"ಅಯ್ಯೋ ತಗಡೇ, ನಿನಗೆ 'ರಾಬರ್ಟ್' ಕಥೆ ಕೊಟ್ಟವ್ರು ನಾವು": ಉಮಾಪತಿಗೆ ದರ್ಶನ್ ಪಂಚ್
ಪ್ರಸನ್ನ ಚಿತ್ರಮಂದಿರದಲ್ಲಿ 'ಕಾಟೇರ' ಚಿತ್ರದ 50ನೇ ದಿನದ ಸಂಭ್ರಮಾಚರಣೆ ನಡೆದಿದೆ. ಡಿಸೆಂಬರ್ 19ಕ್ಕೆ ಬಿಡುಗಡೆಯಾಗಿದ್ದ ಆಕ್ಷನ್ ಎಂಟರ್ಟೈನರ್ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ಓಟಿಟಿಗೆ ಬಂದಮೇಲೂ ಕೆಲವೆಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ದರ್ಶನ್ಗೆ ಅಚ್ಚು ಮೆಚ್ಚು. ಇನ್ನು ಅಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಸಿನಿಮಾಗಳು ಭರ್ಜರಿ ಸಕ್ಸಸ್ ಕಂಡಿವೆ. ಅಂದಹಾಗೆ ಪ್ರಸನ್ನ ಚಿತ್ರಮಂದಿರಕ್ಕೆ 50 ವರ್ಷ ತುಂಬಿದೆ. 'ಕಾಟೇರ' 50 ದಿನ ಹಾಗೂ ಪ್ರಸನ್ನ ಚಿತ್ರಮಂದಿರದ 50 ವರ್ಷಗಳ ಸಂಭ್ರಮಾಚಣೆಯನ್ನು ಒಟ್ಟಿಗೆ ಆಚರಿಸಲಾಯಿತು.

ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ 'ಕಾಟೇರ' ನೆನಪಿನ ಶೀಲ್ಡ್ಗಳನ್ನು ಕೊಡಲಾಯಿತು. ಇದೇ ವೇದಿಕೆಯಲ್ಲಿ ಮಾತನಾಡಿದ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೆ ತಿರುಗೇಟು ನೀಡಿದರು. ಉಮಾಪತಿ ಶ್ರೀನಿವಾಸ್ 'ಕಾಟೇರ' ಕಥೆ ಬೆರಸಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನು ಎಂದು ಉಮಾಪತಿ ಹೇಳಿದ್ದರು. ಇದಕ್ಕೆ ದರ್ಶನ್ ಖಾರವಾಗಿಯೇ ಉತ್ತರ ನೀಡಿದ್ದಾರೆ.
"ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ 'ರಾಬರ್ಟ್' ಕಥೆ ಕೊಟ್ಟದ್ದೇ ನಾವು. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಯಾಕಂದರೆ ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?" ಎಂದು ಪ್ರಶ್ನಿಸಿದರು.
"ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಗುಡ್. ನೀನು ಮಾಡಬಹುದಿತ್ತಲ್ಲ. ಟೈಟಲ್ ನಾನು ಕೊಟ್ಟೆ ಎನ್ನುತ್ತೀಯಾ. 'ಕಾಟೇರ' ಟೈಟಲ್ ಕೊಟ್ಟಿದ್ದು ನಾನು. ಅದಕ್ಕೂ ಸ್ಪಷ್ಟನೆ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು" ಎಂದು ನಿರ್ದೇಶಕ ಅಯೋಗ್ಯ ಮಹೇಶ್ ಅವರನ್ನು ವೇದಿಕೆ ಕರೆದರು.

ಆಗ ಮಹೇಶ್ ಮಾತನಾಡಿ "ಮದಗಜ ಟೈಟಲ್ ರಾಮಮೂರ್ತಿ ಸರ್ ಬಳಿ ಇತ್ತು. ಅದನ್ನು ತೆಗೆದುಕೊಳ್ಳಲು 'ಕಾಟೇರ' ಟೈಟಲ್ ಅನ್ನು ಉಮಾಪತಿ ಸರ್ ಕೊಟ್ಟರು. ಮದಗಜ ಟೈಟಲ್ ಅನ್ನು ರಾಮಮೂರ್ತಿ ಸರ್ ನನಗೆ ಕೊಟ್ಟರು" ಎಂದರು. ಬಳಿಕ ನಿರ್ದೇಶಕ ತರುಣ್ ಸುಧೀರ್ನ ದರ್ಶನ್ ವೇದಿಕೆಗೆ ಕರೆದರು.
ಕಾಟೇರ ಟೈಟಲ್ ಅನ್ನು ಮೊದಲು ತಮ್ಮ ಬ್ಯಾನರ್ನಲ್ಲಿ ರಿಜಿಸ್ಟರ್ ಮಾಡಿಸೋಕೆ ನೀವು ಹೇಳಿದ್ರಿ. ಆದರೆ ನನ್ನ ಬ್ಯಾನರ್ನಲ್ಲಿ ಜಾಗ ಇರಲಿಲ್ಲ ಎನ್ನುವ ಕಾರಣಕ್ಕೆ ಸರಿ, ಅದು ನಮ್ಮ ಬ್ಯಾನರ್ ಎಂದು ಉಮಾಪತಿ ಬ್ಯಾನರ್ನಲ್ಲಿ ರಿಜಿಸ್ಟರ್ ಮಾಡಿಸಿದೆವು. ಆದರೆ ಟೈಟಲ್ ಕೊಟ್ಟಿದ್ದು ನೀವೇ(ದರ್ಶನ್) ಎಂದು ತರುಣ್ ಹೇಳಿದ್ದಾರೆ.
"ಸರಿನಾ ಸ್ವಾಮಿ? ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಯಾಕೆ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ, ಎಲ್ಲೋ ಚೆನ್ನಾಗಿದ್ದೀಯಾ. ಅಲ್ಲೇ ಇದ್ದುಬಿಡು" ಎಂದು ದರ್ಶನ್ ಸ್ಪಷ್ಟನೆ ನೀಡಿದರು.
'ಕಾಟೇರ' ಸಕ್ಸಸ್ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. "ಕಾಟೇರ ಸಿನ್ಮಾ ಕಥೆ ಬರೆಸಿದವನು ನಾನು. ತೆರೆಮೇಲೆ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಪರೀಕ್ಷೆ ಇತ್ತು. ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ. 'ಕಾಟೇರ' ಟೈಟಲ್ ಇಟ್ಟವನು ನಾನೇ, ಕಥೆ ಬರೆಸಿದವನು ನಾನೇ. ಯಾರಿಗೆ ಏನು ಧಕ್ಕಬೇಕು ಅಂತ ಇರುತ್ತೋ ಅದು ಧಕ್ಕುತ್ತೆ"
"ನನ್ನ ಖುಷಿ ಏನು ಅಂದ್ರೆ ನನ್ನ ಜಡ್ಜ್ಮೆಂಟ್ ಎಲ್ಲೂ ತಪ್ಪಾಗಿಲ್ಲ. ನಿರ್ಮಾಪಕನಾಗಿ ಒಳ್ಳೆ ಕಥೆ ಆಯ್ಕೆ ಮಾಡಿದ ಖುಷಿಯಿದೆ. 'ರಾಬರ್ಟ್' ರಿಲೀಸ್ಗೂ ಮುನ್ನ 'ಕಾಟೇರ' ಕಥೆ ಬರೆಸಿದ್ದೆ ಖುಷಿಯಿದೆ. ರಾಕ್ಲೈನ್ ಸರ್ ಅಂದ್ರೆ ಬಹಳ ಪ್ರೀತಿಯಿದೆ. ಅವರ ಬ್ಯಾನರ್ ಸಿನ್ಮಾ ನನ್ನ ಬ್ಯಾನರ್ ಸಿನ್ಮಾ" ಎಂದು ಹೇಳಿದ್ದರು.


Click it and Unblock the Notifications











