'ಮೆಜೆಸ್ಟಿಕ್' ಸಿನಿಮಾ ಸಿಕ್ಕಿದ್ದು ಯಾರಿಂದ? ಗೊಂದಲಗಳಿಗೆ ತೆರೆ ಎಳೆದ ದರ್ಶನ್
ಇಂದು ಕನ್ನಡದ ಸ್ಟಾರ್ ನಟರಾಗಿ ಮೆರೆಯುತ್ತಿರುವ ದರ್ಶನ್ಗೆ ಈ ಸ್ಟಾರ್ ಗಿರಿ ಧಕ್ಕಲು ಕಾರಣವಾದ ಸಿನಿಮಾ 'ಮೆಜೆಸ್ಟಿಕ್'. ಈ ಸಿನಿಮಾ ಮೂಲಕ ನಾಯಕ ನಟನಾಗಿ ಪರಿಚಯವಾದ ದರ್ಶನ್ ಅಂದಿನಿಂದಲೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ.
Recommended Video
'ಮೆಜೆಸ್ಟಿಕ್' ಸಿನಿಮಾ ಬಿಡುಗಡೆ ಆಗಿ 20 ವರ್ಷಗಳು ಕಳೆದಿವೆ. ಇದೇ ಸುಸಂದರ್ಭದಲ್ಲಿ 'ಮೆಜೆಸ್ಟಿಕ್' ಸಿನಿಮಾದ ಮರು ಬಿಡುಗಡೆ ಆಗುತ್ತಿದೆ.
'ಮೆಜೆಸ್ಟಿಕ್' ಸಿನಿಮಾವನ್ನು ದರ್ಶನ್ಗೆ ಕೊಡಿಸಿದ್ದು ಯಾರು? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಚಂದನವನದ ಆಪ್ತ ಗೆಳೆಯರಾಗಿದ್ದ ದರ್ಶನ್ ಹಾಗೂ ಸುದೀಪ್ ಪರಸ್ಪರ ಬೇರೆಯಾಗಲು ಸಹ ಇದೇ ವಿಷಯ ಕಾರಣವಾಗಿತ್ತು. ಬಹು ವರ್ಷಗಳ ಬಳಿಕ ಇದೀಗ ದರ್ಶನ್ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದಾರೆ.
'ಮೆಜೆಸ್ಟಿಕ್' ಸಿನಿಮಾ 20 ವರ್ಷ ಪೂರೈಸಿದ ಖುಷಿಯನ್ನು ಹಂಚಿಕೊಳ್ಳಲೆಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದರು.
''ಮೆಜೆಸ್ಟಿಕ್' ಸಿನಿಮಾವನ್ನು ನನಗೆ ಯಾರು ಕೊಡಿಸಿದರು ಅಥವಾ ಸಜೆಸ್ಟ್ ಮಾಡಿದರು ಎಂಬ ಬಗ್ಗೆ ಸಾಕಷ್ಟು ಊಹಾಪೋಹ ಇದೆ. ಅದಕ್ಕೆ ಇಂದು ಫುಲ್ಸ್ಟಾಪ್ ಇಡಲು ನಿಶ್ಚಯ ಮಾಡಿದ್ದೇನೆ. 'ಮೆಜೆಸ್ಟಿಕ್' ಅನ್ನು ಅವರು ಕೊಡಿಸಿದರು, ಇವರು ಕೊಡಿಸಿದರು ಎಂಬುದೆಲ್ಲ ಸುಳ್ಳು'' ಎಂದು ದರ್ಶನ್ ತಮಗೆ 'ಮೆಜೆಸ್ಟಿಕ್' ಸಿನಿಮಾ ಸಿಕ್ಕಿಂದು ಯಾರಿಂದ ಎಂದು ಸ್ಪಷ್ಟಪಡಿಸಿದರು.

ಅಣಜಿ ನಾಗರಾಜ್ ನನಗೆ ಕರೆ ಮಾಡಿ ಹೇಳಿದ: ದರ್ಶನ್
''ಅಣಜಿ ನಾಗರಾಜ್ ಒಂದು ಮಧ್ಯಾಹ್ನ ನನಗೆ ಫೋನ್ ಮಾಡಿದರು. ಬ್ರೇಕ್ ಟೈಮ್ನಲ್ಲಿ ಪ್ರಜ್ವಲ್ ಲಾಡ್ಜ್ಗೆ ಹೋಗು ರೂಂ ನಂಬರ್ 20, ನಿರ್ದೇಶಕ ಪಿ.ಎನ್.ಸತ್ಯ ಇರ್ತಾರೆ ಅಂದ. ಆಗ ನಾನು ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಮಧ್ಯ ಸಮಯ ಮಾಡಿಕೊಂಡು ಲಾಡ್ಜ್ಗೆ ಹೋದೆ ಅಲ್ಲಿ ಸತ್ಯ ಇದ್ದರು. 'ನಾನು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಸಂಜೆ ಬನ್ನಿ' ಎಂದರು. ಸಂಜೆ ಹೋದಾಗ ಅಲ್ಲಿ ರಾಮ ಮೂರ್ತಿ ಸರ್, ರಮೇಶ್ ಸರ್, ನಂದಿ, ಬೋಜಣ್ಣ ಹಾಗೂ ಅವರ ಸ್ನೇಹಿತರೆಲ್ಲ ಇದ್ದರು'' ಎಂದು ಅಂದು ನಡೆದ ಘಟನೆ ನೆನಪು ಮಾಡಿಕೊಂಡರು ದರ್ಶನ್.

ಮೊದಲು ನನ್ನ ಆಯ್ಕೆ ಮಾಡಿದ್ದು ಅವರೇ: ದರ್ಶನ್
''ನಾನು ಒಳಗೆ ಹೋಗಿ ನಾನು ತೂಗುದೀಪ ಶ್ರೀನಿವಾಸ್ ಅವರ ಮಗ ಎಂದು ಪರಿಚಯ ಮಾಡಿಕೊಂಡೆ ಅವಕಾಶಕ್ಕಾಗಿ ಬಂದಿದ್ದೇನೆ ಎಂದೆ. ಅಂದು ಮೊದಲು ನನ್ನನ್ನು ಆಯ್ಕೆ ಮಾಡಿ, 'ಇವನೇ ನಮ್ಮ ಸಿನಿಮಾದ ಹೀರೋ' ಎಂದಿದ್ದು ರಮೇಶ್ ಎಂಬುವರು. ಅವರು ಸಹ ಸಿನಿಮಾದ ನಿರ್ಮಾಪಕರಾಗಿದ್ದರು. ಆದರೆ ಅವರು ತೆರೆಯ ಹಿಂದೆ ಕೆಲಸ ಮಾಡಿದರು. ಅಲ್ಲಿಂದ ನನ್ನ ಈ ಜರ್ನಿ ಪ್ರಾರಂಭವಾಯಿತು'' ಎಂದು ನೆನಪು ಮಾಡಿಕೊಂಡರು ದರ್ಶನ್.

''ಬೀದಿಯಲ್ಲಿ ಅನ್ನ ಹಾಕುತ್ತಿದ್ದವನಿಗೆ ತಟ್ಟೆ ಕೊಟ್ಟವರು ರಾಮಮೂರ್ತಿ''
''ಬೀದಿಯಲ್ಲಿ ಕುಳಿತು ಅನ್ನ ತಿನ್ನುತ್ತಿದ್ದೆ ಆದರೆ ರಸ್ತೆ ಮೇಲೆ ಹಾಕುತ್ತಿದ್ದರು. ತಿನ್ನುವಂತೆಯೂ ಇಲ್ಲ ಬಿಡುವಂತೆಯೂ ಇಂಥಹಾ ಪರಿಸ್ಥಿತಿಯಲ್ಲಿದ್ದೆ. ಆಗ ನನಗೆ ತಟ್ಟೆ ಕೊಟ್ಟವರು ರಾಮಮೂರ್ತಿ, ರಮೇಶ್ ಅವರು (ಮೆಜೆಸ್ಟಿಕ್ ನಿರ್ಮಾಕರು). ಇಂದಿಗೂ ಸಹ ಅದೇ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದೇನೆ'' ಎಂದು ತಮ್ಮ ಮೊದಲ ಸಿನಿಮಾದ ನಿರ್ಮಾಪಕರನ್ನು ನೆನಪಿಸಿಕೊಂಡರು ದರ್ಶನ್. ''ನಾನು ನನ್ನ ಕುಟುಂಬ, ನನ್ನ ಅಮ್ಮ, ತಮ್ಮ, ಅವನ ಕುಟುಂಬ ಎಂದೂ ನಿಮ್ಮನ್ನು ಮರೆಯುವುದಿಲ್ಲ. ಜೀವ ಇರುವವರೆಗೆ ನೆನಪಿಟ್ಟುಕೊಳ್ಳುತ್ತೇವೆ'' ಎಂದರು ದರ್ಶನ್.

''ಅಂದು ಬಿಟ್ಟ ಎತ್ತು ಇಂದಿಗೂ ತಿರುಗುತ್ತಲೇ ಇದೆ''
'ಮೆಜೆಸ್ಟಿಕ್' ನಿರ್ಮಾಪಕ ಪಿ.ಎನ್.ಸತ್ಯ ಅವರನ್ನೂ ನೆನಪು ಮಾಡಿಕೊಂಡ ದರ್ಶನ್, ''ಮಾರಿನ ಒಲಿಸಿಕೊಳ್ಳಬೇಕಂದ್ರೆ ಮರಿ ಹೊಡೀಬೇಕು. ದಾಸ ಎಂಟ್ರಿ ಕೊಡಬೇಕೆಂದರೆ ಕೋಳಿ ಕೊಯ್ಯಬೇಕು ಎಂದು ಆವತ್ತು ಪಿ.ಎನ್.ಸತ್ಯ ಅವರು ಕೋಳಿ ಕೊಯ್ದು ದೃಷ್ಟಿ ತೆಗೆದು ನನ್ನನ್ನು ಅಖಾಡಕ್ಕೆ ಬಿಟ್ಟರು. ಅವತ್ತು ಬಿಟ್ಟಂತ ಎತ್ತು ಇವತ್ತಿನ ವರೆಗೆ ಗಾಣದಲ್ಲಿ ಸುತ್ತುತ್ತಲೇ ಇದೆ. ಇನ್ನೂ ಕೆಲವು ವರ್ಷ ಗಾಣದಲ್ಲಿ ಸುತ್ತುತ್ತಲೇ ಇರುತ್ತದೆ ಅಷ್ಟು ಶಕ್ತಿಯನ್ನು ಸತ್ಯ ಅವರು ಅಂದೇ ನನಗೆ ತುಂಬಿ ಕಳಿಸಿದ್ದಾರೆ'' ಎಂದರು ದರ್ಶನ್. ಸತ್ಯ ಅವರು 2018ರಲ್ಲಿ ವರ್ಷ ನಿಧನರಾದರು.


Click it and Unblock the Notifications











