ಪ್ರಚಾರದ ವೇಳೆ ದರ್ಶನ್ ಗೆ ಮಹಿಳಾ ಅಭಿಮಾನಿಯಿಂದ ಸರ್ಪ್ರೈಸ್
ಮಂಡ್ಯ ಅಖಾಡಕ್ಕೆ ಅಧಿಕೃತವಾಗಿ ಧುಮುಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಶ್ರೀರಂಗಪಟ್ಟಣ ಸುತ್ತಮುತ್ತಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿದ್ರು.
ಧಗಧಗ ಎಂದು ಬಿಸಿಲು ಸುಡುತ್ತಿದ್ದರೂ ಇದ್ಯಾವುದನ್ನ ಲೆಕ್ಕಸಿದ ದಾಸ, ಸುಮಮ್ಮನ ಪರ ಮತಯಾಚನೆ ಮಾಡಿದ್ರು. ನೆಚ್ಚಿನ ಸ್ಟಾರ್ ನಟ ಬರ್ತಿದ್ದಾರೆ ಎಂದು ರಸ್ತೆ ಉದ್ದಕ್ಕೂ ಅಭಿಮಾನಿಗಳು ಸುಡುಬಿಸಿಲಿನಲ್ಲಿ ನಿಂತು ಭರ್ಜರಿ ಸ್ವಾಗತ ಮಾಡಿದರು.
ದರ್ಶನ್ ಹೋದ ಕಡೆಯಲ್ಲೆಲ್ಲಾ 'ಡಿ ಬಾಸ್' ಎಂಬ ಘೋಷಣೆಗಳು ಜೋರಾಗಿ ಮೊಳಗುತ್ತಿದ್ದವು. ಈ ನಡುವೆ ಹಳ್ಳಿಯೊಂದರಲ್ಲಿ ದರ್ಶನ್ ಅವರ ಮಹಿಳಾ ಅಭಿಮಾನಿಯೊಬ್ಬರು, ಚಾಲೆಂಜಿಂಗ್ ಸ್ಟಾರ್ ಗೆ ಸರ್ಪ್ರೈಸ್ ಒಂದನ್ನ ನೀಡಿ ಗಮನ ಸೆಳೆದರು. ಏನದು? ಮುಂದೆ ಓದಿ.....

ಕವನ ಬರೆದು ಓದಿದ ಅಭಿಮಾನಿ
ಮಂಡ್ಯದ ಹಳ್ಳಿಯೊಂದರಲ್ಲಿ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾಗ, ಕೆಲವು ಮಹಿಳಾ ಅಭಿಮಾನಿಗಳು ಡಿ ಬಾಸ್ ಅವರಲ್ಲಿ ಕೋರಿಕೆಯೊಂದನ್ನ ಇಟ್ಟರು. ತಮ್ಮ ಬಗ್ಗೆ ಒಂದು ಕವನ ಬರೆದಿದ್ದು, ಅದನ್ನ ಓದುತ್ತೇನೆ ಎಂದು ಕೇಳಿಕೊಂಡರು. ಅದಕ್ಕೆ ದರ್ಶನ್ ಕೂಡ ಸಮ್ಮತಿ ಸೂಚಿಸಿದರು. ನಂತರ ದರ್ಶನ್ ಅವರಿದ್ದ ವಾಹನವೇರಿದ ಆ ಮಹಿಳಾ ಅಭಿಮಾನಿ ದಾಸನ ಬಗ್ಗೆ ಒಂದು ಕವನ ಹೇಳಿಯೇಬಿಟ್ಟರು. ಇದನ್ನ ಕೇಳಿದ ದರ್ಶನ್ ಥ್ಯಾಂಕ್ಸ್ ಹೇಳಿ ಫೋಟೋಗೆ ಪೋಸ್ ಕೊಟ್ಟರು.

ತಂಬಿಟ್ಟು ತಿಂದ ದರ್ಶನ್
ಹೀಗೆ ಮುಂದೆ ಗ್ರಾಮವೊಂದರಲ್ಲಿ ಪ್ರಚಾರ ಮಾಡುತ್ತಿದ್ದ ಹಳ್ಳಿಯಲ್ಲಿ ತಂಬಿಟ್ಟು ಮಾಡಿರುವ ಬಗ್ಗೆ ದರ್ಶನ್ ಗೆ ಮಾಹಿತಿ ಸಿಕ್ತು. ಆಗ ವಾಹನದಲ್ಲಿ ಭಾಷಣ ಮಾಡುತ್ತಿದ್ದ ದರ್ಶನ್, ನನಗೂ ತಂಬಿಟ್ಟು ಕೊಟ್ರೆ ಹಾಗೆ ತಿನ್ಕೊಂಡು ಹೋಗ್ತೀನಿ ಅಂದ್ರು. ಆಗ ಕೂಡಲೇ ಅಲ್ಲೊಬ್ಬರು ದರ್ಶನ್ ಅವರಿಗೆ ತಂಬಿಟ್ಟು ತಂದುಕೊಟ್ಟರು. ಅದನ್ನ ತಗೊಂಡು ಬಾಯಿಗೆ ಹಾಕ್ಕೊಂಡು ದರ್ಶನ್ ಪ್ರಚಾರ ಮುಂದುವರಿಸಿದರು.

ಅಲ್ಲಲ್ಲಿ ಸೆಲ್ಫಿಗೆ ಪೋಸ್
ಇನ್ನು ಪ್ರಚಾರದ ನಡುವೆ ಹೂವಿನ ಹಾರಗಳನ್ನ ಹಾಕಲು ಅಭಿಮಾನಿಗಳು ವಾಹನ ಏರಿ ಮೇಲೆ ಬರುತ್ತಿದ್ದರು. ಅದನ್ನ ಪ್ರೀತಿಯಿಂದ ಸ್ವೀಕರಿಸುತ್ತಿದ್ದ ದರ್ಶನ್, ಅವರ ಸೆಲ್ಫಿಗೆ ಪೋಸ್ ಕೂಡ ಕೊಟ್ಟರು. ಅನೇಕ ಕಡೆ ಮಕ್ಕಳು, ಮಹಿಳಾ ಅಭಿಮಾನಿಗಳು ದರ್ಶನ್ ಜೊತೆ ಫೋಟೋ ತೆಗಿಸಿಕೊಂಡರು.

ಇಂದು ಎತ್ತಿನ ಗಾಡಿಯಲ್ಲಿ ಪ್ರಚಾರ
ನಿನ್ನೆ ತೆರೆದ ವಾಹನದಲ್ಲಿ ಪ್ರಚಾರ ಮಾಡಿದ್ದ ದರ್ಶನ್, ಇಂದು ಎತ್ತಿನ ಗಾಡಿಯಲ್ಲಿ ತಮ್ಮ ಎರಡನೇ ದಿನ ಪ್ರಚಾರ ಆರಂಭಿಸಿದರು. ಇಂದು ಕೂಡ ಸಾಕಷ್ಟು ಅಭಿಮಾನಿಗಳು ಡಿ ಬಾಸ್ ಗೆ ಸಾಥ್ ನೀಡಿ, ಜೈಕಾರ ಹಾಕಿದರು.


Click it and Unblock the Notifications











