ಪೊಲೀಸ್ ಕಸ್ಟಡಿಯಲ್ಲಿರೋ ದರ್ಶನ್ ಕಷ್ಟದ ಮೇಲೆ ಕಷ್ಟ; ತೂಗುದೀಪ ನಿವಾಸಕ್ಕೂ ಸಂಚಕಾರ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಒಂದೊಂದೇ ಕೇಸ್ಗಳು ದಾಖಲಾಗುತ್ತಿವೆ. ಈ ಕಾರಣಕ್ಕೆ ದರ್ಶನ್ ಒಂದರ ಹಿಂದೊಂದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಮೈಸೂರಿನ ಟಿ.ನರಸಿಪುರದಲ್ಲಿರುವ ತೋಟದ ಮನೆಯಲ್ಲಿ ಅನುಮತಿ ಇಲ್ಲದ ವಿಶೇಷ ಪ್ರಭೇದದ ಬಾತುಕೋಳಿಯನ್ನು ಸಾಕಿದ್ದಕ್ಕೆ ದರ್ಶನ್ರನ್ನು ಮೂರನೇ ಆರೋಪಿಯಾಗಿ ಮಾಡಿತ್ತು. ಈ ಸಂಬಂಧ ವಿಚಾರಣೆ ಹಾಜರಾದ ಬೆನ್ನಲ್ಲೇ ಜಾರ್ಜ್ಶೀಟ್ ಸಲ್ಲಿಸುವುದಕ್ಕೆ ಅರಣ್ಯ ಇಲಾಖೆ ನಿರ್ಧರಿಸಿತ್ತು.

ಈಗ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ತೂಗುದೀಪ ನಿವಾಸಕ್ಕೂ ಸಂಚಕಾರ ಎದುರಾಗುವ ಸಾಧ್ಯತೆಯಿದೆ. ದರ್ಶನ್ ನಿವಾಸ ಸೇರಿದಂತೆ ರಾಜ ಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ಮನೆ ಕಟ್ಟಿರುವುದನ್ನು ತೆರವುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಹೀಗಾಗಿ ಕೋರ್ಟ್ ಮೊರೆ ಹೋಗಲು ಚಿಂತಿಸಿದೆ ಎಂದು ವರದಿಯಾಗಿದೆ.
2016ರಲ್ಲಿ ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ರಾಜ ಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಸೂಚನೆ ನೀಡಿತ್ತು. ಆ ವೇಳೆ ಬಿಬಿಎಂಪಿ ರಾಜ ಕಾಲುವೆ ಒತ್ತುವರಿ ಮಾಡಿ ಕಟ್ಟಡ ಕಟ್ಟಿರುವವರ ಪಟ್ಟಿಯನ್ನು ಮಾಡಿತ್ತು. ಅದರಲ್ಲಿ ದರ್ಶನ್ ನಿವಾಸ ಕೂಡ ಸೇರಿಕೊಂಡಿತ್ತು. ರಾಜಕಾಲುವೆ ಮೇಲೆ ದರ್ಶನ್ ಮನೆ ಕಟ್ಟಿರುವುದು ಬೆಳಕಿಗೆ ಬಂದಿದ್ದರಿಂದ ಒತ್ತುವರಿಗೆ ಮುಂದಾಗಿತ್ತು.
ಈ ಸಂದರ್ಭದಲ್ಲಿ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಂದ ಕಟ್ಟಡ ತೆರವಿಗೆ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಬಿಬಿಎಂಪಿ ಮತ್ತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ರಾಜರಾಜೇಶ್ವರಿ ನಗರದ ಸುಮಾರು 70 ಕಟ್ಟಡಗಳನ್ನು ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದೆ. ಈ ಬೆನ್ನಲ್ಲೇ ಕಟ್ಟಡ ತೆರವಿಗೆ ಮುಂದಾಗಲು ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಒಂದು ವೇಳೆ ಕೋರ್ಟ್ ಕಟ್ಟದ ತೆರವಿಗೆ ಅನುಮತಿ ನೀಡಿದರೆ, ದರ್ಶನ್ಗೆ ಈ ಬಾರಿ ಸಂಕಷ್ಟ ಎದುರಾಗುವುದು ಪಕ್ಕಾ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಇದರಿಂದ ಹೊರಬರುವುದಕ್ಕೆ ಇನ್ನೂ ಸಾಕಷ್ಟು ತಿಂಗಳು ಹಿಡಿಯುತ್ತೆ. ಇದೇ ಬೆನ್ನಲ್ಲೇ ಅರಣ್ಯ ಇಲಾಖೆ ಕೇಸ್ ಅನ್ನೂ ಹ್ಯಾಂಡಲ್ ಮಾಡಬೇಕಿದೆ. ಅದರ ಜೊತೆ ಮನೆಯನ್ನು ಉಳಿಸಿಕೊಳ್ಳಲು ಕಾನೂನಿನ ಸಮರ ಸಾರಬೇಕಾಗುತ್ತೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಅವರ ಮೇಲೆ ಒಂದೊಂದೇ ಆರೋಪಗಳು ಹೊರಬರುತ್ತಿವೆ. ಚಿತ್ರರಂಗ ಕೂಡ ಈಗ ನಿಧಾನವಾಗಿ ದರ್ಶನ್ ವಿರುದ್ಧ ಪ್ರತಿಕ್ರಿಯೆ ಕೊಡುವುದಕ್ಕೆ ಶುರು ಮಾಡಿದೆ. ಈಗಾಗಲೇ ಸ್ಯಾಂಡಲ್ವುಡ್ ಸೇರಿದಂತೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿ ದರ್ಶನ್ ಬಹು ದೊಡ್ಡ ಸಮಸ್ಯೆಗೆ ಸಿಕ್ಕಿಕೊಂಡಿದ್ದಾರೆ.


Click it and Unblock the Notifications











