ಕೆಟ್ಟ ಮೇಲೆ ಬುದ್ಧಿ ಬಂತಾ? ಕೇಸ್ ಹಿಂಪಡೆಯುವಂತೆ ರಮ್ಯಾಗೆ ದರ್ಶನ್ ಫ್ಯಾನ್ಸ್ ಮನವಿ
ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಸಮರ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ತಿದೆ. ಈಗಾಗಲೇ ತಮಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದವರ ವಿರುದ್ಧ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 43 ಸೋಶಿಯಲ್ ಮೀಡಿಯಾ ಖಾತೆಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಕೆಲವರು ಮೆಸೇಜ್ ಮಾಡಿ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಆಗ್ರಹಿಸಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಸಾಲದ್ದಕ್ಕೆ ರಮ್ಯಾ ಅವರಿಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಇನ್ಸ್ಟಾಗ್ರಾಮ್ನಲ್ಲಿ ನೇರವಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿದ್ದರು. ಅಶ್ಲೀಲ ಪದಗಳನ್ನು ಬಳಸಿ ಬೈದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ ಸ್ಕ್ರೀನ್ಶಾಟ್ ಸಮೇತ ಅಂತಹ ಕಿಡಿಗೇಡಿಗಳ ಬಣ್ಣ ಬಯಲು ಮಾಡಿದ್ದರು.

ನಟ ದರ್ಶನ್ ವಿರುದ್ಧ ಕೂಡ ರಮ್ಯಾ ಕೆಂಡ ಕಾರಿದ್ದರು. ದರ್ಶನ್ ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಬೇಕು. ಅವರು ಎಚ್ಚರಿಕೆ ಕೊಟ್ಟಿದ್ದರೆ ಯಾರು ಹೀಗೆ ಮೆಸೇಜ್ ಮಾಡುತ್ತಿರಲಿಲ್ಲ. ಈ ರೀತಿ ಕೆಟ್ಟದಾಗಿ ಮೆಸೇಜ್ ಮಾಡುವ ಅಭಿಮಾನಿಗಳಿವೆ ಬುದ್ಧಿ ಹೇಳಬೇಕಾಗಿದ್ದು ದರ್ಶನ್ ಜವಾಬ್ದಾರಿ ಎಂದು ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಸಂಬಂಧ ಸುದ್ದಿ ಆಗಿತ್ತು. ನಾನು ಅಂತಹ ಸುದ್ದಿ ಹಂಚಿಕೊಂಡಿದ್ದೆ. ಅದೇ ಕಾರಣಕ್ಕೆ ವಿವಿಧ ಇನ್ಸ್ಟಾಗ್ರಾಮ್ ಖಾತೆಗಳಿಂದ ಬಹಳ ಅಹಸ್ಯಕರ, ಅವಹೇಳಕಾರಿ ಮೆಸೇಜ್ಗಳನ್ನು ಕಳುಹಿಸಿದ್ದರು. ಆ ಮೆಸೇಜ್ಗಳು ಸ್ತ್ರೀದ್ವೇಷದಿಂದ ಕೂಡಿದ್ದು, ದೂರಿನಲ್ಲಿ ಉಲ್ಲೇಖಿಸಲು ಸಾಧ್ಯವಾಗ್ತಿಲ್ಲ. ಆ ಮೆಸೇಜ್ ಲಿಂಕ್ಗಳನ್ನು ದೂರಿನಲ್ಲಿ ಲಗತ್ತಿಸಿದ್ದೀನಿ. ದರ್ಶನ್ ಅಭಿಮಾನಿಗಳ ಪೋಸ್ಟ್ ಅತಿರೇಕ, ಕೊಳಕು ಹಾಗೂ ಬೆದರಿಕೆ ಒಡ್ಡುವಂತಿದೆ. ಹಾಗಾಗಿ ಕ್ರಮ ಕೈಗೊಳ್ಳಬೇಕು ಎಂದು ರಮ್ಯಾ ದೂರಿನಲ್ಲಿ ಆಗ್ರಹಿಸಿದ್ದಾರೆ.
ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಮೋದ್ ಗೌಡ ಎಂಬ ವ್ಯಕ್ತಿ ಸೇರಿ 44 ಜನರ ವಿರುದ್ಧ ಐಟಿ ಆಕ್ಟ್ ಹಾಗೂ ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು ಹೀಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಿಡಿಗೇಡಿಗಳ ಎದೆಯಲ್ಲಿ ನಡುಕ ಶುರುವಾದಂತಿದೆ. ಕೆಲವರು ರಮ್ಯಾ ಅವರಿಗೆ ಮೆಸೇಜ್ ಮಾಡಿ ಕ್ಷಮೆ ಕೇಳಿ ದೂರು ವಾಪಸ್ ಪಡೆಯುವಂತೆ ಮನವಿ ಮಾಡುತ್ತಿದ್ದಾರೆ ಎಂದು ಟಿವಿ9 ವಾಹಿನಿ ವರದಿ ಮಾಡಿದೆ.

ಯಾವ ಯಾವ ಸೋಶಿಯಲ್ ಮೀಡಿಯಾ ಅಕೌಂಟ್ಗಳಿಂದ ಕೆಟ್ಟದಾಗಿ ಮೆಸೇಜ್ ಬಂದಿತ್ತೋ ಅದೇ ಅಕೌಂಟ್ಗಳಿಂದ ದೂರು ವಾಪಸ್ ಪಡೆಯುವಂತೆ ಮನವಿ ಮಾಡಿ ಮೆಸೇಜ್ ಮಾಡುತ್ತಿದ್ದಾರಂತೆ. ರಮ್ಯಾ ಪರ ಈಗಾಗಲೇ ಕೆಲವರು ಧ್ವನಿ ಎತ್ತಿದ್ದಾರೆ. ವಿನಯ್ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಗೀತಾ ದಂಪತಿ ಕೂಡ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿ ಆಕೆಗೆ ಬೆಂಬಲ ಸೂಚಿಸಿದ್ದರು.
ಮತ್ತೊಂದು ಕಡೆ ಯಾರೂ ಕೂಡ ಯಾರ ಬಗ್ಗೆಯೂ ಕೆಟ್ಟದಾಗಿ ಮೆಸೇಜ್ ಮಾಡಬೇಡಿ ಎಂದು ದರ್ಶನ್ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. "ಡಿಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ, ರಿಯಾಕ್ಟ್ ಮಾಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ, ಪ್ರಚಾರಕ್ಕೆ ಆಗಲಿ, ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬೇಡಿ. ಬಾಸ್ ಫ್ಯಾನ್ಸ್ ಏನೆಂದು ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿಯಿದೆ ಈ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಮೆಟ್ಟಿಲು ಆಗಲಿ" ಎಂದು ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.


Click it and Unblock the Notifications











