ಮತ್ತೆ ಕ್ಯಾಮರಾ ಹಿಡಿದು ಕಾಡಿಗೆ ಹೊರಟ ದರ್ಶನ್; ಹುಲಿ ಸೆರೆಹಿಡಿಯುತ್ತಿರುವ ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಕೆಲಸಗಳ ನಡುವೆಯೂ ದರ್ಶನ್ ಆಗಾಗ ಪ್ರಾಣಿ ಮತ್ತು ಪಕ್ಷಿಗಳ ಜೊತೆಯೂ ಕಾಲಕಳೆಯುತ್ತಿರುತ್ತಾರೆ. ಜೊತೆಗೆ ದರ್ಶನ್ ಅವರಿಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದರೆ ತುಂಬ ಇಷ್ಟ. ಆಗಾಗ ಬಿಡುವಿದ್ದಾಗಲೆಲ್ಲ ಚಾಲೆಂಜಿಂಗ್ ಸ್ಟಾರ್ ಕ್ಯಾಮರಾ ಹೆಗಲಿಗೇರಿಸಿಕೊಂಡು ಪ್ರಾಣಿ, ಪಕ್ಷಿಗಳನ್ನು ಸೆರೆಹಿಡಿಯಲು ಕಾಡಿಗೆ ಹೋಗುತ್ತಿರುತ್ತಾರೆ.
ಇದೀಗ ದರ್ಶನ್ ನಾಗರಹೊಳೆ ಅರಣ್ಯದಲ್ಲಿ ಬೀಡುಬಿಟ್ಟಿದ್ದಾರೆ. ದರ್ಶನ್ ನಾಗರಹೊಳೆ ಅರಣ್ಯದಲ್ಲಿ ಹುಲಿಯನ್ನು ಸೆರೆಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್ ನಾಗರಹೊಳೆಗೆ ಎಂಟ್ರಿ ಕೊಡುತ್ತಿದ್ದಂತೆ, ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಇದು ಕಾಡು, ಅರ್ಥಮಾಡಿಕೊಳ್ಳಿ ಎಂದು ಹೇಳಿ ಅಭಿಮಾನಿಗಳನ್ನು ಸಮಾಧಾನ ಪಡಿಸಿದರು.

ಅಂದಹಾಗೆ ಈ ಹಿಂದೆ 2019ರಲ್ಲಿ ಕೀನ್ಯಾಗೆ ಭೇಟಿ ನೀಡಿದ್ದ ದರ್ಶನ್ ಕೀನ್ಯಾದ ಅರಣ್ಯದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸೆರೆಹಿಡಿದಿದ್ದರು. ಆ ನಂತರ ಉತ್ತರಾಖಂಡ ರಾಜ್ಯದ ಸತ್ತಾಲ್ ಗೆ ಭೇಟಿ ನೀಡಿದ್ದರು. ಸತ್ತಾಲ್ ನ ಸುಂದರ ತಾಣಗಳಲ್ಲಿ ಕ್ಯಾಮರಾ ಜೊತೆ ಸುತ್ತಾಡಿದ್ದ ದರ್ಶನ್ ಪಕ್ಷಿಗಳನ್ನು ಸೆರೆ ಹಿಡಿದಿದ್ದರು. ಇದೀಗ ನಾಗರಹೊಳೆಯಲ್ಲಿ ಬೀಡುಬಿಟ್ಟಿದ್ದಾರೆ.

ಇನ್ನು ದರ್ಶನ್ ಸದ್ಯ ಯಾವುದೇ ಸಿನಿಮಾದ ಚಿತ್ರೀಕರಣದಲ್ಲಿ ಇನ್ನು ಭಾಗಿಯಾಗಿಲ್ಲ. ಲಾಕ್ ಡೌನ್ ಬಳಿಕ ಡಿ ಬಾಸ್ ಯಾವ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೂ ಹೊರಟಿಲ್ಲ. ಸದ್ಯ ರಾಬರ್ಟ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಮಾರ್ಚ್ 11ರಂದು ತೆರೆಗೆ ಬರುತ್ತಿದೆ.


Click it and Unblock the Notifications










