ದರ್ಶನ್ ಅಭಿಮಾನಿಗಳು ಅನಕ್ಷರಸ್ಥರು, ಅವಿದ್ಯಾವಂತರು ; ಖಡಕ್ ಉತ್ತರ ನೀಡಿದ ಮಹಾನಟಿ ಗಗನಾ
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನು ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು. ಪ್ರೀತಿಯಿಂದ ತಲೆ ಬಾಗಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನು ಕಟ್ಟಿದರು.
ಆದರೆ ಈಗ ಇದೇ ಸೆಲೆಬ್ರಿಟಿಗಳ ಅಭಿಮಾನದ ಕುರಿತು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ನಿಯತ್ತು ತಮ್ಮ ನಟನ ಮೇಲೇ ಅವರಿಗೆ ಇರುವ ಪ್ರೀತಿಯನ್ನೆಲ್ಲಾ ಬದಿಗಿಡಿ, ಅವರು ಮಾತನಾಡುವ ಮಾತು , ಅವರು ಬಳಸುವ ಭಾಷೆಯ ಬಗ್ಗೆ ಮಾತನಾಡಿ ಎನ್ನುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವರೆಲ್ಲ ದರ್ಶನ್ ಅಭಿಮಾನಿಗಳೇ ಎನ್ನುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಸಂಸ್ಕಾರ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಅವರ ಇಂದಿನ ಈ ಹೀನ ಸ್ಥಿತಿಗೆ ಅವರ ಅಭಿಮಾನಿಗಳೇ ಪರೋಕ್ಷ ಕಾರಣ ಎಂದುಕೂಡ ಹೇಳುತ್ತಿದ್ದಾರೆ.
ಇಷ್ಟೇ ಅಲ್ಲ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಕೆಲ ಮಾಧ್ಯಮದವರು ಕೂಡ ದರ್ಶನ್ ಅವರ ಅಭಿಮಾನಿಗಳ ಕುರಿತು ವಿಷಯವನ್ನು ಚರ್ಚೆ ಮಾಡುತ್ತಿದ್ದಾರೆ. ಸ್ಟುಡಿಯೋಗೆ ಕರೆಸಿ ಮಾತನಾಡಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳೆಲ್ಲಾ ಅನಕ್ಷರಸ್ಥರು ಎಂದು ಷರಾ ಬರೆಯುತ್ತಿದ್ದಾರೆ.
ಈ ಎಲ್ಲಾ ಮಾತು - ಚರ್ಚೆ- ಅಭಿಪ್ರಾಯದಿಂದ ಇದೀಗ ನಿಮ್ಮೆಲ್ಲರ ನೆಚ್ಚಿನ ''ಮಹಾನಟಿ'' ಗಗನಾ ಕೆರಳಿದ್ದು ದರ್ಶನ್ ಅವರ ಅಭಿಮಾನಿಗಳ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರುವವರ ವಿರುದ್ದ ಕೆಂಡ ಕಾರಿದ್ದಾರೆ.
ಈ ಕುರಿತು ''ಬಾಸ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗಗನಾ , ಒಳ್ಳೇಯದು, ಕೆಟ್ಟದು ಎನ್ನುವುದು ಜೀವನದ ಒಂದು ಭಾಗ. ಎಲ್ಲರ ಜೀವನದಲ್ಲಿ ಅದು ಇದ್ದೇ ಇರುತ್ತೆ ಆದರೆ ಡಿಬಾಸ್ಗೆ ಸ್ವಲ್ಪ ತುಸು ಹೆಚ್ಚೇ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ದೀಪ ಜೋರಾಗಿ ಉರಿಯುತ್ತಿದೆ ಅಂದ್ರೆ, ಅದು ಬೇಗನೆ ಆರಿ ಹೊಸ ಬೆಳಕು ಬರುತ್ತೆ ಎಂದರ್ಥ. ಹಾಗೆಯೇ ಈ ಕೆಟ್ಟದೆಲ್ಲ ಮುಗಿದು ಒಳ್ಳೆಯ ಸುದ್ದಿ ಬಂದೇ ಬರುತ್ತೆ. ಅದಕ್ಕಾಗಿ ನಾವೆಲ್ಲ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ''ದಿ ಡೆವಿಲ್ʼ'' ಸಿನಿಮಾ ನೋಡೋಕೆ ಕಾದು ಕುಳಿತಿದ್ದೇವೆ. ಬಾಸ್ ತುಂಬಾ ಸ್ಟ್ರಾಂಗ್ ಆಗಿ ಬೇಗ ವಾಪಾಸ್ ಬರುತ್ತಾರೆ ಅನ್ನೋ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.

ಬಾಸ್ ಹೇಗೆ ಅಂತ ಬಾಸ್ ಫ್ಯಾನ್ಸ್ಗೆ ಗೊತ್ತು. ಮನಸಿಂದ ಎಷ್ಟು ಒಳ್ಳೆ ವ್ಯಕ್ತಿ ಅನ್ನೋದು ಗೊತ್ತು ಎಂದು ಹೇಳಿರುವ ಗಗನಾ ಈಗೀಗ ಬಾಸ್ ಅಭಿಮಾನಿಗಳು ಅನಕ್ಷರಸ್ಥರು.. ಅವಿದ್ಯಾವಂತರು.. ಎಂದು ತುಂಬಾ ಜನ ಮಾತನಾಡುತ್ತಿದ್ಧಾರೆ. ಆದರೆ ನಾನು ಒಳ್ಳೆಯ ಶಿಕ್ಷಣ ಪಡೆದಿದ್ದೇನೆ, ನಾನು ಎಜುಕೇಟೆಡ್.. ನನಗೆ ಅವರ ಸಿನಿಮಾಗಳೆಂದರೆ ಇಷ್ಟ. ನನ್ನ ಬದುಕಿಗೆ ಅವರೇ ಪ್ರೇರಣೆ ಎಂದು ಹೇಳಿದ್ದಾರೆ. ''ನಮ್ಮ ಪ್ರೀತಿಯ ರಾಮು'' ಚಿತ್ರದಲ್ಲಿ ಅವರದ್ದು ಎಂಥಾ ಅದ್ಭುತ ಅಭಿನಯ, ''ದತ್ತ'' ಚಿತ್ರದಲ್ಲಿ ಎಷ್ಟು ಚೆನ್ನಾಗಿ ಕಾಮಿಡಿ ರೋಲ್ ಪ್ಲೇ ಮಾಡಿದ್ದಾರೆ, ''ಕರಿಯ''ದಲ್ಲಿ ಕೂಡ ಅಷ್ಟೇ, ನಾನು ಅವರ ಅಭಿಮಾನಿಯಾಗೋಕೆ ಅವರಲ್ಲಿನ ಪ್ರತಿಭೆಯೇ ಕಾರಣ ಎಂದು ಹೇಳಿದ್ದಾರೆ. ನನ್ನಂತೆಯೇ ಅವರಲ್ಲಿನ ಪ್ರತಿಭೆಯನ್ನು ನೋಡಿ ಅಭಿಮಾನಿಗಳಾದವರು ಹಲವಾರು ಜನ ಇದ್ದಾರೆ ಎಂದು ಕೂಡ ಹೇಳಿದ್ದಾರೆ.
ಇನ್ನು ಅಶ್ಲೀಲ ಕಾಮೆಂಟ್ಗಳ ಕುರಿತು, ಸದ್ಯ ಸೈಬರ್ ಕ್ರೈಂ ಪೊಲೀಸರು ರಮ್ಯಾ ದೂರಿನ ಅನ್ವಯ ಸಮರ ಸಾರಿರುವ ಕುರಿತು ಕೂಡ ಮಾತನಾಡಿರುವ ನಿಮ್ಮ ''ಮಹಾನಟಿ'' ಆ ರೀತಿಯಲ್ಲಿ ಕಾಮೆಂಟ್ ಮಾಡಿದವರು, ನಿಜವಾಗಲೂ ಬಾಸ್ ಅಭಿಮಾನಿಗಳಾ? ಅಥವಾ ಇಲ್ಲವಾ? ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನೀವು ಯಾರಿಗಾದ್ರೂ ಕಾಮೆಂಟ್ ಮಾಡೋಕು ಮುಂಚೆ ಸಾವಿರ ಬಾರಿ ಯೋಚಿಸಿ ಎಂದು ನಿಜವಾದ ದರ್ಶನ್ ಅವರ ಅಭಿಮಾನಿಗಳಿಗೆ ಕಿವಿ ಮಾತನ್ನು ಕೂಡ ಹೇಳಿದ್ದಾರೆ. ನಿಜವಾದ ಅಭಿಮಾನಿಗಳು ಆ ರೀತಿ ಕೆಟ್ಟ ಕಾಮೆಂಟ್ ಮಾಡೋದೆ ಇಲ್ಲ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಬಾಸ್ ಹೆಸರು ಕಾಪಾಡೋದು ನಮ್ಮೆಲ್ಲ ಅಭಿಮಾನಿಗಳ ಜವಾಬ್ದಾರಿ ಎಂದು ಕೂಡ ಹೇಳಿದ್ಧಾರೆ ಗಗನಾ.


Click it and Unblock the Notifications











