ದರ್ಶನ್ ಫೋಟೋ ಹಾಕಿದ್ದ ಆಟೋ ಚಾಲಕನಿಗೆ ಈ ಸ್ಥಿತಿ ಬರಬಾರದಿತ್ತು!
ಮಂಡ್ಯ ಚುನಾವಣಾ ಬಿಸಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸುಮಲತಾ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಇಬ್ಬರು ಬೆಂಬಲ ನೀಡುತ್ತಿದ್ದಂತೆ ಮಂಡ್ಯ ರಾಜಕೀಯ ಮತ್ತಷ್ಟು ಸದ್ದು ಮಾಡ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ರಾಜಕೀಯ ವಾಗ್ವಾದಗಳು ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ.
ಈ ಕಡೆ ಸುಮಲತಾ ಅವರನ್ನು ಸೋಲಿಸಲೇಬೇಕೆಂದು ನಿಖಿಲ್ ಬೆಂಬಲಿಗರು ಪಣ ತೊಟ್ಟಿದ್ದರೆ, ಅತ್ತ ಸುಮಲತಾ ಅವರನ್ನು ಗೆಲ್ಲಿಸಲೇಬೇಕೆಂದು ದರ್ಶನ್ ಮತ್ತು ಯಶ್ ತೊಡೆತಟ್ಟಿನಿಂತಿದ್ದಾರೆ. ಇದರ ನಡುವೆ ಸುಮಲತಾ ವಿರುದ್ಧ ಎದುರಾಳಿಗಳಿಂದ ವಾಗ್ಬಾಣಗಳು ಒಂದರ ಮೇಲೊಂದು ತೂರಿ ಬರುತ್ತಿವೆ.
ಸುಮಲತಾ ಅವರ ಬೆನ್ನಿಗೆ ನಿಂತ ಯಶ್ ಮತ್ತು ದರ್ಶನ್ ವಿರುದ್ಧವೇ ಹೆಚ್ಚು ಮಾತುಗಳು ಕೇಳಿಬರುತ್ತಿವೆ. ಅದು ಎಷ್ಟರ ಮಟ್ಟಿಗೆ ದರ್ಶನ್ ವಿರುದ್ಧ ದ್ವೇಷ ರಾಜಕಾರಣ ನಡೆಯುತ್ತಿದೆ ಅಂದರೆ, ಅಮಾಯಕ ಆಟೋ ಚಾಲಕನೊಬ್ಬ ದರ್ಶನ್ ಫೋಟೋ ಹಾಕಿದ್ದಕ್ಕೆ ಕಿಡಿಗೇಡಿಗಳು ಆಟೋ ಹಿಂಬದಿಯ ಚಕ್ರಗಳನ್ನೇ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಮುಂದೆ ಓದಿ....

ಡಿ ಬಾಸ್ ಎಂದು ಬರೆಸಿಕೊಂಡಿದ್ದೇ ತಪ್ಪಾಯಿತಾ?
ದರ್ಶನ್ ಅಪ್ಪಟ ಅಭಿಮಾನಿಯಾಗಿರುವ ಕೆ ಆರ್ ಪೇಟೆ ಹೇಮಾವತಿ ಬಡಾವಣೆಯ ಸಂತೋಷ್ ಎಂಬಾತ ಆಟೋ ಹಿಂಭಾಗದಲ್ಲಿ ದರ್ಶನ್ ಅವರ ಭಾವಚಿತ್ರ ಹಾಕಿಕೊಂಡು ಡಿ ಬಾಸ್ ಎಂದು ಬರೆಸಿಕೊಂಡಿದ್ದರು. ಇದನ್ನ ನೋಡಿದ ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಚಕ್ರಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಹಿಂಭಾಗದ ಎರಡು ಚಕ್ರಗಳು ಕಾಣೆಯಾಗಿದ್ದನ್ನು ನೋಡಿ ಆಟೋ ಚಾಲಕ ಕಂಗಾಲಾಗಿದ್ದಾರೆ.

ಬಂಧಿಸುವಂತೆ ಪೊಲೀಸರ ಬಳಿ ಆಟೋ ಚಾಲಕರ ಒತ್ತಾಯ
ಎರಡು ಚಕ್ರಗಳನ್ನು ಬಿಚ್ಚುಕೊಂಡು ಪರಾರಿಯಾಗಿರುವವರನ್ನ ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಕೆ.ಎನ್ ವಾಸುದೇವ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಸದಸ್ಯರು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಮನವಿ ಮಾಡಿಕೊಂಡರು.

ಪೊಲೀಸ್ ಅಧಿಕಾರಿಗಳ ವಿರುದ್ಧವೇ ಆರೋಪ
ಆಟೋದ ಎರಡು ಚಕ್ರಗಳನ್ನು ಕಳೆದುಕೊಂಡ ಸಂತೋಷ್ ಮತ್ತು ಇತರ ಆಟೋ ಚಾಲಕರು ಮನವಿ ಸಲ್ಲಿಸಲು ಹೋದರೆ ಪೊಲೀಸ್ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿಲ್ಲ. ''ತಾಲ್ಲೂಕಿನಲ್ಲಿ ರಾಜಕೀಯ ತಿರುವು ಪಡೆದುಕೊಂಡರೇ ನಮಗೆ ತೊಂದರೆ ಆಗುತ್ತೆ. ಒಂದು ವೇಳೆ ಮನವಿಯನ್ನು ಸ್ವೀಕರಿಸಲು ಒತ್ತಾಯ ಮಾಡಿದರೆ ನಿಮ್ಮ ಆಟೋಗಳನ್ನ ವಿರುದ್ಧ ಪ್ರಕರಣ ದಾಖಲು ಮಾಡಬೇಕಾಗುತ್ತೆ'' ಎಂದು ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಾಂತಿಯುತ ಪ್ರತಿಭಟನೆಗೆ ಮುಂದಾದ ಆಟೋ ಚಾಲಕರು
ಪೊಲೀಸ್ ಅಧಿಕಾರಿಗಳ ಧೋರಣೆ ಖಂಡಿಸಿ ಮತ್ತು ಚಕ್ರಗಳನ್ನು ಬಿಚ್ಚಿಕೊಂಡು ಹೋಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬುಧವಾರ ಕೆ ಆರ್ ಪೇಟೆಯಲ್ಲಿ ಆಟೋ ಚಾಲಕ ಮತ್ತು ಮಾಲಿಕರ ಸಂಘದ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರಂತೆ. ರಾಜಕೀಯ ವ್ಯಕ್ತಿಗಳ ಮಾತಿನ ಬಾಣಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ದರ್ಶನ್ ಪೋಟೋ ಹಾಕಿದ್ದೆ ಆಟೋ ಚಾಲಕನ ದೊಡ್ಡ ತಪ್ಪು ಆದಂತೆ ಆಗಿದೆ.


Click it and Unblock the Notifications











