'ರಾಬರ್ಟ್' ಸೆಟ್ ನಲ್ಲಿ ಸುಮಲತಾ ಗೆಲುವಿನ ಸಂಭ್ರಮಾಚರಣೆ
Recommended Video
ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ ಕ್ಷೇತ್ರವಾಗಿತ್ತು. ಮತ ಎಣಿಕೆಯ ಕೊನೆಯವರೆಗು ಜನರ ಚಿತ್ತ ಸೆಳೆದಿದ್ದ ಮಂಡ್ಯದಲ್ಲಿ ಅಂತಿಮವಾಗಿ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದಾರೆ. ಸುಮಲತಾ ಅಭೂತಪೂರ್ವ ಗೆಲುವಿನ ಕಾರಣಗಳಲ್ಲಿ ಜೋಡೆತ್ತುಗಳ ಪಾತ್ರ ಕೂಡ ಪ್ರಮುಖವಾಗಿದೆ.
ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಡಿ ಬಾಸ್ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಮಲತಾ ಗೆಲುವುಗೆ ಕಾರಣರಾದ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರೀಕರಣದ ಬ್ಯುಸಿಯ ನಡುವೆಯು ಸುಮಲತಾ ಪರ ನಿಂತು ಮಂಡ್ಯದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು ದರ್ಶನ್ ಮತ್ತು ಯಶ್.
ವಿರೋಧಿಗಳಿಂದ ಅನೇಕ ಟೀಕೆ, ಅವಮಾನಗಳನ್ನು ಧೈರ್ಯವಾಗಿಯೆ ಎದುರಿಸಿ, ಇದಕ್ಕೆಲ್ಲ ಫಲಿತಾಂಶದ ಉತ್ತರ ಕೊಡುತ್ತೆ ಅಂತ ಸೈಲೆಂಟ್ ಆಗಿಯೆ ಇದ್ದರು. ಈಗ ಅದರಂತೆ ಗೆದ್ದು ಬೀಗುವು ಮೂಲಕ ಅಣಕಿಸಿದವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಸುಮಲತಾ ಗೆಲುವಿನ ಸಂಭ್ರಮವನ್ನು ಡಿ ಬಾಸ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಮುಂದೆ ಓದಿ..

ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವು ಪಡೆದ ಖುಷಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇಕ್ ಕತ್ತರಿಸಿ ಸಂಭ್ರಮ ಪಟ್ಟಿದ್ದಾರೆ. ಸುಮಲತಾ ಗೆಲುವು ಪಡೆಯುತ್ತಿದ್ದಂತೆ ದರ್ಶನ್ ಮಂಡ್ಯ ಜನರಿಗೆ ಧನ್ಯವಾದ ತಿಳಿಸಿದ್ದರು. ಅಷ್ಟೆಯಲ್ಲದೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಆಚರಿಸಿದ್ದಾರೆ. 'ಅಭಿನಂದನೆಗಳು ಅಮ್ಮ' ಎಂದು ಬರೆದಿರುವ ಕೇಕ್ ಅನ್ನು ಕತ್ತರಿಸಿ ಸಂತಸ ಪಟ್ಟಿದ್ದಾರೆ.

ರಾಬರ್ಟ್ ಸೆಟ್ ನಲ್ಲಿ ದರ್ಶನ್
ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಾಂಡಿಚರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದ ನಡುವೆಯೂ ಸೆಟ್ ನಲ್ಲಿಯೆ ದರ್ಶನ್ ಮತ್ತು ಚಿತ್ರತಂಡ ಕೇಕ್ ಕತ್ತರಿಸಿ ಗೆಲುವಿನ ಖುಷಿನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಸಾಯುವವರೆಗೂ ಚಿರಋಣಿ ಆಗಿರುತ್ತೇನೆ
ಸುಮಲತಾ ಅವರನ್ನು ಗೆಲ್ಲಿಸಲೆ ಬೇಕೆಂದು ಪಣತೊಟ್ಟು ನಿಂತು ಪ್ರಚಾರ ಮಾಡಿದ್ದರು ದರ್ಶನ್. ಕೊನೆಗೂ ಅವರಿಗೆ ವಿಜಯ ದಕ್ಕಿದೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ಜೊತೆಗೆ ಮಂಡ್ಯ ಜನತೆರೆ ಧನ್ಯವಾದ ತಿಳಿಸಿದ್ದಾರೆ ''ಅಮ್ಮನಿಗೆ ಈ ದೊಡ್ಡ ಗೆಲುವು ನೀಡಿದ್ದೀರಿ. ಇದಕ್ಕೆ ಸಾಯುವವರೆಗೂ ಚಿರಋಣಿ ಆಗಿರುತ್ತೇವೆ. ಅವತ್ತು ಅದೇ ಮಾತನ್ನು ಹೇಳಿದ್ದೆ, ಇವತ್ತು ಅದೇ ಮಾತು ಹೇಳ್ತಾ ಇದ್ದೀನಿ.'' ಎಂದಿದ್ದಾರೆ.
ಗೆಲುವನ್ನು ಜೋಪಾನವಾಗಿ ಕಾಪಾಡುತ್ತಾರೆ
"ನೀವು ತೋರಿಸಿದ ಪ್ರೀತಿಗೆ ಪದಗಳು ಬರುವುದಿಲ್ಲ. ನೀವು ಕೊಟ್ಟ ಈ ಗೆಲುವನ್ನು ಅಮ್ಮ ತುಂಬ ಜೋಪಾನವಾಗಿ ಕಾಪಾಡುತ್ತಾರೆ. ನಿಮ್ಮೆಲ್ಲರಿಗೆ ಅವರ ಕೈಲಾದ ಕೆಲವನ್ನು ಐದು ವರ್ಷದಲ್ಲಿ ಮಾಡುತ್ತಾರೆ. ಮತ ಹಾಕಿದ ಎಲ್ಲ ದೇವರಿಗೆ ಧನ್ಯವಾದಗಳು. ನಿಮ್ಮೆಲ್ಲರಿಗೂ ತುಂಬ ತುಂಬ ತುಂಬ ಧನ್ಯವಾದಗಳು.'' ಎಂದು ಹೇಳುವ ಮೂಲಕ ಇಡೀ ಮಂಡ್ಯದ ಜನರಿನ್ನು ದರ್ಶನ್ ನೆನೆದರು.

ಕುತೂಹಲ ಮೂಡಿಸಿದೆ ಯಶ್ ಪ್ರತಿಕ್ರಿಯೆ
ಸುಮಲತಾ ಪರ ನಿಂತು ರಾಕಿಂಗ್ ಸ್ಟಾರ್ ಯಶ್ ಕೂಡ ಅಬ್ಬರದ ಪ್ರಚಾರ ಮಾಡಿದ್ದರು. ಸುಮಲತಾ ಅವರನ್ನು ಗೆಲ್ಲಿಸಲೆಬೇಕೆಂದು ಯಶ್ ಪಣತೊಟ್ಟಿದ್ದರು. ಗೆಲುವು ಈಗ ಅವರಂತೆಯೆ ಆಗಿದೆ. ಈ ಬಗ್ಗೆ ರಾಕಿಂಗ್ ಸ್ಟಾರ್ ಏನು ಹೇಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಲ್ಲಿದೆ. ಸದ್ಯ ಯಶ್ ಕೆಜಿಎಫ್ ಚಿತ್ರೀಕಣದಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೂ ಯಶ್ ಯಾವ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸುಮಲತಾ ಗೆಲುವನ್ನು ಹೇಗೆ ಸಂಭ್ರಮಿಸಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿರುವ ಸುಮಲತಾ
ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟು ಮೊದಲ ಗೆಲುವು ಪಡೆದಿರುವ ಸುಮಲತಾ ಪತಿ ಅಂಬರೀಶ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರಂತೆ. ನೂತನ ಸಂಸದೆಯಾಗಿರುವ ಸುಮಲತಾ ಮೊದಲು ಪತಿಯ ಸಮಾಧಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿ ಆ ನಂತರ ಮುಂದಿನ ಕೆಸಗಳಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.


Click it and Unblock the Notifications











