Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಹೂಡಿದ ಷಡ್ಯಂತ್ರ ಇದು: ಉಮಾಪತಿ
ದರ್ಶನ್ ಹೆಸರಲ್ಲಿ ವಂಚನೆ ಮಾಡಲು ಯತ್ನಿಸಿರುವ ಪ್ರಕರಣ ದಿನೇ-ದಿನೇ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆ ದರ್ಶನ್ ಸುದ್ದಿಗೋಷ್ಠಿ ನಡೆಸಿ ಉಮಾಪತಿ ವಿರುದ್ಧ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ ನಂತರ ಉಮಾಪತಿ ಹಾಗೂ ಪ್ರಕರಣದ ಮುಖ್ಯ ಆರೋಪಿ ಅರುಣಾ ಕುಮಾರಿ ನಡುವಿನ ವಾಟ್ಸ್ಆಪ್ ಚಾಟ್, ಆಡಿಯೋಗಳು ಲೀಕ್ ಆಗಿವೆ.
Recommended Video
ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಂದು ಸುದ್ದಿಗೋಷ್ಠಿ ನಡೆಸಿ ದರ್ಶನ್ ಗೆಳೆಯರು ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದಿದ್ದಾರೆ. ಜೊತೆಗೆ ಪ್ರಕರಣ ಕುರಿತಾಗಿ ತಮ್ಮ ಭಾಗದ ವಿಷಯಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ.
''ಹರಾಜು ಬಂದ ಆಸ್ತಿಗಳನ್ನು ಕೊಂಡುಕೊಳ್ಳುವುದು ನನ್ನ ವ್ಯಾಪಾರಗಳಲ್ಲಿ ಒಂದು. ಅದೇ ವಿಷಯವಾಗಿ ಆ ಮಹಿಳೆ ಏಪ್ರಿಲ್ ತಿಂಗಳಲ್ಲಿ ಪರಿಚಯ ಆಗಿದ್ದರು. ಜೂನ್ ತಿಂಗಳಲ್ಲಿ ಆಕೆಯೇ ಸಂದೇಶ ಕಳಿಸಿ, ''ದರ್ಶನ್ ಸರ್ ಗ್ಯಾರಂಟಿಯರ್ ಆಗಿ ಹರ್ಷ ಹಾಗೂ ವಿನಯ್ ಎಂಬುವರು ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ'' ಎಂದರು. ನಾನು, ''ಹಾಗಿದ್ದರೆ ಅದರ ಮಾಹಿತಿ ನೀಡಿ ನಾನು ದರ್ಶನ್ ಅವರಿಗೆ ವಿಷಯ ತಿಳಿಸುತ್ತೇನೆ'' ಎಂದಿದ್ದೆ. ಅಂತೆಯೇ ದರ್ಶನ್ ಸಹ ಆ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರ ಅನುಮತಿ ಪಡೆದುಕೊಂಡೇ ನಾನು ಆಕೆಗೆ ದರ್ಶನ್ ಅವರ ಆಧಾರ್ ಕಾರ್ಡ್ನ ಚಿತ್ರ ಕಳಿಸಿದ್ದೆ'' ಎಂದಿದ್ದಾರೆ ಉಮಾಪತಿ.
''ನಾನು ಅಶ್ಲೀಲವಾಗಿ ಮಾತನಾಡಿರುವುದು ಏನಾದರೂ ಕಂಡಿದೆಯಾ?''
''ನಾನು ಆಕೆಯೊಂದಿಗೆ ಮಾತನಾಡಿರುವ ವಾಟ್ಸ್ಆಪ್ ಸಂದೇಶ, ವಾಯ್ಸ್ ಸಂದೇಶಗಳೆಲ್ಲವೂ ವೈರಲ್ ಆಗಿವೆ. ಎಲ್ಲಿಯಾದರೂ ನಾನು ಅಶ್ಲೀಲವಾಗಿ ಮಾತನಾಡಿರುವುದು ಕಂಡು ಬಂದಿದೆಯಾ?. ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಕಂಡಿದೆಯಾ? ನನ್ನ ಕುಟುಂಬಕ್ಕೆ ಹಾನಿ ಮಾಡಿಕೊಳ್ಳುವ ರೀತಿಯಲ್ಲಿ ಮಾತನಾಡಿರುವುದು, ನಾನು ಮುಜುಗರ ಅನುಭವಿಸುವಂಥಹದ್ದು ಏನಾದರೂ ನಾನು ಅಥವಾ ಆಕೆ ಮಾತನಾಡಿರುವುದು ಕಂಡು ಬಂದಿದೆಯಾ?'' ಎಂದು ಪ್ರಶ್ನೆ ಮಾಡಿದ್ದಾರೆ ಉಮಾಪತಿ.
ಹರ್ಷ ಮೆಲಂಟಾ ತಪ್ಪು ದೂರವಾಣಿ ಸಂಖ್ಯೆ ಕೊಟ್ಟಿರುವುದು ಏಕೆ?
ದರ್ಶನ್ ಗೆಳೆಯರ ಬಗ್ಗೆ ಮಾತನಾಡಿರುವ ಉಮಾಪತಿ, ''ಹರ್ಷಾ ಮೆಲಂಟಾ ನೀಡಿರುವ ದೂರಿನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಏಕೆ ನಮೂದಿಸಿದ್ದಾರೆ?. ಹರ್ಷಾ, ರಾಕೇಶ್ ಪಾಪಣ್ಣ ಹಾಗೂ ಇತರರು ಏಕೆ ಆ ಮಹಿಳೆಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾತನಾಡಿದರು? ಆಕೆಯ ಮೊಬೈಲ್ ಅನ್ನು ಏಕೆ ಕಿತ್ತುಕೊಂಡರು? ಜೂನ್ 18 ರಂದು ದರ್ಶನ್ ಎದುರು ಆಕೆಯನ್ನು ಕರೆದುಕೊಂಡು ಹೋದಾಗ ನನ್ನನ್ನು ಏಕೆ ಕರೆಯಲಿಲ್ಲ?'' ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ.
ರಾಕೇಶ್, ಹರ್ಷ ವಿರುದ್ಧ ಮಹಿಳೆ ಹೇಳಿಕೆ ಕೊಟ್ಟಿದ್ದಾಳೆ: ಉಮಾಪತಿ
''ರಾಕೇಶ್ ಹಾಗೂ ಹರ್ಷ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆ ಮಹಿಳೆ ಜಯನಗರ ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾಳೆ. ಆದರೆ ಮೈಸೂರಿನಲ್ಲಿ ಸಂಪೂರ್ಣ ವಿರುದ್ಧವಾಗಿ ಮಾತನಾಡಿದ್ದಾಳೆ. ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಎದುರು ಆ ಮಹಿಳೆ ತನ್ನ ಹೇಳಿಕೆ ರೆಕಾರ್ಡ್ ಮಾಡಿದ್ದಾರೆ. ಅದು ದರ್ಶನ್ ಅವರಿಗೂ ಗೊತ್ತಿದೆ. ಅದಕ್ಕೂ ಮುನ್ನ ನಾನು ದರ್ಶನ್ ಅವರಿಗೆ ಕಾನ್ಫರೆನ್ಸ್ ಕಾಲ್ ಹಾಕಿ ಮಹಿಳೆ ದರ್ಶನ್ ಬಳಿ ಮಾತನಾಡುವಂತೆ ಮಾಡಿದ್ದೆ'' ಎಂದಿದ್ದಾರೆ ಉಮಾಪತಿ.
ನನ್ನ ತೇಜೋವಧೆ ಮಾಡುವ ಪ್ರಯತ್ನ: ಉಮಾಪತಿ
''ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಹೂಡಿರುವ ಷಡ್ಯಂತ್ರದಂತೆ ಇದು ಗೋಚರವಾಗುತ್ತಿದೆ. ನನಗೆ ದೇವರು ಒಳ್ಳೆಯ ವ್ಯಾಪಾರ ಕೊಟ್ಟಿದ್ದಾನೆ. 25 ಕೋಟಿ ಹಣ ನನಗೆ ದೊಡ್ಡದ್ದೇನೂ ಅಲ್ಲ. ನಾನು ತಪ್ಪು ಮಾಡಿದ್ದಿದ್ದರೆ ನಾನು ನಿನ್ನೆ ವಿಚಾರಣೆಗೆ ಹೋಗುತ್ತಿರಲಿಲ್ಲ. ಅಥವಾ ಲಾಯರ್ ಅನ್ನು ಕರೆದುಕೊಂಡೇ ಹೋಗುತ್ತಿದ್ದೆ. ನಾನು ತಪ್ಪು ಮಾಡಿಲ್ಲ. ದರ್ಶನ್ ಹೇಳಿರುವಂತೆ ಪ್ರಕರಣದ ಸತ್ಯಾಂಶ ಹೊರಗೆ ಬರುವವರೆಗೂ ಕಾಯುತ್ತೀನಿ. ನನಗೆ ಮೈಸೂರು ಪೊಲೀಸರ ಮೇಲೂ ನಂಬಿಕೆ ಇದೆ, ಬೆಂಗಳೂರು ಪೊಲೀಸರ ಮೇಲೂ ನಂಬಿಕೆ ಇದೆ'' ಎಂದಿದ್ದಾರೆ ಉಮಾಪತಿ.
''ಮೈಸೂರು ಪೊಲೀಸರನ್ನು ಹ್ಯಾಂಡಲ್ ಮಾಡ್ತೀನಿ ಎಂದಿದ್ದ ರಾಕೇಶ್''
''ನನಗೆ ಬೆಂಗಳೂರು ಪೊಲೀಸರ ಮೇಲೆ ನಂಬಿಕೆ ಇಲ್ಲ, ನಾನು ಇದನ್ನು ಮೈಸೂರು ಪೊಲೀಸರಿಗೆ ಒಪ್ಪಿಸುತ್ತೇನೆ. ಅವರನ್ನು ನಾನು ಹ್ಯಾಂಡಲ್ ಮಾಡುತ್ತೇನೆ. ಅವರೆಲ್ಲ ನನ್ನ ಪಬ್ಗೆ ಬರುತ್ತಾರೆ'' ಎಂದು ರಾಕೇಶ್, ನನ್ನ ಹಾಗೂ ನನ್ನ ಅಣ್ಣನ ಎದುರು ನನ್ನ ಕಚೇರಿಯಲ್ಲಿಯೇ ಕುಳಿತುಕೊಂಡು ಹೇಳಿದ್ದ. ಆದರೆ ನನಗೆ ಎರಡೂ ನಗರದ ಪೊಲೀಸರ ಮೇಲೆ ನಂಬಿಕೆ ಇದೆ. ನನಗೆ ದರ್ಶನ್ ಮೇಲೆಯೂ ಗೌರವ ಇದೆ. ಪೊಲೀಸರು ಪ್ರಕರಣ ನಡೆಸಲಿ ಸತ್ಯ ಹೊರಬರಲಿ ಎಂದು ನಾನು ಸಹ ಕಾಯುತ್ತಿದ್ದೇನೆ'' ಎಂದಿದ್ದಾರೆ ಉಮಾಪತಿ.