ವೆಸ್ಟರ್ನ್ ಟಾಯ್ಲೆಟ್, ಪೇಪರ್, ಪುಸ್ತಕ ; ಜೈಲಿನಲ್ಲಿ ದರ್ಶನ್ಗೆ ಸಿಕ್ಕ ಸೌಲಭ್ಯಗಳೇನು ? ಸುಪ್ರೀಂಗೆ ಸಲ್ಲಿಸಿದ ವರದಿಯಲ್ಲೇನಿದೆ ?
''ಕುಂಟು'' ನೆಪ ಹೇಳಿ ಈ ಹಿಂದೆ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು.
ಕೊನೆಗೂ ಅಂದುಕೊಂಡಂತೆಯೇ ಆಯ್ತು. ದರ್ಶನ್ ಈಗ ಮತ್ತೊಮ್ಮೆ ಜೈಲಿನ ದರ್ಶನ ಮಾಡಿದ್ದಾರೆ. ಆದರೆ.. ಈ ಬಾರಿ ಅರಮನೆಯಲ್ಲ ಬದಲಿಗೆ ಅಕ್ಷರಶಃ ದರ್ಶನ್ ಪಾಲಿಗೆ ಜೈಲು ಸೆರೆಮನೆಯಾಗಿದೆ. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ದಿನ ನಿತ್ಯ ನರಕ ದರ್ಶನವಾಗುತ್ತಿದೆ.

ಖುದ್ದು ದರ್ಶನ್ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಜೈಲು ಜೀವನದ ಕಷ್ಟ ಹೇಳಿದ್ದರು. ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ,ವೃತ್ತಿ ಬದುಕು ಅಂತ್ಯವಾಗುವ ಭಯ, ಹೀಗೆ ಸಾಲು ಸಾಲು ಕಾರಣಗಳನ್ನು ನೀಡಿ ದರ್ಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಎಂದು ಹೇಳಿ ಜಾಮೀನು ನೀಡುವಂತೆ ಕೇಳಿಕೊಂಡಿದ್ದರು.
ಆದರೆ ದರ್ಶನ್ ದುರದೃಷ್ಟ. ಜಾಮೀನು ಅರ್ಜಿ ಸಲ್ಲಿಸಿದ ತಪ್ಪಿಗೆ ಈಗ ಒಂದು ವರ್ಷ ದರ್ಶನ್ ಜೈಲಿನಲ್ಲಿ ಕೂರಬೇಕಾದ ಪರಿಸ್ಥಿತಿ ಬಂದಿದೆ. ಜೈಲಿನಿಂದ ಕದಲದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದೇ ಸಮಯದಲ್ಲಿ ದರ್ಶನ್ ಮಾಡಿದ ಆರೋಪಕ್ಕೆ ಜೈಲಾಧಿಕಾರಿಗಳು ಉತ್ತರವನ್ನು ನೀಡಿದ್ದಾರೆ. ದರ್ಶನ್ಗೆ ಜೈಲಿನಲ್ಲಿ ಕೊಡಲಾಗಿರುವ ಸೌಲಭ್ಯಗಳ ಕುರಿತು ವರದಿಯನ್ನು ನೀಡಿದ್ದಾರೆ. ಕಾರಾಗೃಹ ಇಲಾಖೆ ಸಲ್ಲಿಸಿರುವ ಈ ರಿಪೋರ್ಟ್ನ ''ನ್ಯೂಸ್ 18 ಕನ್ನಡ'' ವರದಿ ಮಾಡಿದ್ದು ಅದರ ಸಾರಾಂಶ ಇಲ್ಲಿದೆ.
ಸಂಪೂರ್ಣ ಭದ್ರತೆ
ದರ್ಶನ್ ಜೈಲಿನಲ್ಲಿ ಸಹ ಕೈದಿಗಳಿಂದ ಕಿರುಕುಳ ಮತ್ತು ಬೆದರಿಕೆಯ ಆರೋಪ ಮಾಡಿದ್ದರು. ಇದಕ್ಕೆ ಜೈಲಾಧಿಕಾರಿಗಳು ಉತ್ತರ ನೀಡಿದ್ದು ದರ್ಶನ್ ಇರುವ ಬ್ಯಾರಕ್ನಲ್ಲಿ 24X7 ಭದ್ರತೆ ನೀಡಲಾಗಿದೆ ಎಂದು ಹೇಳಿದ್ದಾರೆ. ಒಬ್ಬ ಸಹಾಯಕ ಜೈಲರ್ ಮತ್ತು ಮತ್ತೊಬ್ಬ ಜೈಲ್ ವಾರ್ಡರ್ ಹಗಲಿನಲ್ಲಿ ದರ್ಶನ್ ಅವರ ಕಾವಲು ಕಾಯುತ್ತಿದ್ದಾರೆ ಎಂದು ಹೇಳಿರುವ ಜೈಲಾಧಿಕಾರಿಗಳು ರಾತ್ರಿ ಸಮಯದಲ್ಲಿ ಇಬ್ಬರು ಹೆಡ್ ಜೈಲ್ ವಾರ್ಡರ್ ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಬೇರೆ ಕೈದಿಗಳಿಗೆ ಇಲ್ಲಿ ಬರಲು ಸಾಧ್ಯ ಇಲ್ಲ. ಯಾಕೆಂದರೆ ಕಾರಿಡಾರ್ ಗೆ ಬಾರದಂತೆ ಬ್ಯಾರಕ್ ಹಾಕಲಾಗಿದೆ, ಬ್ಯಾರಕ್ ಮುಂಭಾಗದ ಕಾರಿಡಾರ್ ನಲ್ಲಿ ಸಿಸಿಟಿವಿಯನ್ನು ಕೂಡ ಅಳವಡಿಸಲಾಗಿದೆ ಎಂದು ಕೂಡ ಹೇಳಿದ್ದಾರೆ.
ವ್ಯವಸ್ಥೆ
ಜೈಲಿನಲ್ಲಿ ದರ್ಶನ್ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಪೆಟ್, ಕಂಬಳಿ, ತಟ್ಟೆ, ಲೋಟ, ಬೌಲ್, ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲ ಸ್ನಾನದ ಸೋಪು, ಬಟ್ಟೆ ತೊಳೆಯುವ ಸೋಪು, ತೆಂಗಿನ ಎಣ್ಣೆ, ಟೂತ್ ಪೇಸ್ಟ್, ಮತ್ತು ಸ್ವಚ್ಚತೆಗಾಗಿ ಫಿನಾಯಿಲ್ ಮತ್ತು ಬ್ಲೀಚಿಂಗ್ ಪೌಡರ್ ಕೂಡ ಕೊಡಲಾಗಿದ್ದು, ಅವರು ಕತ್ತಲೆ ಕೋಣೆಯಲ್ಲಿ ಇಲ್ಲ, ಬದಲಿಗೆ ಉತ್ತಮ ಗಾಳಿ ಮತ್ತು ಬೆಳಕಿನ ಸೌಲಭ್ಯ ಇರುವ ವಿಶಾಲವಾದ ಬ್ಯಾರಕ್ನಲ್ಲೇ ಇದ್ದಾರೆ.

ದರ್ಶನ್ ಇರುವ ಕೊಠಡಿಯಲ್ಲಿ ಗಾಳಿಗಾಗಿ ಸೀಲಿಂಗ್ ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ಜೈಲಿನಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇರೋದ್ರಿಂದ ದರ್ಶನ್ ಇರುವ ಕೊಠಡಿಯ ಕಿಟಕಿ ಮತ್ತು ಬಾಗಿಲುಗಳಿಗೆ ವಿಶೇಷವಾಗಿ ಸೊಳ್ಳೆ ಪರದೆಗಳನ್ನು ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ ಕಾಲ ಕಳೆಯಲು ದಿನಪತ್ರಿಕೆಗಳು ಹಾಗೂ ಮಾಸಿಕ ಪತ್ರಿಕೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಅವರು ಓದಿಕೊಳ್ಳಲು ಕಥೆ ಮತ್ತು ಜ್ಞಾನ ಹೆಚ್ಚಿಸುವ ವಿವಿಧ ಪುಸ್ತಕಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಎಂದು ಕಾರಾಗೃಹ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ ಎಂದು ನ್ಯೂಸ್ 18 ಕನ್ನಡ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ವೆಸ್ಟರ್ನ್ ಟಾಯ್ಲೆಟ್
ಸಾಮಾನ್ಯವಾಗಿ ಜೈಲುಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಸಿಗುವುದು ಅಪರೂಪ. ಆದರೆ ದರ್ಶನ್ ಇರುವ ಬ್ಯಾರಕ್ನಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೌಚಾಲಯ ಎರಡು ಇದೆ. ದರ್ಶನ್ಗೆ ಇರುವ ಬೆನ್ನುನೋವಿನ ಸಮಸ್ಯೆಯನ್ನು ಪರಿಗಣಿಸಿ, ಫಿಸಿಯೋಥೆರಪಿಸ್ಟ್ ನೀಡಿರುವ ಸಲಹೆಯ ಮೇರೆಗೆ ಕೂರಲು ಒಂದು ವಿಶೇಷ ಕುರ್ಚಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಜೈಲಿನ ಮೆನುವಿನಂತೆ ಆಹಾರ
ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಕೊಡುವಂತೆ ದರ್ಶನ್ಗೆ ನಿತ್ಯದ ಆಹಾರವನ್ನು ಜೈಲಿನ ಮೆನುವಿನಂತೆಯೇ ಪೂರೈಕೆ ಮಾಡಲಾಗುತ್ತಿದ್ದು, ಇದರ ಜೊತೆಯಲ್ಲಿ ಪ್ರತಿದಿನ ಮೊಟ್ಟೆ, ಬ್ರೆಡ್ ಮತ್ತು ಹಾಲನ್ನು ಹೆಚ್ಚುವರಿಯಾಗಿ ಕೊಡಲಾಗುತ್ತಿದೆ, ಇದಲ್ಲದೇ ದರ್ಶನ್ ಭೇಟಿಗೆ ಬರುವವರು ತರುವ ಹಣ್ಣು ಮತ್ತು ಡ್ರೈ ಫ್ರೂಟ್ಸ್ಗಳನ್ನು ಅವರಿಗೆ ತಲುಪಿಸಲು ಜೈಲು ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಜೈಲಾಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.
ಯಾರ್ಯಾರು ಎಷ್ಟು ಬಾರಿ ಭೇಟಿಯಾಗಿದ್ದಾರೆ ?
ಇನ್ನು ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದಾಗ ಕೆಲವರು ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಾದರೂ ಓಡಿಕೊಂಡು ಹೋಗಿ ದರ್ಶನ ಪಡೆದು ಬಂದಿದ್ದರು. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬಂದಿದ್ದರು.
ಆದರೆ ಈ ಬಾರಿ ಜೈಲಿನ ಸುತ್ತ ಮುತ್ತ ಹೆಚ್ಚಾಗಿ ಕಂಡಿದ್ದು ಕೇವಲ ವಿಜಯಲಕ್ಷ್ಮಿ ದರ್ಶನ್ ಮಾತ್ರ. ಆದಾಗ್ಯೂ ದರ್ಶನ್ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ಕೊಡ್ತಿಲ್ಲ ಎಂಬ ಆರೋಪವನ್ನು ದರ್ಶನ್ ಮಾಡಿದ್ದರು.
ಇದಕ್ಕೂ ಕೂಡ ಈ ವರದಿಯಲ್ಲಿ ಉತ್ತರ ನೀಡಲಾಗಿದ್ದು ಆಗಸ್ಟ್ 2025ರಿಂದ ಈ ಬಾರಿ ಚಿತ್ರರಂಗದ ಸ್ನೇಹಿತರು ಯಾರೂ ಸುಳಿಯದಿದ್ದರೂ, ಪತ್ನಿ ವಿಜಯಲಕ್ಷ್ಮಿ ದರ್ಶನ್, ಅತ್ಯಾಪ್ತ ಗೆಳೆಯ ಧನ್ವೀರ್ ಮತ್ತು ಕುಟುಂಬಸ್ಥರು 70 ಬಾರಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಇದಲ್ಲದೇ 73 ಬಾರಿ ಫೋನ್ನಲ್ಲಿ ದರ್ಶನ್ ಮಾತನಾಡಿದ್ದು, ಜೈಲಿನಲ್ಲಿ 28 ಬಾರಿ ದರ್ಶನ್ ತಮ್ಮ ವಕೀಲರನ್ನು ಭೇಟಿ ಮಾಡಿದ್ಧಾರೆ ಎಂದು ಕೂಡ ಕಾರಾಗೃಹ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ನಮೂದಿಸಲಾಗಿದೆ.


Click it and Unblock the Notifications