Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಬೆದರಿಕೆ ಹಾಕಿಲ್ಲ, ಅದು ನಕಲಿ ಆಡಿಯೋ: ನಟ ಧ್ರುವನ್
ನಟ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾರೆಂದು 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾದ ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಸಿನಿಮಾದ ನಾಯಕ ಧ್ರುವನ್ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅವರ ಕಾರಣದಿಂದಲೇ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾಗಿಯೂ ಭರತ್ ಹೇಳಿದ್ದಾರೆ. ತಮ್ಮ ಬಳಿ ಆಡಿಯೋ ಸಾಕ್ಷಿ ಇರುವುದಾಗಿಯೂ ಹೇಳಿದ್ದಾರೆ.
ಭರತ್ ದೂರು ನೀಡಿರುವ ಕುರಿತಾಗಿ ಫಿಲ್ಮಿಬೀಟ್ ಕನ್ನಡದೊಟ್ಟಿಗೆ ಮಾತನಾಡಿರುವ ನಟ ಧ್ರುವನ್, ''ಭರತ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ದರ್ಶನ್ ಹೆಸರು ಎಳೆದು ತರುತ್ತಿದ್ದಾರೆ. ದರ್ಶನ್ ಅವರು ಭರತ್ಗೆ ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಭರತ್ ಬಳಿ ಇರುವುದು ಫೇಕ್ ಆಡಿಯೋ ಅದರಲ್ಲಿರುವುದು ದರ್ಶನ್ ಧ್ವನಿಯಲ್ಲ'' ಎಂದಿದ್ದಾರೆ.
ತಮ್ಮ ಹಾಗೂ ದರ್ಶನ್ ವಿರುದ್ಧ ದೂರು ನೀಡಿರುವ ನಿರ್ಮಾಪಕ ಭರತ್ ವಿರುದ್ಧ ಆರೋಪ ಮಾಡಿದ ಧ್ರುವನ್, ''2020 ರಲ್ಲಿ ನನಗೆ ಅಡ್ವಾನ್ಸ್ ನೀಡಿದರು. ಅಕ್ಟೋಬರ್ನಲ್ಲಿ ಮುಹೂರ್ತ ಮಾಡಿದರು. ಆಗ ಒಬ್ಬ ನಿರ್ದೇಶಕರಿದ್ದರು ಅವರ ಜೊತೆ ಜಗಳವಾಡಿ ಅವರನ್ನು ಬದಲಾಯಿಸಿದರು. ನಂತರ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ್ದು 2021 ರ ಆಗಸ್ಟ್ನಲ್ಲಿ ಅದೂ ಕೇವಲ ಒಂಬತ್ತು ದಿನ ಮಾತ್ರ. ಹೀಗೆ ಸಿನಿಮಾವನ್ನು ಬಹಳ ತಡ ಮಾಡುತ್ತಿದ್ದರು'' ಎಂದಿದ್ದಾರೆ.
''ಒಮ್ಮೊಮ್ಮೆ ನಾನು ಸಿನಿಮಾ ಮಾಡಲ್ಲ ಎನ್ನುತ್ತಿದ್ದರು, ಒಮ್ಮೊಮ್ಮೆ ಮಾಡುತ್ತೀನಿ ಎನ್ನುತ್ತಿದ್ದರು. ಹಣದ ಪ್ರಾಬ್ಲಮ್ ಎನ್ನುತ್ತಿದ್ದರು. ವೈಯಕ್ತಿಕ ಪ್ರಾಬ್ಲಮ್ ಎಂದು ಇನ್ನೊಮ್ಮೆ ಹೇಳುತ್ತಿದ್ದರು. ಸಿನಿಮಾವನ್ನು ಮಾರಿಬಿಡುತ್ತೇನೆ ಎನ್ನುತ್ತಿದ್ದರು. ಹೀಗೆ ಒಟ್ಟಿನಲ್ಲಿ ಬಹಳ ಪ್ರಾಬ್ಲಮ್ಯಾಟಿಕ್ ವ್ಯಕ್ತಿ ಆಗಿದ್ದರು. ಈಗ ಎರಡು-ಮೂರು ವಾರದ ಹಿಂದೆ ಅವರ ಮಾಮ ಒಬ್ಬರು ನನ್ನನ್ನು ಕರೆದು, ಸಿನಿಮಾ ಮುಂದುವರೆಸೋಣ ಎಂದು ಹೇಳಿದರು. ನೀವು ಕರೆದರೆ ಸಿನಿಮಾ ಮಾಡ್ತೀನಿ ಎಂದೇ ಉತ್ತರಿಸಿದೆ, ಸಿನಿಮಾ ಮಾಡುವುದಿಲ್ಲ ಎಂದು ಹೇಳಲಿಲ್ಲ'' ಎಂದರು ಧ್ರುವನ್.
ವಿಚಿತ್ರ ಮನಸ್ಥಿತಿಯ ನಿರ್ಮಾಪಕ ಆತ: ಧ್ರುವನ್ ದೂರು
''ನಾನೊಬ್ಬ ಹೊಸ ನಟ ನನ್ನ ಮೊದಲ ಸಿನಿಮಾವೇ ಹೀಗೆ ತಡವಾಗಿದೆ ಎಂದರೆ ಜನರಿಗೆ ನನ್ನ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡುತ್ತದೆ. ನಮ್ಮ ನಿರ್ದೇಶಕ, ಕ್ಯಾಮೆರಾಮನ್, ಮ್ಯಾನೇಜರ್, ನಾಯಕಿ ಯಾರನ್ನಾದರೂ ಕೇಳಿ ಯಾರದ್ದು ಸಮಸ್ಯೆ ಎಂದು, ಅವರು ನಿರ್ಮಾಪಕರದ್ದು ಎಂದು ಉತ್ತರಿಸುತ್ತಾರೆ. ಅವರದ್ದು ಎಂಥಹಾ ವ್ಯಕ್ತಿತ್ವ ಎಂದರೆ ಮೂರು ವಾರದ ಹಿಂದೆ ಅವರ ಮಾಮನ ಮೂಲಕ ಸಿನಿಮಾ ಮುಂದುವರೆಸೋಣ ಎಂದಿದ್ದರು, ಈಗ ಮೂರು ದಿನದ ಹಿಂದೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ'' ಎಂದಿದ್ದಾರೆ ಧ್ರುವನ್.
ಬೆದರಿಕೆ ಹಾಕಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ: ಧ್ರುವನ್
''ನಾನು ಬೆದರಿಕೆ ಕರೆ ಮಾಡಿಸುವಷ್ಟು ದೊಡ್ಡ ಮನುಷ್ಯ ಅಲ್ಲ. ನಾನು ಕೆಲಸ ನಂಬಿಕೊಂಡು ಬದುಕುತ್ತಿರುವವನು ನಾನು ಆ ರೀತಿಯ ವ್ಯಕ್ತಿಯಲ್ಲ. ಹಾಗಾಗಿ ಇಂದು ಸ್ಟೇಷನ್ಗೆ ಹೋಗಿ ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ನನ್ನ ಜೊತೆ ನಿರ್ದೇಶಕರು, ಕ್ಯಾಮೆರಾಮನ್ ಸಹ ಬಂದಿದ್ದರು. ಆಡಿಯೋ ಬಿಟ್ಟಿದ್ದಾರೆ, ಬೆದರಿಕೆ ಕರೆ ಎಂದಿದ್ದಾರೆ ಅದ್ಯಾವುದನ್ನೂ ನಾನು ಮಾಡಿಲ್ಲ'' ಎಂದಿದ್ದಾರೆ.
'ದರ್ಶನ್ ದೊಡ್ಡ ಫ್ಯಾನ್ ಎಂದು ಹೇಳಿಕೊಂಡು ಬಂದಿದ್ದರು ಭರತ್'
ದರ್ಶನ್ ಬೆದರಿಕೆ ಹಾಕಿರುವುದಾಗಿ ಕೊಟ್ಟಿರುವ ದೂರಿನ ಬಗ್ಗೆ ಮಾತನಾಡಿದ ಧ್ರುವನ್, ''ನಾನು ದರ್ಶನ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡು ಭರತ್ ಅವರು ದರ್ಶನ್ ಅವರ ಶೂಟಿಂಗ್ ಸ್ಥಳಕ್ಕೆ ಬಂದು ನಿಂತುಕೊಳ್ಳುತ್ತಿದ್ದರು. ಅವರ ಬಳಿ ತಮ್ಮ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರು. ದರ್ಶನ್ ಅವರು ಸಹ ಹೊಸಬರು ಸಿನಿಮಾಕ್ಕೆ ಬರುತ್ತಿದ್ದಾರೆಂದರೆ ಬೆಂಬಲ ನೀಡುತ್ತಾರೆ. ಹಾಗೆಯೇ ಇವರಿಗೂ ಬೆಂಬಲ ನೀಡಿದರು. ಆದರೆ ಬೆದರಿಕೆ ಕರೆ ಮಾಡಿರುವುದೆಲ್ಲ ಸುಳ್ಳು'' ಎಂದರು ಧ್ರುವನ್.
ಅದು ಫೇಕ್ ಆಡಿಯೋ: ಧ್ರುವನ್
ಆಡಿಯೋ ಬಗ್ಗೆ ಮಾತನಾಡಿರುವ ಧ್ರುವನ್, ''ಅದು ಫೇಕ್ ಆಡಿಯೋ. ದರ್ಶನ್ ಅವರನ್ನು ಅವಹೇಳನಗೊಳಿಸುವ ಗುರಿಯಿಟ್ಟುಕೊಂಡೆ ತಂತ್ರಜ್ಞಾನ ಬಳಸಿಕೊಂಡು ಆ ಫೇಕ್ ಆಡಿಯೋ ಮಾಡಲಾಗಿದೆ. ದರ್ಶನ್ ಅವರಿಗೆ ಅಪಖ್ಯಾತಿ ತರಲು ಹೀಗೆ ಮಾಡುತ್ತಿದ್ದಾರೆ. ನಾನು ಆ ಆಡಿಯೋ ಅನ್ನು ಒಪ್ಪಿಕೊಳ್ಳಲ್ಲ. ಅದೊಂದು ಫೇಕ್ ಆಡಿಯೋ. ಈ ವ್ಯಕ್ತಿ ತನ್ನ ಸಿನಿಮಾಕ್ಕಾಗಿ ದರ್ಶನ್ ಅವರನ್ನು ಪುಸಲಾಯಿಸಿ ಮುಹೂರ್ತಕ್ಕೆ ಕರೆದುಕೊಂಡು ಬಂದಿದ್ದ, ಡಿ ಬಾಸ್ ಪ್ರೆಸೆಂಟ್ಸ್ ಎಂದು ಹಾಕಿಸಿಕೊಂಡಿದ್ದ. ದರ್ಶನ್ ಸಹ ಒಳ್ಳೆಯದಾಗಲಿ ಎಂದು ಹೇಳಿದ್ದರು. ಆದರೆ ಈಗ ಆತನೇ ಹೀಗೆ ಮಾಡಿದ್ದಾರೆ'' ಎಂದಿದ್ದಾರೆ ಧ್ರುವನ್.
ದರ್ಶನ್ ಬೆದರಿಕೆ ಹಾಕಿಲ್ಲ: ಧ್ರುವನ್
''ದರ್ಶನ್, ಭರತ್ ಅನ್ನು ಗೌರವದಿಂದ ಮಾತನಾಡಿಸುತ್ತಿದ್ದರು. ಬಹಳ ಸಣ್ಣ ವಯಸ್ಸಿನ ಭರತ್ ಅನ್ನು 'ಯುವ ನಿರ್ಮಾಪಕರೇ' ಎಂದು ಸಂಭೋಧಿಸುತ್ತಿದ್ದರು. ಆದರೆ ಈ ವ್ಯಕ್ತಿ ನೋಡಿದರೆ ಹೀಗೆ ಮಾಡಿಬಿಟ್ಟ. ದರ್ಶನ್ ಅವರು ಭರತ್ ಜೊತೆಗೆ ಫೋನ್ ಮಾಡಿ ಮಾತೇ ಆಡಿಲ್ಲ. ಸಿನಿಮಾ ಮಾಡಿ ಒಳ್ಳೆದಾಗಲಿ ಎಂದು ಹೇಳಿದ್ದರೇ ಹೊರತು ಬೆದರಿಕೆ ಹಾಕಿಲ್ಲ. ಅದು ದರ್ಶನ್ ಅವರಿಗೆ ಅವಶ್ಯಕತೆಯೂ ಇಲ್ಲ. ನಾನು ಇಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆ ಕೊಟ್ಟಾಗಲೂ ಇದನ್ನೇ ಹೇಳಿದ್ದೇನೆ'' ಎಂದು ಭರತ್ ಆರೋಪ ಅಲ್ಲಗಳೆದಿದ್ದಾರೆ ಧ್ರುವನ್.
ಪ್ರಕರಣದಲ್ಲಿ ನನ್ನ ಹೆಸರು ಹಾಳಾಗುತ್ತಿದೆ: ಧ್ರುವನ್
''ಅಸಲಿಗೆ ಈ ಪ್ರಕರಣದಲ್ಲಿ ನನ್ನ ಹೆಸರು ಹಾಳಾಗುತ್ತಿದೆ. ನಾನು ಹೊಸಬ, ನಮ್ಮನ್ನು ಹಾಕಿಕೊಂಡು ಹೀಗೆ ಹೆಸರು ಹಾಳು ಮಾಡಿದರೆ ನಾಳೆ ನಮಗೆ ಯಾರು ಅವಕಾಶ ಕೊಡುತ್ತಾರೆ. ನಾನು ಸಿನಿಮಾ ಮಾಡಲು ಈಗಲೂ ತಯಾರಾಗಿದ್ದೇನೆ. ಅವರು ಸಿನಿಮಾ ಮಾಡಬೇಕು ಅಷ್ಟೆ. ಪೊಲೀಸಿನವರು ಸಹ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಒಟ್ಟಿಗೆ ಸಿನಿಮಾ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು'' ಎಂದರು.
Recommended Video