'ಕ್ರಾಂತಿ' ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ಅವಿನಾಶ್: ಕುಗ್ಗದ ಅಭಿಮಾನ.. ಈಗ ವಿದೇಶದಲ್ಲಿ 'ಕಾಟೇರ' ಪ್ರಚಾರ
ನಟ ದರ್ಶನ್ ಅವರ ಅಭಿಮಾನಿ ಅವಿನಾಶ್ ನಾಗರಾಜ್ ನಿಮಗೆ ನೆನಪಿರಬಹುದು. ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ಬೈಕ್ ಏರಿ 'ಕ್ರಾಂತಿ' ಸಿನಿಮಾ ಪ್ರಚಾರ ಮಾಡಿ ಸುದ್ದಿ ಆಗಿದ್ದರು. ದರ್ಶನ್ ಅವರು ಹೇಳಿದ್ರು ಕೇಳದೇ ಸಿನಿಮಾ ಪ್ರಚಾರಕ್ಕಾಗಿ ರಜೆ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡಿದ್ದರು. ಈ ಬಗ್ಗೆ ವಿಡಿಯೋ ಮಾಡಿ ಅವಿನಾಶ್ ಮಾಹಿತಿ ನೀಡಿದ್ದರು. ಇದೀಗ ವಿದೇಶದಲ್ಲಿ ಅವರು ಪ್ರತ್ಯಕ್ಷರಾಗಿದ್ದಾರೆ.
ಅವಿನಾಶ್ ನಾಗರಾಜ್ ಈಗ ದರ್ಶನ್ ಅಭಿನಯದ ಮುಂದಿನ ಸಿನಿಮಾ 'ಕಾಟೇರ' ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಅಲ್ಲ, ಹೊರ ರಾಜ್ಯಗಳಲ್ಲಿ ಕೂಡ ಅಲ್ಲ, ವಿದೇಶಗಳಲ್ಲಿ 'ಕಾಟೇರ' ಸಿನಿಮಾ ಪ್ರಚಾರ ಮಾಡುವುದಾಗಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತರುಣ್ ಸುಧೀರ್ ನಿರ್ದೇಶನ್ ಆಕ್ಷನ್ ಎಂಟರ್ಟೈನರ್ 'ಕಾಟೇರ' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಭಿಮಾನಿಗಳು ಈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

"ನಮಸ್ಕಾರ.. ಎಲ್ಲೇ ಹೋದ್ರು, ಎಷ್ಟೇ ದಿನ ಆದ್ರು ನಾನು ದರ್ಶನ್ ಸರ್ ಅವರ ಅಭಿಮಾನಿ. 'ಕ್ರಾಂತಿ' ಸಿನಿಮಾ ಆದ್ಮೇಲೆ ಬಹಳ ಜನ ಕೇಳ್ತಿದ್ರು. ಏನ್ ಗುರು ನೀನು 'ಕಾಟೇರ' ಸಿನಿಮಾ ಬಗ್ಗೆ ಪ್ರಚಾರ ಮಾಡೋದಿಲ್ವಾ? ಅಂತಿದ್ರು. 'ಕ್ರಾಂತಿ' ಸಿನಿಮಾನ ಬರೀ ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದೀನಿ. 'ಕಾಟೇರ' ಸಿನಿಮಾ ಅಂತರಾಷ್ಟ್ರೀಯಮಟ್ಟದಲ್ಲಿ ಮಾಡ್ತಿದ್ದೀನಿ. ಎಲ್ಲಿ ಅಂತೀರಾ. ಥಿಂಪು ಸಿಟಿಯಲ್ಲಿ ಇದ್ದೀನಿ. ಇದು ಭಾರತ ಅಲ್ಲ. ಭೂತಾನ್ ರಾಜಧಾನಿ. ಭೂತಾನ್ನಲ್ಲಿ 'ಕಾಟೇರ' ಇಂದಿನಿಂದ ಶುರು ಮಾಡ್ತಿದ್ದೀನಿ"
"ಕಾಟೇರ ಸಿನಿಮಾ ಬಿಡುಗಡೆ ಆಗುವವರೆಗೂ ಬೇರೆ ಬೇರೆ ದೇಶಗಳಲ್ಲಿ ಹೋಗಿ ಸಿನಿಮಾ ಪ್ರಚಾರ ಮಾಡುತ್ತೇನೆ. 9 ದೇಶಗಳ ರಾಜಧಾನಿಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ನಮ್ಮ ಕನ್ನಡದ ಬಗ್ಗೆ ದರ್ಶನ್ ಅವರ ಬಗ್ಗೆ ಅವರ ಸಿನಿಮಾ ಬಗ್ಗೆ ಪ್ರಚಾರ ಮಾಡ್ತೀನಿ. ಇದು ನನಗೆ, ದರ್ಶನ್ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಹಬ್ಬ" ಎಂದು ಅವಿನಾ ನಾಗರಾಜ್ ಹೇಳಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ "ಬೆಂಗಳೂರಿನಿಂದ ಇಂಡೋನೇಷ್ಯಾ ಬೈಕ್ ರೈಡ್ನ 31ನೇ ದಿನ ಇವತ್ತು. ಭೂತಾನ್ನ ಥಿಂಪು ಸಿಟಿಯಲ್ಲಿ ಇದ್ದೀನಿ. ಇಲ್ಲಿ ನಿಂತು ಕರ್ನಾಟಕ ಧ್ವಜ ಹಾರಿಸುವುದಕ್ಕೆ ಮೈ ಜುಮ್ ಎನ್ನಿಸುತ್ತಿದೆ. ಬೇರೆ ದೇಶಕ್ಕೆ ಕರ್ನಾಟಕದ ಬೈಕ್ನಲ್ಲಿ ಬಂದು ಕನ್ನಡ ಧ್ವಜ ಹಾರಿಸುತ್ತಿದ್ದೀನಿ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಬಾವುಟ ಹಾರಿಸಲು ನನಗೆ ಹೆಮ್ಮೆ, ಖುಷಿ ಆಗುತ್ತಿದೆ" ಎಂದಿದ್ದಾರೆ.
ಅವಿನಾಶ್ ನಾಗರಾಜ್ ಈ ಹಿಂದೆ ಇದೇ ರೀತಿ ಬುಲೆಟ್ ಬೈಕ್ಗೆ 'ಕ್ರಾಂತಿ' ಸಿನಿಮಾ ಪೋಸ್ಟರ್ಗಳನ್ನು ಅಂಟಿಸಿಕೊಂಡು ರಾಜ್ಯದ ಜಿಲ್ಲೆಗಳಲ್ಲಿ ಸುತ್ತಾಡಿದ್ದರು. ಉಪೇಂದ್ರ, ಶರಣ್, ಅಭಿಷೇಕ್ ಅಂಬರೀಶ್ ಸೇರಿದಂತೆ ಕನ್ನಡ ಸಿನಿಮಾ ತಾರೆಯರ ಮನೆ ಬಳಿ ಹೋಗಿ ಬೈಕ್ ಸವಾರಿ ಮಾಡಿಸಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದರು. ಈ ವಿಭಿನ್ನ ಪ್ರಯತ್ನಕ್ಕೆ ದರ್ಶನ್ ಅಭಿಮಾನಿಗಳು ಬೆಂಬಲ ಸೂಚಿಸಿದ್ದರು. ದರ್ಶನ್ ಅಭಿಮಾನಿಗಳು ದೊಡ್ಡಮಟ್ಟದಲ್ಲೇ 'ಕ್ರಾಂತಿ' ಪ್ರಚಾರ ಮಾಡಿದ್ದರು.

ದರ್ಶನ್ ಅಭಿಮಾನಿಯ ಪ್ರಯತ್ನ ಆತನ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗಿತ್ತು. ಆತನೇ ಈ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದರು. "ಕ್ರಾಂತಿ ಸಿನಿಮಾ ಪ್ರಮೋಷನ್ ಚೆನ್ನಾಗಿ ಆಯ್ತು. ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದೆ. ಬಟ್ ನನ್ನ ಪರ್ಸನಲ್ ಲೈಫ್ ಅಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಇದು ನನ್ನದೇ ತಪ್ಪು. ದರ್ಶನ್ ಸರ್ ಬೇಡ ಎಂದು ಹೇಳಿದ್ದರು. ಆದರೂ ಅವರ ಮಾತು ಕೇಳದೇ ಮಾಡ್ದೆ. ನಮ್ಮ ಕಂಪನಿಯವರು ನನಗೆ ಹೇಳದೇ ನನ್ನನ್ನು ಟರ್ಮಿನೇಟ್ ಮಾಡಿದ್ದಾರೆ. ಅಂದ್ರೆ ನನ್ನನ್ನು ಕೆಲಸದಿಂದ ತೆಗೆದುಬಿಟ್ಟಿದ್ದಾರೆ. ಇನ್ಫಾರ್ಮ್ ಮಾಡದೇ ಟರ್ಮಿನೇಟ್ ಮಾಡಿದ್ದಾರೆ" ಎಂದಿದ್ದರು.
ಇನ್ನು ಖಾಸಗಿ ಹೋಟೆಲ್ನಲ್ಲಿ ನಡೆದ 'ಕ್ರಾಂತಿ' ಸಿನಿಮಾ ಸಕ್ಸಸ್ ಮೀಟ್ ಜಾಗಕ್ಕೂ ಅವಿನಾಶ್ ಬಂದಿದ್ದರು. ಈ ವೇಳೆ ದರ್ಶನ್ ಆತನನ್ನು ನೋಡಿ 'ಏನಪ್ಪಾ ಕೆಲಸ ಕಳ್ಕೊಂಡ' ಎಂದು ಕೇಳಿದ್ದ ವಿಡಿಯೋ ವೈರಲ್ ಆಗಿತ್ತು.


Click it and Unblock the Notifications











