ಯಾರಿಗೂ ತಿಳಿಸದೇ ಸತ್ಯ ಕುಟುಂಬಕ್ಕೆ ಸಹಾಯ ಮಾಡಿದ ದರ್ಶನ್!
ದರ್ಶನ್ ಪರೋಪಕಾರಿ ಗುಣದ ಬಗ್ಗೆ ಬಹುತೇಕರಿಗೆ ಗೊತ್ತಿರುವುದೇ. ಸಿನಿಮಾ ರಂಗದಲ್ಲಿ ಹೊಸಬರಿಗೆ ಅವರು ಮಾಡುವ ಸಹಾಯ, ಗೆಳೆಯರಿಗೆ ನೀಡಿರುವ ನೆರವು, ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗಿರುವ ಕಾಳಜಿ ದರ್ಶನ್ರ ಇತರೆ ಮಾನವೀಯ ಕಾರ್ಯಗಳ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇವೆ. ಈ ಉದಾಹರಣೆಗಳ ಪಟ್ಟಿಗೆ ಈಗ ಹೊಸದೊಂದು ಘಟನೆ ಸೇರಿಕೊಂಡಿದೆ.
ನಟ ದರ್ಶನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಮೆಜೆಸ್ಟಿಕ್' ಬಿಡುಗಡೆ ಆಗಿ ಇಪ್ಪತ್ತು ವರ್ಷವಾಗಿದ್ದು, ಈ ಖುಷಿಯ ಸಂದರ್ಭ ಸೆಲೆಬ್ರೇಟ್ ಮಾಡಲು ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ನಿರ್ಮಾಪಕರು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.
ದರ್ಶನ್ ನಟನೆಯ ಮೊದಲ ಸಿನಿಮಾದ ನಿರ್ದೇಶಕ ದಿವಂಗತ ಪಿ.ಎನ್.ಸತ್ಯ ಅವರ ಕುಟುಂಬ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಪಿ.ಎನ್.ಸತ್ಯ ಅವರನ್ನು ನೆನಪಿಸಿಕೊಂಡಿದ್ದ ದರ್ಶನ್, ನಮ್ಮ ಕುಟುಂಬ ಅವರಿಗೆ ಆಭಾರಿಯಾಗಿರುವುದಾಗಿ ಹೇಳಿದ್ದರು. 'ಮೆಜೆಸ್ಟಿಕ್' ಮಾತ್ರವೇ ಅಲ್ಲದೆ ದರ್ಶನ್ ನಟನೆಯ 'ಸರ್ದಾರ', 'ದಾಸ', 'ಶಾಸ್ತ್ರಿ', 'ತಂಗಿಗಾಗಿ' ಸಿನಿಮಾಗಳನ್ನು ಪಿ.ಎನ್.ಸತ್ಯ ಅವರೇ ನಿರ್ದೇಶನ ಮಾಡಿದ್ದರು.

ನೆರವು ನೀಡಿದ ದರ್ಶನ್
ಆದರೆ ವಿಷಯ ಅದಲ್ಲ, ಪಿ.ಎನ್.ಸತ್ಯ ಅವರನ್ನು ಕೇವಲ ಬಾಯುಪಚಾರಕ್ಕೆ ನೆನಪಿಸಿಕೊಳ್ಳಲಿಲ್ಲ ನಟ ದರ್ಶನ್. ಬದಲಿಗೆ ಯಾರಿಗೂ ತಿಳಿಯದಂತೆ ಪಿ.ಎನ್.ಸತ್ಯ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ನೀಡಿ ಸಹಾಯವನ್ನೂ ಮಾಡಿದ್ದಾರೆ. ಈ ವಿಷಯವನ್ನು ದರ್ಶನ್ರ ಬಹು ವರ್ಷದ ಆಪ್ತ ಗೆಳೆಯ ಅಣಜಿ ನಾಗರಾಜ್ ಅವರು ಹೇಳಿದ್ದಾರೆ.

ಸತ್ಯ ಕುಟುಂಬಕ್ಕೆ ದರ್ಶನ್ ನೆರವು
ಯೂಟ್ಯೂಬ್ ಚಾನೆಲ್ ಒಂದರೊಟ್ಟಿಗೆ ಮಾತನಾಡಿರುವ ಅಣಜಿ ನಾಗರಾಜ್, ''ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಪಿ.ಎನ್.ಸತ್ಯ ಅವರ ಪತ್ನಿ ಮತ್ತು ಕುಟುಂಬ ಭಾಗವಹಿಸಿತ್ತು. ಅಂದು ಸತ್ಯ ಅವರ ಪತ್ನಿಗೆ ಹತ್ತು ಲಕ್ಷ ಹಣವನ್ನು ಲಕೋಟೆಯೊಂದರಲ್ಲಿ ಇಟ್ಟು ದರ್ಶನ್ ಕೊಟ್ಟಿದ್ದಾರೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಬಂದ ಹಲವರಿಗೆ ಈ ವಿಷಯ ಗೊತ್ತಾಗಲಿಲ್ಲ. ದರ್ಶನ್ ಸಹಾಯ ಮಾಡಿದರೆ ಯಾರಿಗೂ ಎಂದಿಗೂ ಹೇಳಿಕೊಳ್ಳುವುದಿಲ್ಲ.ಅ ಅದು ಅವರ ದೊಡ್ಡ ಗುಣ'' ಎಂದರು ಅಣಜಿ.

ಸತ್ಯ ಬಗ್ಗೆ ದರ್ಶನ್ ಮಾತು
''ಮಾರಿಯನ್ನ ಒಲಿಸಿಕೊಳ್ಳಬೇಕಂದ್ರೆ ಮರಿ ಹೊಡೀಬೇಕು. ದಾಸ ಎಂಟ್ರಿ ಕೊಡಬೇಕೆಂದರೆ ಕೋಳಿ ಕೊಯ್ಯಬೇಕು ಎಂದು ಆವತ್ತು ಪಿ.ಎನ್.ಸತ್ಯ ಅವರು ಕೋಳಿ ಕೊಯ್ದು ದೃಷ್ಟಿ ತೆಗೆದು ನನ್ನನ್ನು ಅಖಾಡಕ್ಕೆ ಬಿಟ್ಟರು. ಅವತ್ತು ಬಿಟ್ಟಂತ ಎತ್ತು ಇವತ್ತಿನ ವರೆಗೆ ಗಾಣದಲ್ಲಿ ಸುತ್ತುತ್ತಲೇ ಇದೆ. ಇನ್ನೂ ಕೆಲವು ವರ್ಷ ಗಾಣದಲ್ಲಿ ಸುತ್ತುತ್ತಲೇ ಇರುತ್ತದೆ ಅಷ್ಟು ಶಕ್ತಿಯನ್ನು ಸತ್ಯ ಅವರು ಅಂದೇ ನನಗೆ ತುಂಬಿ ಕಳಿಸಿದ್ದಾರೆ'' ಎಂದರು ದರ್ಶನ್. ಜೊತೆಗೆ ಅವರ ಕುಟುಂಬಕ್ಕೆ ವೇದಿಕೆ ಮೇಲಿಂದಲೇ ಧನ್ಯವಾದವನ್ನು ಅರ್ಪಿಸಿದರು. ''ನೀವು ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿಯಾಯಿತು'' ಎಂದರು.

ನಿರ್ಮಾಪಕರಿಗೆ ಧನ್ಯವಾದ ಹೇಳಿದ್ದ ದರ್ಶನ್
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ದರ್ಶನ್, ತಮಗೆ ನಾಯಕ ನಟನಾಗಿ ನಟಿಸಲು ಅವಕಾಶ ಕೊಟ್ಟ 'ಮೆಜೆಸ್ಟಿಕ್' ಸಿನಿಮಾದ ನಿರ್ಮಾಪಕರಿಗೆ ಭಾವುಕವಾಗಿ ಧನ್ಯವಾದ ಹೇಳಿದರು. ''ಬೀದಿಯಲ್ಲಿ ಕುಳಿತು ಅನ್ನ ತಿನ್ನುತ್ತಿದ್ದೆ ಆದರೆ ರಸ್ತೆ ಮೇಲೆ ಹಾಕುತ್ತಿದ್ದರು. ತಿನ್ನುವಂತೆಯೂ ಇಲ್ಲ ಬಿಡುವಂತೆಯೂ ಇಂಥಹಾ ಪರಿಸ್ಥಿತಿಯಲ್ಲಿದ್ದೆ. ಆಗ ನನಗೆ ತಟ್ಟೆ ಕೊಟ್ಟವರು ರಾಮಮೂರ್ತಿ, ರಮೇಶ್ ಅವರು (ಮೆಜೆಸ್ಟಿಕ್ ನಿರ್ಮಾಕರು). ಇಂದಿಗೂ ಸಹ ಅದೇ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದೇನೆ'' ಎಂದು ತಮ್ಮ ಮೊದಲ ಸಿನಿಮಾದ ನಿರ್ಮಾಪಕರನ್ನು ನೆನಪಿಸಿಕೊಂಡರು ದರ್ಶನ್. ''ನಾನು ನನ್ನ ಕುಟುಂಬ, ನನ್ನ ಅಮ್ಮ, ತಮ್ಮ, ಅವನ ಕುಟುಂಬ ಎಂದೂ ನಿಮ್ಮನ್ನು ಮರೆಯುವುದಿಲ್ಲ. ಜೀವ ಇರುವವರೆಗೆ ನೆನಪಿಟ್ಟುಕೊಳ್ಳುತ್ತೇವೆ'' ಎಂದರು ದರ್ಶನ್.


Click it and Unblock the Notifications











