ತರೀಕೆರೆಯ 'ಶೆಡ್ ಟೀ ಸ್ಟಾಲ್' ಬ್ಯಾನರ್ ವೈರಲ್; ನಾ ಬರಲ್ಲಪ್ಪ ಎಂದ ನೆಟ್ಟಿಗರು
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಸೆರೆವಾಸ ಅನುಭವಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ದರ್ಶನ್ ಪ್ರಕರಣ ಬಗ್ಗೆ ದಿನದಿಂದ ದಿನಕ್ಕೆ ಒಂದೊಂದು ಹೊಸ ಸಂಗತಿಗಳು ಹೊರ ಬೀಳುತ್ತಿವೆ. ಪೊಲೀಸರು ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಮುಗಿಸಿ, ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ ಕೇಸ್ನಲ್ಲಿ ದರ್ಶನ್ ಹೆಸರು ಕೇಳಿ ಬಂದ ಆರಂಭದ ದಿನಗಳಲ್ಲಿ ಕೆಲವು ಪದಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅವುಗಳಲ್ಲಿ 'ಕೈದಿ ನಂ 6016', 'ಶೆಡ್' ಈಗ 'ಕೈದಿ ನಂ 511' ವೈರಲ್ ಆಗುತ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ 'ಶೆಡ್' ಅನ್ನುವ ಪದ ಟ್ರೆಂಡಿಂಗ್ನಲ್ಲಿತ್ತು. ಈಗಲೂ ದರ್ಶನ್ ಅಭಿಮಾನಿಗಳು ಕೇಸ್ಗೆ ಸಂಬಂಧ ಪಟ್ಟ ಇಂತಹ ಪದಗಳನ್ನು ವೈರಲ್ ಮಾಡುತ್ತಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಓಡಾಡುತ್ತಿದೆ. ಈ ಫೋಟೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಅಂತಹದ್ದೇನಿದೆ? ಯಾಕಷ್ಟು ಚರ್ಚೆಯಾಗುತ್ತಿದೆ? ನೆಟ್ಟಿಗರು ಏನೇನು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಈ ಫೋಟೋ ಇದೆ. ಯಾರೋ ಒಬ್ಬರು ತನ್ನ ಟೀ ಶಾಪ್ಗೆ 'ಶೆಡ್ ಟೀ ಸ್ಟಾಲ್' ಅಂತ ಹೆಸರಿಟ್ಟಿದ್ದಾರೆ. ಅದಕ್ಕೆ ಬ್ಯಾನರ್ ಕೂಡ ಮಾಡಿ ಹಾಕಿಸಿದ್ದಾರೆ. ಇದನ್ನೇ ಯಾರೋ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಅನ್ನೋನ್ ಟ್ರೋಲರ್ಸ್ ಅನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಲಾಗಿದೆ. ಅಲ್ಲಿಂದ ನೆಟ್ಟಿಗರು ಮನಸ್ಸಿಗೆ ಬಂದಂತೆ ಮಜವಾಗಿ ಕಾಮೆಂಟ್ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಒಬ್ಬರಂತೂ "ಪಕ್ಕದಲ್ಲಿ 6106 ಪಕೋಡ ಸ್ಟಾಲ್ ಓಪನ್ ಮಾಡಿ" ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು "ನಮ್ಮ ತರೀಕರೆ ನಮ್ಮ ಹೆಮ್ಮೆ. ನಮ್ಮ ಹುಡುಗನ ಟೀ ಅಂಗಡಿ ಇದು" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಂತ ಇಲ್ಲಿಗೆ ನಿಂತಿಲ್ಲ. ಇನ್ನೂ ವಿಭಿನ್ನವಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
"ಡಿ ಬಾಸ್ ಆಶೀರ್ವಾದ ಅಂತ ಹಾಕ್ಬಹುದು ಅಣ್ಣಾ" ಅಂತ ಮತ್ತೊಬ್ಬ ನೆಟ್ಟಿಗರು ಸಲಹೆಯನ್ನು ಕೊಟ್ಟಿದ್ದಾರೆ. ಹಾಗೇ "ಕೆಳಗೆ ಟ್ಯಾಗ್ ಲೈನ್ ಹಾಕ್ಬೇಕಿತ್ತು. (ಬಾ ಗುರು ಬಿಸ್-ಬಿಸಿಗೈತೆ) ಅಂತ " ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. ಇನ್ನೊಬ್ಬರು "ಶೆಡ್ನಲ್ಲಿ ಟೀ.. ಜೈಲಲ್ಲಿ ವಿಸ್ಕಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು "ನಾನು ಶೆಡ್ಗೆ ಬರೋದಿಲ್ಲ" ಅಂತಾನೂ ಕಾಮೆಂಟ್ ಮಾಡಿದ್ದಾರೆ.
ಅಸಲಿ ಈ 'ಶೆಡ್ ಟೀ ಸ್ಟಾಲ್' ತರೀಕೆರೆಯ ಎಂ ಜಿ ರಸ್ತೆಯಲ್ಲಿ ಎಂದು ಬ್ಯಾನರ್ನಲ್ಲೇ ಹಾಕಲಾಗಿದೆ. ನಿಜಕ್ಕೂ ಈ ಹೆಸರಿನ ಟೀ ಸ್ಟಾಲ್ ಇದೆಯಾ? ಅಥವಾ ಇದು ಕೇವಲ ಬ್ಯಾನರ್ ಅಷ್ಟೇನಾ ಅನ್ನೋದು ಬಗ್ಗೆ ಮಾಹಿತಿಯಿಲ್ಲ. ಈ ಟೀ ಅಂಗಡಿ ದರ್ಶನ್ ಅಭಿಮಾನಿಯದ್ದಾ? ಇಲ್ಲ ಬೇರೆಯವರದ್ದಾ ಅನ್ನೋದು ಈ ಪೋಸ್ಟ್ನಲ್ಲಿ ಹೇಳಲಾಗಿಲ್ಲ.
ಅಂದ್ಹಾಗೆ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಕರೆತಂದು, ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಹೋಗಿ ಚಿತ್ರ ಹಿಂಸೆಯನ್ನು ನೀಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ದರ್ಶನ್ ಗ್ಯಾಂಗ್ ಅನ್ನು ಆರೋಪಿ ಸ್ಥಾನದಲ್ಲಿ ಇದ್ದಾರೆ.


Click it and Unblock the Notifications











