ಸುದೀಪ್ ಸರ್ ಫ್ಯಾನ್ಸ್, ಯಶ್ ಸರ್ ಫ್ಯಾನ್ಸ್ ಯಾವತ್ತೂ ನನ್ನ ಕೈಬಿಟ್ಟಿಲ್ಲ ಎಂದ ಶಿವಣ್ಣ; ದರ್ಶನ್ ಫ್ಯಾನ್ಸ್ ಬಗ್ಗೆಯೂ ಮಾತು!
ಈ ವರ್ಷದ ಮೊದಲಾರ್ಧ ಮುಕ್ತಾಯವಾಗಿದ್ದು, ಸದ್ಯ ದ್ವಿತೀಯಾರ್ಧ ಆರಂಭಗೊಂಡಿದೆ. ಮೊದಲಾರ್ಧದಲ್ಲಿ ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ನೀಡುವಲ್ಲಿ ವಿಫಲವಾಗಿ ಮಕಾಡೆ ಮಲಗಿರುವ ಕನ್ನಡ ಚಲನಚಿತ್ರರಂಗ ದ್ವಿತೀಯಾರ್ಧದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ.
ಏಕೆಂದರೆ ಮುಂದಿನ ಆರು ತಿಂಗಳುಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಸಾಮರ್ಥ್ಯವಿರುವ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬರಲಿವೆ. ಈ ರೀತಿಯ ಭರವಸೆ ಮೂಡಿಸಿರುವ ಚಿತ್ರಗಳ ಪೈಕಿ ಶಿವರಾಜ್ಕುಮಾರ್ ಹಾಗೂ ಶ್ರೀನಿ ಕಾಂಬಿನೇಶನ್ನ ಘೋಸ್ಟ್ ಚಿತ್ರ ಸಹ ಒಂದು.

ಹೌದು, ಕಳೆದ ವರ್ಷ ವೇದ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿರುವ ಶಿವರಾಜ್ಕುಮಾರ್ ಘೋಸ್ಟ್ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾವಾಗಿರಲಿದೆ ಎಂಬುದನ್ನು ಶಿವಣ್ಣನ ಲುಕ್ಗಳೇ ಹೇಳುತ್ತಿವೆ. ಇನ್ನು ಈ ಹಿಂದೆ ಬೀರ್ಬಲ್, ಓಲ್ಡ್ ಮಾಂಕ್, ಟೋಪಿವಾಲ ರೀತಿಯ ಭಿನ್ನ ವಿಭಿನ್ನ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಶ್ರೀನಿ ನಿರ್ದೇಶನ ಈ ಚಿತ್ರಕ್ಕಿರುವುದು ಚಿತ್ರ ವೀಕ್ಷಿಸಲು ಸಿನಿ ರಸಿಕರು ಕಾತರತೆಯಿಂದ ಕಾಯಲು ಮತ್ತೊಂದು ಕಾರಣವಾಗಿದೆ.
ಹೀಗೆ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಘೋಸ್ಟ್ ಚಿತ್ರತಂಡ ತಾನು ಇಲ್ಲಿಯವರೆಗೂ ಬಿಡುಗಡೆ ಮಾಡಿರುವ ಪ್ರತಿಯೊಂದು ಅಪ್ಡೇಟ್ನಿಂದಲೂ ತನ್ನ ಹೈಪ್ ಹೆಚ್ಚಿಸುವ ಕೆಲಸವನ್ನು ಮಾಡಿದೆ. ಅದೇ ರೀತಿ ಶಿವರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿರುವ ಬಿಗ್ ಡ್ಯಾಡಿ ವಿಡಿಯೊ ಸಹ ಸಿನಿ ರಸಿಕರನ್ನು ಕೆರಳಿಸಿದೆ.
ಹೀಗೆ ಭಿನ್ನ ವಿಭಿನ್ನ ಮಾರ್ಗಗಳಿಂದ ಸದ್ದು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಘೋಸ್ಟ್ ಆನ್ಲೈನ್ನಲ್ಲಿ ತನ್ನದೇ ಹವಾ ಸೃಷ್ಟಿಸಿದ್ದು, ಚಿತ್ರತಂಡ ಟ್ವಿಟರ್ ಸ್ಪೇಸ್ನಲ್ಲಿ ಅಭಿಮಾನಿಗಳ ಜತೆ ಚರ್ಚಿಸುವ ಮೂಲಕ ಮತ್ತೊಂದು ಹಂತ ಮೇಲೇರಿ ಪ್ರಚಾರ ಮಾಡಿದೆ.
ಹೌದು, ಟ್ವಿಟರ್ನಲ್ಲಿ ಬಳಕೆದಾರರನ್ನು ಒಗ್ಗೂಡಿಸಿ ಸ್ಪೇಸ್ ಸೃಷ್ಟಿಸಿ ಅಲ್ಲಿ ಗುಂಪಾಗಿ ಚರ್ಚೆಗಳನ್ನು ಮಾಡಬಹುದು. ಗೂಗಲ್ ಮೀಟ್ ರೀತಿಯದ್ದೇ ಆಪ್ಷನ್ಗಳನ್ನು ಹೊಂದಿರುವ ಈ ಟ್ವಿಟರ್ ಸ್ಪೇಸ್ ಇತ್ತೀಚೆಗೆ ಖ್ಯಾತಿಯನ್ನು ಪಡೆದುಕೊಂಡಿದೆ. ಇನ್ನು ಇಂತಹ ವೇದಿಕೆಗೆ ಕನ್ನಡ ಚಲನಚಿತ್ರರಂಗದ ಲೆಜೆಂಡ್ ಶಿವರಾಜ್ಕುಮಾರ್ ಬಂದು ಮಾತನಾಡಿದ್ದು ಕೆಲವರಲ್ಲಿ ಆಶ್ಚರ್ಯ ಮೂಡಿಸಿದರೆ, ಎಷ್ಟೇ ಆಗಲಿ ದೊಡ್ಮನೆ ಗುಣ ಅಲ್ವಾ ಸರಳತೆ ರಕ್ತದಲ್ಲೇ ಇದೆ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿವೆ.
ಇನ್ನು ಈ ಸ್ಪೇಸ್ ಚರ್ಚೆಯಲ್ಲಿ ಮಾತನಾಡಿದ ಶಿವರಾಜ್ಕುಮಾರ್ ಘೋಸ್ಟ್ ಚಿತ್ರದ ಕುರಿತು ಮಾಹಿತಿ ಹಾಗೂ ಅನುಭವವನ್ನು ಹಂಚಿಕೊಂಡರು. ಅಲ್ಲದೇ ಕನ್ನಡ ಚಲನಚಿತ್ರರಂಗದ ನಟರ ಅಭಿಮಾನಿಗಳ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. "ಕನ್ನಡ ಚಲನಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳ ಬಗ್ಗೆ ನನಗೆ ಸಂತೋಷವಿದೆ. ಅಪ್ಪು ಡೈನಾಸ್ಟಿ ಇರಬಹುದು, ದರ್ಶನ್ ಫ್ಯಾನ್ಸ್ ಇರಬಹುದು, ಇಲ್ಲಂತಂದ್ರೆ ಸುದೀಪ್ ಸರ್ ಫ್ಯಾನ್ಸ್ ಇರಬಹುದು, ಯಶ್ ಸರ್ ಫ್ಯಾನ್ಸ್ ಇರಬಹುದು, ಧ್ರುವ ಸರ್ಜಾ ಫ್ಯಾನ್ಸ್ ಇರಬಹುದು. ಖಂಡಿತವಾಗಿ ಅಪ್ಪಾಜಿ ಯೂನಿವರ್ಸೆಲ್. ಅಪ್ಪಾಜಿ, ವಿಷ್ಣುವರ್ಧನ್, ಅಂಬರೀಶ್ ಅವರೆಲ್ಲಾ ಯೂನಿವರ್ಸಲ್. ಎಲ್ಲರ ಅಭಿಮಾನಿಗಳು ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ. ಬೆಂಬಲ ಹಾಗೂ ಪ್ರೀತಿಗಾಗಿ ಧನ್ಯವಾದಗಳು. ಏಕೆಂದರೆ ಅವರು ಶಿವಣ್ಣನ್ನ ಯಾವತ್ತೂ ಕೈಬಿಟ್ಟಿಲ್ಲ. ನನಗೆ ಅದೊಂದು ತುಂಬಾ ಹೆಮ್ಮೆ ಅನಿಸುತ್ತೆ. ಏಕೆಂದರೆ ನಾನು ಎಲ್ಲರ ಜತೆ ಚೆನ್ನಾಗಿದ್ದೇನೆ. ಅದೇ ಪ್ರೀತಿಯನ್ನು ನಾನು ಅವರಿಂದ ಪಡೆಯುತ್ತಿದ್ದೇನೆ. ಅವರಿಗೆ ತುಂಬಾ ಧನ್ಯವಾದಗಳು. ಇದೇ ರೀತಿ ಬೆಂಬಲಿಸ್ತಾ ಇರಿ. ಘೋಸ್ಟ್ ಭರವಸೆಯ ಚಿತ್ರವಾಗುತ್ತೆ ಎಂಬುದನ್ನು ನಾನು ಭರವಸೆಯಿಂದ ಹೇಳುತ್ತಿದ್ದೇನೆ" ಎಂದು ಶಿವರಾಜ್ಕುಮಾರ್ ಹೇಳಿದರು.


Click it and Unblock the Notifications











