ಪೈಲ್ವಾನ್ ಪೈರಸಿ: ವಿವಾದದ ಕೇಂದ್ರದಲ್ಲಿ 'ಯಜಮಾನನ ಅನ್ನದಾತರು'!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಪಟ್ಟಂತೆ ಟ್ವೀಟ್ ಮಾಡುವವರೆಗೂ ಒಂದು ಆಯಾಮದಲ್ಲಿದ್ದ ವಿವಾದ, ನಂತರ ಇನ್ನೊಂದು ಕಡೆ ವಾಲಿದೆ. ಪೈರಸಿ ವೆಬ್ ಸೈಟ್ ಪೈಲ್ವಾನ್ ಚಿತ್ರವನ್ನ ನಕಲು ಮಾಡಿದೆ. ಆ ನಕಲನ್ನ ಡಿ ಫ್ಯಾನ್ಸ್ ವೈರಲ್ ಮಾಡಿದ್ದಾರೆ ಎಂಬ ಆರೋಪ ಮಾತ್ರ ಸುದ್ದಿ ಮಾಡಿತ್ತು.
ಆದರೆ ಡಿ ಬಾಸ್ ಟ್ವೀಟ್ ಮಾಡಿದ ಬಳಿಕವೇ ಗೊತ್ತಾಗಿದ್ದು ಇದರಲ್ಲಿ ನಿರ್ಮಾಪಕರ ಹೆಸರು ಕೂಡ ತೇಲಾಡಿದೆ ಅಂತ. ಅದಕ್ಕೆ ದರ್ಶನ್ ಅವರು 'ನನ್ನ ಸೆಲೆಬ್ರಿಟಿಗಳು' ಎಂಬ ಪದದ ಜೊತೆ 'ನನ್ನ ಅನ್ನದಾತರನ್ನ ಕೆಣಕಬೇಡಿ' ಎಂದಿದ್ದು.
ದರ್ಶನ್ ಅವರ ಈ ಟ್ವೀಟ್ ಮೇಲೆ ಕುತೂಹಲ ಹುಟ್ಟಿತು. ಹಾಗಾಗಿ, ಡಿ ಬಾಸ್ ಅವರ ಆಪ್ತ ನಿರ್ಮಾಪಕರೊಬ್ಬರನ್ನ ಸಂಪರ್ಕಿಸಿದೆವು. ಪೈಲ್ವಾನ್ ಚಿತ್ರದ ಪೈರಸಿಗೂ, ದರ್ಶನ್ ಅವರ ಆಪ್ತ ನಿರ್ಮಾಪಕರಿಗೂ ಏನು ಸಂಬಂಧ ಎಂದು ಕೇಳಿದಾಗಲೇ ಗೊತ್ತಾಗಿದ್ದು, ಅವರ ಮೇಲೆಯೂ ಆರೋಪ ಬಂದಿದೆ ಅಂತ. ಏನಿದು ಪೂರ್ತಿ ಕಥೆ ಮುಂದೆ ಓದಿ....

ಪೈಲ್ವಾನ್ ಪೈರಸಿಗೆ ನಿರ್ಮಾಪಕರು ಸಾಥ್ ಕೊಟ್ರಾ?
ಪೈಲ್ವಾನ್ ಚಿತ್ರವನ್ನ ಪೈರಸಿ ಮಾಡಲು ದರ್ಶನ್ ಅವರ ಕೆಲವು ಆಪ್ತ ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ ಎಂಬ ಮಾತು ಕೂಡ ಗಾಂಧಿನಗರದಲ್ಲಿ ಚರ್ಚೆಯಾಗಿದೆ. ಈ ವಿಷಯದಿಂದ ಸಹಜವಾಗಿ ದರ್ಶನ್ ಅವರ ಬೇಸರಗೊಂಡಿದ್ದಾರಂತೆ. ಹಾಗಾಗಿಯೇ ದರ್ಶನ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ಅನ್ನದಾತರನ್ನ ಕೆಣಕಬೇಡಿ ಎಂದಿದ್ದು ಅದಕ್ಕೆ
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವರ್ಸಸ್ ಅಭಿಮಾನಿಗಳ ನಡುವೆ ಮಾತ್ರ ವಾದ-ವಿವಾದ ನಡೆಯುತ್ತಿತ್ತು. ಆದರೆ ದರ್ಶನ್ ಅವರ ಆಪ್ತ ನಿರ್ಮಾಪಕರು ಮೇಲೂ ಪೈಲ್ವಾನ್ ಚಿತ್ರವನ್ನ ಪೈರಸಿ ಮಾಡಲು ಸಹಕರಿಸಿದ್ದಾರೆ ಎಂದು ಟೀಕೆ ಸದ್ದು ಮಾಡಿತು. ಅದಾದ ಮೇಲೆಯೇ ''ನನ್ನ ಅನ್ನದಾತರು ಮತ್ತು ಸೆಲೆಬ್ರಿಟಿಗಳನ್ನ ಕೆಣಕಬೇಡಿ/ಪ್ರಚೋದಿಸಲು ಬರದಿರಿ'' ಎಂದು ದರ್ಶನ್ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರಂತೆ.

ದರ್ಶನ್ ಆಪ್ತ ನಿರ್ಮಾಪಕರು ಹೇಳಿದ್ದೇನು?
ಇದೇ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಆಪ್ತ ನಿರ್ಮಾಪಕರಲ್ಲಿ ಒಬ್ಬರನ್ನ ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿದಾಗ ಈ ವಿಷಯ ಬಹಿರಂಗವಾಗಿದೆ. ''ಪೈಲ್ವಾನ್ ಸಿನಿಮಾ ನಿರೀಕ್ಷೆಯಂತೆ ತಲುಪಲಿಲ್ಲ. ಇಂತಹ ಸಮಯದಲ್ಲಿ ದರ್ಶನ್ ಅಭಿಮಾನಿಗಳ ಮೇಲೆ ಪೈರಸಿ ಆರೋಪ ಮಾಡಿ ಪ್ರಚಾರ ಮಾಡ್ತಿದ್ದಾರೆ. ಪೈರಸಿ ಮಾಡಿರೋದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ದರ್ಶನ್ ಅವರ ಆಪ್ತ ನಿರ್ಮಾಪಕರು ಸಹಕರಿಸಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಇದು ದರ್ಶನ್ ಅವರ ಕಿವಿಗೂ ಬಿದ್ದಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ ಅಷ್ಟೆ'' ಎಂದಿದ್ದಾರೆ.

ಆಗಿದ್ದೋ ಏನೋ, ಆಗ್ತಿರೋದೋ ಏನೋ
ಸಿನಿಮಾ ಇಂಡಸ್ಟ್ರಿಗೆ ಪೈರಸಿ ಹೊಸದೇನಲ್ಲ. ಈ ಹಿಂದೆ ಪೈರಸಿಯಾದಾಗ ನಟರ ಅಭಿಮಾನಿಗಳು ಈ ರೀತಿ ಆರೋಪ-ಪ್ರತ್ಯಾರೋಪ ಮಾಡಿಲ್ಲ. ಒಟ್ಟಾಗಿ ಪೈರಸಿ ವಿರುದ್ಧ ಧ್ವನಿಗೂಡಿಸಿರುವ ಉದಾಹರಣೆ ಇದೆ. ಆದರೆ, ಪೈಲ್ವಾನ್ ವಿಚಾರದಲ್ಲಿ ಯಾಕೆ ಹೀಗಾಯ್ತು ಎಂಬುದು ಉತ್ತರ ಸಿಗದ ಪ್ರಶ್ನೆ.

ಫ್ಯಾನ್ಸ್ ವಾರ್ ಆಯ್ತು ಈಗ ಸ್ಟಾರ್ ವಾರ್
ಕಳೆದ ಮೂರ್ನಾಲ್ಕು ದಿನದಿಂದ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಮಾತ್ರ ವಾರ್ ನಡೆಯುತ್ತಿತ್ತು. ಇದೀಗ, ದರ್ಶನ್ ಅಧಿಕೃತವಾಗಿ ಈ ಬಗ್ಗೆ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಟ್ವೀಟ್ ಮಾಡಿದ ಬಳಿಕ ಕಿಚ್ಚ ಸುದೀಪ್ ಕೂಡ ತಮ್ಮ ಬ್ಲ್ಯಾಗ್ ನಲ್ಲಿ ಬಹಳ ವಿವರವಾಗಿ ಬರೆದುಕೊಂಡು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕಂತೂ ಇದು ನಿಲ್ಲುವ ಹಾಗೆ ಕಾಣುತ್ತಿಲ್ಲ. ಹೀಗೆ, ಹೋದರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ.


Click it and Unblock the Notifications











