ಹೆಲಿಕಾಪ್ಟರ್ ಪ್ಲ್ಯಾನ್ ಏನಾಯ್ತು? ಬಳ್ಳಾರಿ ಜೈಲಿನಿಂದ ದರ್ಶನ್ ಹೋಗುವುದು ಎಲ್ಲಿಗೆ?
ನಟ ದರ್ಶನ್ ಅಭಿಮಾನಿಗಳ ಪ್ರಾರ್ಥನೆ ಈಡೇರಿದೆ. ಚಿಕಿತ್ಸೆಗಾಗಿ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ. ಈ ಸುದ್ದಿ ಕೇಳಿ ದರ್ಶನ್ ಹಾಗೂ ಆಪ್ತರು, ಅಭಿಮಾನಿಗಳು ಖುಷಿಯಾಗಿದ್ದಾರೆ. ಸಂಜೆ ವೇಳೆಗೆ ದರ್ಶನ್ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಜನ ಆರೋಪಿಗಳು ವಿಚಾರಣಧೀನ ಕೈದಿಗಳಾಗಿ ಜೈಲಿನಲ್ಲಿ ಇದ್ದರು. ಅದರಲ್ಲಿ 5 ಮಂದಿಗೆ ಈಗಾಗಲೇ ಜಾಮೀನು ಸಿಕ್ಕಿತ್ತು. ಇದೀಗ ದರ್ಶನ್ ಮಧ್ಯಂತರ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಗ್ಯ ಸಮಸ್ಯೆ ನೆಪವೊಡ್ಡಿ ಚಿಕಿತ್ಸೆಗಾಗಿ ದರ್ಶನ್ 6 ವಾರಗಳ ಮಧ್ಯಂತ ಜಾಮೀನು ಪಡೆದಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು.

ನಿನ್ನೆಯೇ ನಟ ದರ್ಶನ್ಗೆ ಮಧ್ಯಂತರ ಜಾಮೀನು ಸಿಗುವ ಆಶಾಭಾವನೆ ಮೂಡಿತ್ತು. ಅದರಂತೆ ಇಂದು ಹೈಕೋರ್ಟ್ ಆದೇಶ ಹೊರ ಬಿದ್ದಿದೆ. ದರ್ಶನ್ಗೆ ರಿಲೀಫ್ ಸಿಕ್ಕಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಪತ್ನಿ ವಿಜಯಲಕ್ಷ್ಮಿ ಕೂಡ ದೇವರ ಪ್ರಾರ್ಥನೆ ಫಲಿಸಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಸ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಒಂದಷ್ಟು ಷರತ್ತುಗಳನ್ನು ವಿಧಿಸಿ ನಟ ದರ್ಶನ್ಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಪಾಸ್ಪೋರ್ಟ್ ಸರೆಂಡರ್ ಮಾಡುವಂತೆ ಸೂಚಿಸಲಾಗಿದೆ. ತಮಗೆ ಇಷ್ಟಬಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಲಾಗಿದೆ. ವಾರದ ಒಳಗೆ ಚಿಕಿತ್ಸೆಯ ವರದಿ ನೀಡುವಂತೆ ಕೋರ್ಟ್ ಸೂಚಿಸಿದೆ.
ಹೈಕೋರ್ಟ್ ಆದೇಶದ ಪ್ರತಿ ಬಳ್ಳಾರಿ ಜೈಲಿಗೆ ತಲುಪಿದ ಬಳಿಕ ಪ್ರಕ್ರಿಯೆ ಮುಗಿಸಿ ದರ್ಶನ್ ಹೊರ ಬರಲಿದ್ದಾರೆ. ಕುಟುಂಬಸ್ಥರು ಕೂಡಲೇ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಕರೆತರಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್ ಹೆಲಿಕಾಪ್ಟರ್ನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ರಸ್ತೆ ಮಾರ್ಗವಾಗಿ ಬಂದರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಹಾಗಾಗಿ ಹೆಲಿಕಾಪ್ಟರ್ನಲ್ಲಿ ಕರೆತರಲು ಆಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.
ಸದ್ಯ ಫಿಲ್ಮಿಬೀಟ್ಗೆ ದರ್ಶನ್ ಆಪ್ತರು ಮಾಹಿತಿ ನೀಡಿದ್ದಾರೆ. ಹೆಲಿಕಾಪ್ಟರ್ನಲ್ಲಿ ದರ್ಶನ್ ಅವರನ್ನು ಕರೆತರಲು ಸಾಧ್ಯವಿಲ್ಲ. ಸುಖಾ ಸುಮ್ಮನೆ ಸಮಸ್ಯೆ ಆಗುತ್ತಿದೆ. ಇದು ಮಧ್ಯಂತರ ಜಾಮೀನು ಮಾತ್ರ. ಹಾಗಾಗಿ ಕಾನೂನಿನಲ್ಲಿ ಕೂಡ ಇದಕ್ಕೆ ಅವಕಾಶ ಸಿಗಲ್ಲ, ರಸ್ತೆ ಮಾರ್ಗವಾಗಿಯೇ ದರ್ಶನ್ ಬಳ್ಳಾರಿಯಿಂದ ಮೈಸೂರಿಗೆ ಬಂದು ತಲುಪುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ದರ್ಶನ್ ಮೈಸೂರಿನಲ್ಲಿ ಮೊದಲಿಗೆ ತಮ್ಮ ತಾಯಿ ಮನೆಗೆ ಭೇಟಿ ನೀಡಲಿದ್ದಾರೆ. ತಾಯಿಯ ಆಶೀರ್ವಾದ ಪಡೆಯಲಿದ್ದಾರೆ. ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೂಡ ನಟ ದರ್ಶನ್ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇನ್ನು ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕ ವಿಚಾರ ಪ್ರೇಯಸಿ ಪವಿತ್ರಾ ಗೌಡಗೂ ಸಂತಸ ತಂದಿದೆ ಎಂದು ತಿಳಿದುಬಂದಿದೆ. ನನ್ನಿಂದಲೇ ದರ್ಶನ್ಗೆ ಸಂಕಷ್ಟ ಎದುರಿಸುವಂತಾಗಿತ್ತು, ಈಗ ಕೊಂಚ ರಿಲೀಫ್ ಸಿಕ್ಕಿದೆ ಎಂದು ಆಕೆ ನಿರಾಳರಾಗಿರುವುದಾಗಿ ವರದಿಯಾಗಿದೆ. ಅತ್ತ ದಾವಣಗೆರೆಯಲ್ಲಿ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಪ್ರತಿಕ್ರಿಯಿಸಿದ್ದಾರೆ. ನಮಗೆ ಅನ್ಯಾಯವಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ದರ್ಶನ್ಗೆ ಜಾಮೀನು ಸಿಕ್ಕಿರುವುದು ಕಾನೂನು ಕ್ರಮ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.
ಹೈಕೋರ್ಟ್ನಿಂದ ನಟ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಆರ್ಆರ್ ನಗರದ ನಿವಾಸವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದೆ. ಮನೆಯ ಸಿಬ್ಬಂದಿ ಮನೆ ಮುಂದೆ ನೀರು ಹಾಕಿ ಸ್ವಚ್ಚಗೊಳಿಸುತ್ತಿದ್ದಾರೆ. ಅತ್ತ ಬಳ್ಳಾರಿ ಜೈಲಿನ ಮುಂದೆ ಪೊಲೀಸ್ ಬಿಗಿಭದ್ರತೆ ಒದಗಿಸಲಾಗುತ್ತಿದೆ.


Click it and Unblock the Notifications











