ ಆತ್ಮೀಯತೆ ಇದೆ. ಹಾಗಾಗಿ ಮುನಿರತ್ನ ಅವರ ಪರವಾಗಿ ದರ್ಶನ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಯಶ್ ಸಹ ಮುನಿರತ್ನ ಆಪ್ತ ಎನ್ನಲಾಗುತ್ತಿದೆ.

ಸುಮಲತಾ ಪರ ಪ್ರಚಾರ ಮಾಡಿದ್ದ ತಾರಾ ಜೋಡಿ
ಈ ಹಿಂದೆ ದರ್ಶನ್ ಹಾಗೂ ಯಶ್ ಜೋಡಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರವಾಗಿ ಸತತ ಪ್ರಚಾರ ಮಾಡಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಸುಮಲತಾ ಅಭೂತಪೂರ್ವ ಗೆಲುವು ಸಾಧಿಸಿದರು. ಕುಮಾರಸ್ವಾಮಿ ಪುತ್ರ ನಿಖಿಲ್ ಸೋಲು ಕಂಡರು.

ಪ್ರಚಾರಕ್ಕೆ ಬಂದರೆ ಮುನಿರತ್ನಗೆ ಗೆಲುವು?
ಈ ಇಬ್ಬರೂ ಮತ್ತೆ ಚುನಾವಣೆ ಪ್ರಚಾರ ಮಾಡಿದರೆ ಮುನಿರತ್ನಗೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಇಬ್ಬರಿಗೂ ಅಸಂಖ್ಯ ಅಭಿಮಾನಿಗಳಿದ್ದು, ಇಬ್ಬರೂ ಸ್ಟಾರ್ ನಟರು ಮುನಿರತ್ನ ಪರ ಪ್ರಚಾರಕ್ಕೆ ಇಳಿದರೆ ಎದುರಾಳಿಗಳಿಗೆ ಸಂಕಷ್ಟ ಗ್ಯಾರೆಂಟಿ. ಕಾಂಗ್ರೆಸ್ ಪರವಾಗಿ ಡಿ.ಕೆ.ರವಿ ಪತ್ನಿ ಕುಸುಮಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.
Recommended Video

ಪ್ರೇಮ್ ಮನೆಗೆ ಡಿಕೆಶಿ ಭೇಟಿ
ಇನ್ನು ಡಿ.ಕೆ.ಶಿವಕುಮಾರ್ ಅವರು ಇಂದು ನಟ ನೆನಪಿರಲಿ ಪ್ರೇಮ್ ನಿವಾಸಕ್ಕೆ ಭೇಟಿ ನೀಡಿದ್ದರು. ಅವರನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಆಹ್ವಾನಿಸಲೆಂದೇ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ ಎನ್ನುವ ಸುದ್ದಿಯೂ ಇದೆ.


Click it and Unblock the Notifications











