ಅಭಿಮಾನಿಯ ಎಡವಟ್ಟು; ನೋವಿನಿಂದ ಚೀರಿದ ದರ್ಶನ್
ನಟ ದರ್ಶನ್ ಜೈಲು ಸೇರಿ 4 ತಿಂಗಳಾಗಿದ್ದರೂ ಇನ್ನು ಜಾಮೀನು ಸಿಕ್ಕಿಲ್ಲ. ಬೆನ್ನುನೋವಿನಿಂದ ದರ್ಶನ್ ಬಳಲುತ್ತಿದ್ದು ವೈದ್ಯರು ಫಿಜಿಯೋಥೆರಪಿ ಆರಂಭಿಸಿದ್ದಾರೆ. ಚಿಕಿತ್ಸೆಯ ನೆಪವೊಡ್ಡಿ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. 57ನೇ ಸಿಸಿಎಚ್ ಕೋರ್ಟ್ನಲ್ಲಿ ದರ್ಶನ್ಗೆ ಜಾಮೀನು ಸಿಕ್ಕಿರಲಿಲ್ಲ.
ಅಕ್ಟೋಬರ್ 22ರಂದು ಹೈಕೋರ್ಟ್ನಲ್ಲಿ ಮೊದಲ ಬಾರಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ದರ್ಶನ್ ಪರ ಸಿವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಎಂಆರ್ಐ ಸ್ಕ್ಯಾನಿಂಗ್ಗಾಗಿ ನಿನ್ನೆ ರಾತ್ರಿ(ಅಕ್ಟೋಬರ್ 22) ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನೆಚ್ಚಿನ ನಟ ಜೈಲಿನಿಂದ ಹೊರಬರುವ ವಿಚಾರ ತಿಳಿದು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ತಳ್ಳಾಟ ನೂಕಾಟವೂ ನಡೆಯಿತು.

ದಿನದಿಂದ ದಿನಕ್ಕೆ ದರ್ಶನ್ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕುಟುಂಬಸ್ಥರನ್ನು ಭೇಟಿ ಮಾಡಲು ದರ್ಶನ್ ಬಳ್ಳಾರಿ ಜೈಲಿನ ಸೆಲ್ನಿಂದ ಹೊರ ಬರುವ ದೃಶ್ಯಗಳಲ್ಲಿ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತಾಗುತ್ತಿದೆ. ಪತ್ನಿ ವಿಜಯಲಕ್ಷ್ಮಿ ತೆಗೆದುಕೊಂಡು ಹೋದ ಬ್ಯಾಗ್ಗಳನ್ನು ಹೊತ್ತೊಯ್ಯಲು ದರ್ಶನ್ ಕಷ್ಟಪಡುತ್ತಿರುವುದನ್ನು ನೋಡಬಹುದು. ಅಷ್ಟರಮಟ್ಟಿಗೆ ಬೆನ್ನು ನೋವು ಭಾದಿಸುತ್ತಿದೆ.
ಹಲವು ದಿನಗಳಿಂದ ಜೈಲಿನ ಒಳಗೆ ದರ್ಶನ್ ಆರೋಗ್ಯ ತಪಾಸಣೆ ನಡೆಯುತ್ತಿದೆ. ವಿಮ್ಸ್ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ನೇತೃತ್ವದಲ್ಲಿ ತಪಾಸಣೆ ನಡೆಸಿದ ಬಳಿಕ ಪೊಲೀಸರು ಮತ್ತೆ ದರ್ಶನ್ ಅವರನ್ನು ಜೈಲಿಗೆ ವಾಪಸ್ ಕರೆದೊಯ್ದರು. ಈ ವೇಳೆ ಅಭಿಮಾನಿಗಳು 'ಜೈ ಡಿಬಾಸ್' ಘೋಷಣೆ ಕೂಗಿದರು. ಇದೇ ವೇಳೆ ಗುಂಪಿನಲ್ಲಿ ಅಭಿಮಾನಿಯೊಬ್ಬ ದರ್ಶನ್ ಕೈ ಹಿಡಿದು ಎಳೆದ ಘಟನೆಯೂ ನಡೆಯಿತು.
ದರ್ಶನ್ ಪೊಲೀಸ್ ವ್ಯಾನ್ ಏರಲು ಮತ್ತೆ ಇಳಿಯಲು ಬಹಳ ಕಷ್ಟಪಟ್ಟಂತೆ ಕಂಡುಬಂತು. ಇನ್ನು ಕೈ ನೋವಿನಿಂದಲೂ ದರ್ಶನ್ ಬಳಲುತ್ತಿದ್ದಾರೆ. ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಾಪಸ್ ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಅಭಿಮಾನಿಯೊಬ್ಬ ಗುಂಪಿನಲ್ಲಿ ತೂರಿ ಹೋಗಿ ದರ್ಶನ್ ಕೈ ಹಿಡಿದು ಎಳೆದಿದ್ದಾನೆ. ನೋವು ತಾಳಲಾರದೇ ದರ್ಶನ್ ಒಂದು ಕ್ಷಣ ಗರಂ ಆಗಿದ್ದರು. ಈ ವೀಡಿಯೋ ವೈರಲ್ ಆಗುತ್ತಿದೆ.
ಬಾಸ್ ಬಹಳ ನೋವಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಅಭಿಮಾನಿಗಳು ಯಾರು ಕೈ ಹಿಡಿದು ಎಳೆದು ಮತ್ತಷ್ಟು ನೀವು ಕೊಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ 'ಡೆವಿಲ್' ಸಿನಿಮಾ ಚಿತ್ರೀಕರಣದ ವೇಳೆ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಬಳಿಕ ಸರ್ಜರಿ ಮಾಡಲಾಗಿತ್ತು. ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಹೋದಾಗಲೇ ಕೆಲವರು ಅವರ ಕೈ ಹಿಡಿದು ಎಳೆದಿದ್ದರು. ಕಾರ್ಯಕ್ರಮವೊಂದರಲ್ಲಿ ದರ್ಶನ್ ಯಾರು ಹಿಡಿದು ಎಳೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಶತಾಯಗತಾಯ ಹೈಕೋರ್ಟ್ನಲ್ಲಿ ಜಾಮೀನು ಕೊಡಿಸಲು ಮುಂದಾಗಿದ್ದಾರೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಅವರ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಅವರನ್ನು ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ಕೂಡಲೇ ಜಾಮೀನು ನೀಡಬೇಕು ಎಂದು ಸಿವಿ ನಾಗೇಶ್ ಕೋರಿದ್ದಾರೆ. ದರ್ಶನ್ ಆರೋಗ್ಯಸ್ಥಿತಿ ವರದಿ ನೀಡುವಂತೆ ಜೈಲಾಧಿಕಾರಿಗಳಿಗೆ ತಿಳಿಸಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದ್ದಾರೆ.


Click it and Unblock the Notifications











