'ಕರುನಾಡ ಕರ್ಣ' ದರ್ಶನ್ ಹೃದಯ ಶ್ರೀಮಂತಿಕೆಗೆ ಇಲ್ಲೊಂದು ಸಾಕ್ಷಿ
ಚಂದನವನದ ನಟ ದರ್ಶನ್ ಕೇವಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ. ಹೊಸ ಕಲಾವಿದರಿಗೆ ಪ್ರೊತ್ಸಾಹ ನೀಡುವುದರ ಜೊತೆಗೆ ಚಿತ್ರದ ಆಡಿಯೋ , ಟ್ರೇಲರ್ ಸಮಾರಂಭಗಳಿಗೆ ಆಗಮಿಸಿ ಪರೋಕ್ಷವಾಗಿ ಚಿತ್ರಗಳಿಗೆ ಬೆಂಬಲವಾಗಿ ನಿಲ್ಲುತ್ತಾ ಬಂದಿದ್ದಾರೆ.
ವೃತಿಯಲ್ಲಿ ಕಲಾವಿದನಾಗಿರುವ ದರ್ಶನ್ ಪ್ರಾಣಿ ಪ್ರಿಯ. ದರ್ಶನ್ ಅವರಿಗೆ ಹಿರಿಯರಷ್ಟೇ ಕಿರಿಯ ಅಭಿಮಾನಿಗಳು ಕೂಡ ಇದ್ದಾರೆ. ಇಂತಹ ಕಿರಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಚಾಲೆಂಜಿಂಗ್ ಸ್ಟಾರ್ ನೆರವು ನೀಡಿದ್ದಾರೆ.
ಸಾಲು ಸಾಲಾಗಿ ಸರ್ಕಾರಿ ಶಾಲೆಗಳು ಕಣ್ಮರೆ ಆಗುತ್ತಿರುವ ಸಮಯದಲ್ಲಿ ಡಿ ಬಾಸ್ ಕನ್ನಡ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ನೆರವಾಗುವ ಮೂಲಕ ಮಕ್ಕಳನ್ನ ಸರ್ಕಾರಿ ಶಾಲೆಯ ಕಡೆ ಬರುವಂತೆ ಮಾಡುತ್ತಿದ್ದಾರೆ. ಹಾಗಾದ್ರೆ ದರ್ಶನ್ ಯಾವ ರೀತಿಯಲ್ಲಿ ಮಕ್ಕಳಿಗೆ ನೆರವು ನೀಡಿದ್ದಾರೆ? ಅದು ಯಾವ ಶಾಲೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಕನ್ನಡ ಪಾಠ ಶಾಲೆಯ ಮಕ್ಕಳಿಗೆ ದರ್ಶನ್ ಸಾಥ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನ ಬಬಲಾದ್ ಗ್ರಾಮದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಟ್ಯಾಬ್ ಗಳನ್ನ ನೀಡಿದ್ದಾರೆ. ವಿಧ್ಯಾಭ್ಯಾಸಕ್ಕೆ ಉಪಯಕ್ತ ಆಗಲಿ ಎಂದು ಈ ಕೆಲಸ ಮಾಡಿದ್ದಾರೆ.

ಕನ್ನಡ ಶಾಲಾ ಮಕ್ಕಳಿಗೆ ಟ್ಯಾಬ್
ಬಬಲಾದ್ ಗ್ರಾಮದ ಕನ್ನಡದ ಶಾಲೆಗೆ ದರ್ಶನ್ 30 ಟ್ಯಾಬ್ ಗಳನ್ನ ನೀಡಿದ್ದಾರೆ. ಈಗಾಗಲೇ ಮಕ್ಕಳು ಟ್ಯಾಬ್ ಗಳನ್ನ ಬಳಸುತ್ತಿದ್ದು ಕನ್ನಡ ಮಾಧ್ಯಮಗಳಲ್ಲಿ ಡಿಜಿಟಲೀಕರಣ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.

ಶಿಕ್ಷಕನ ಜೊತೆ ಕೈ ಜೋಡಿಸಿದ ದರ್ಶನ್
ಮಹಾರಾಷ್ಟ್ರದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಲಿಯ ಶಿಕ್ಷಕ ಶರಣಪ್ಪ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಇದನ್ನ ತಿಳಿದುಕೊಂಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಸಹಾಯದಿಂದ ಬೆಂಗಳೂರಿಗೆ ಶರಣಪ್ಪ ಅವರನ್ನ ಕರೆಸಿಕೊಂಡು ಟ್ಯಾಬ್ ಗಳನ್ನ ಕೊಟ್ಟು ಕಳುಹಿಸಿದ್ದಾರೆ.

ಕನ್ನಡ ಪ್ರೇಮಿಯಾದ ದರ್ಶನ್
ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಿ ಹೋಗುತ್ತಿವೆ. ಆದರೆ ದರ್ಶನ್ ಮಹಾರಾಷ್ಟ್ರದಲ್ಲಿರುವ ಶಾಲೆಗೆ ಟ್ಯಾಬ್ ನೀಡಿ ಅಲ್ಲಿಯ ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲೆ ಪ್ರೀತಿ ಹೆಚ್ಚಾಗುವಂತೆ ಮಾಡಿದ್ದಾರೆ.


Click it and Unblock the Notifications











