ಜೈಲಿನಿಂದ ಹೊರಬರುತ್ತಿರುವ ದರ್ಶನ್; ರೇಣುಕಾಸ್ವಾಮಿ ತಂದೆ ಫಸ್ಟ್ ರಿಯಾಕ್ಷನ್
ಕೊನೆಗೂ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಚಿಕಿತ್ಸೆಗಾಗಿ ಹೈಕೋರ್ಟ್ 6 ವಾರಗಳ ಕಾಲ ದರ್ಶನ್ ಹೊರಗಡೆ ಇರಲು ಅವಕಾಶ ಮಾಡಿಕೊಟ್ಟಿದೆ. ಅಭಿಮಾನಿಗಳು, ಆಪ್ತರು ಸಂಭ್ರಮಿಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ದರ್ಶನ್ ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಪತಿ ದರ್ಶನ್ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸಿದ್ದರು. ಕಾನೂನು ಹೋರಾಟದ ಜೊತೆಗೆ ದೇವರಿಗೆ ಹರಕೆ ಹೊತ್ತಿದ್ದರು. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು. ದರ್ಶನ್ ಆರೋಗ್ಯ ಸಮಸ್ಯೆ ನೆಪವೊಡ್ಡಿ ಜಾಮೀನು ಕೊಡಬೇಕು ಎಂದು ಮನವಿ ಮಾಡಿದ್ದರು. ಆದರೆ ಸದ್ಯಕ್ಕೆ ಮಧ್ಯಂತರ ಜಾಮೀನು ಸಿಕ್ಕಿದೆ.

ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕ ಬಗ್ಗೆ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನೋವಿನ ನಡುವೆಯೂ ನ್ಯಾಯಾಲಯದ ಆದೇಶವನ್ನು ಅವರು ಗೌರವಿಸಿದ್ದಾರೆ. "ಕಾನೂನು ವ್ಯವಸ್ಥೆಯಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಅದನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ನಂಬಿಕೆ ಇದೆ. ಕಾನೂನು, ಪೋಲಿಸರ ಮೇಲೆ ನಂಬಿಕೆ ಇದೆ" ಎಂದಿದ್ದಾರೆ.
ದರ್ಶನ್ ಚಿಕಿತ್ಸೆ, ವೈದ್ಯರು, ಕೋರ್ಟ್ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾವು ಮಾತಾಡಲ್ಲ. ನಮಗೆ ಸಂಬಂಧವೂ ಇಲ್ಲ. ತಪ್ಪು ಮಾಡಿವರಿಗೆ ಶಿಕ್ಷೆ ಆಗಬೇಕು ಎನ್ನುವುದಷ್ಟೆ ನಮ್ಮ ಆಗ್ರಹ. ಕಾನೂನು ಹೋರಾಟ ಮುಂದುವರೆಸುತ್ತೇವೆ" ಎಂದು ಕಾಶಿನಾಥಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿತ್ತು. ಈ ವಿಚಾರ ದರ್ಶನ್ಗೆ ಗಮನಕ್ಕೆ ಬಂದು ಆತನನ್ನು ಚಿತ್ರದುರ್ಗದಿಂದ ಆಪ್ತರ ಮೂಲಕ ಅಪಹರಿಸಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡಲಾಗಿತ್ತು. ಈ ವೇಳೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದರು ಎನ್ನುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿತ್ತು.


Click it and Unblock the Notifications











