ಕೊರೊನಾ ರೋಗಿಗಳ ಸೇವೆಯಲ್ಲಿ ನಿರತ 'ಉಸಿರು' ತಂಡಕ್ಕೆ ಕೈಜೋಡಿಸಿದ ದರ್ಶನ್
ಕೊರೊನಾ ಸಂಕಷ್ಟದ ಸಮಯದಲ್ಲಿ ಕವಿರಾಜ್, ನೀತು ಶೆಟ್ಟಿ, ಸಾಧು ಕೋಕಿಲ ಇನ್ನೂ ಹಲವರು ಒಟ್ಟಿಗೆ ಸೇರಿ ಆರಂಭಿಸಿರುವ 'ಉಸಿರು' ತಂಡವು ಉತ್ತಮ ಸೇವೆ ಮಾಡುತ್ತಿದೆ.
Recommended Video
ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಕೊರೊನಾ ರೋಗಿಗಳಿಗೆ ಅವರ ಮನೆಗಳಿಗೆ ತೆರಳಿ ಉಚಿತವಾಗಿ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ನೀಡುವ ಕಾರ್ಯವನ್ನು ಉಸಿರು ತಂಡ ಮಾಡುತ್ತಿದ್ದು, ಈವರೆಗೆ ಬೆಂಗಳೂರಿನಲ್ಲಿ ಹಲವಾರು ಮಂದಿ 'ಉಸಿರು' ತಂಡದ ನೆರವು ಪಡೆದು ನಿರಾಳವಾಗಿ ಉಸಿರಾಡಿದ್ದಾರೆ.
ಕೊರೊನಾದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು 'ಉಸಿರು' ಸಂಪರ್ಕಿಸಿದಲ್ಲಿ ಅವರ ಮನೆಗೆ ತೆರಳಿ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ತಂಡದ ಸ್ವಯಂ ಸೇವಕರು ಅಳವಡಿಸುತ್ತಾರೆ. ಇದಕ್ಕಾಗಿಯೇ ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ 10 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಈ ತಂಡ ಖರೀದಿಸಿದೆ.

'ಉಸಿರು' ತಂಡದ ಕಾರ್ಯಕ್ಕೆ ದರ್ಶನ್ ಮೆಚ್ಚುಗೆ
ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ 'ಉಸಿರು' ತಂಡಕ್ಕೆ ಇದೀಗ ನಟ ದರ್ಶನ್ ಅವರ ಬೆಂಬಲ ದೊರೆತಿದೆ. ದರ್ಶನ್ ಅವರು 'ಉಸಿರು' ತಂಡ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಾವೂ ಸಹ 'ಉಸಿರು' ತಂಡ ಸೇರಿಕೊಂಡು ತಂಡ ಮಾಡುತ್ತಿರುವ ಸೇವೆಗೆ ಸೂಕ್ತ ನೆರವು ನೀಡಲಿದ್ದಾರೆ.

ಧನ್ಯವಾದ ತಿಳಿಸಿರುವ ಕವಿರಾಜ್
ಈ ವಿಷಯವನ್ನು ಚಿತ್ರಸಾಹಿತಿ ಕವಿರಾಜ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ದರ್ಶನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 'ಉಸಿರು' ತಂಡದ ಸೇವೆಯನ್ನು ಮೈಸೂರಿಗೂ ವಿಸ್ತರಣೆ ಮಾಡಿದ್ದು ಲಾಕ್ಡೌನ್ ಆದಾಗಿನಿಂದಲೂ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿರುವ ದರ್ಶನ್ ಅವರು 'ಉಸಿರು' ತಂಡದ ಮೈಸೂರಿನ ಸೇವೆಗೆ ಅಗತ್ಯ ನೆರವು ನೀಡಲಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಸಹೋದರ ದಿನಕರ್ ತೂಗುದೀಪ್ ತಂಡದಲ್ಲಿದ್ದಾರೆ
'ಉಸಿರು' ತಂಡ ಆರಂಭವಾದಾಗಿನಿಂದಲೂ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ತಂಡದ ಜೊತೆಗಿದ್ದು ಅಗತ್ಯ ನೆರವು ನೀಡಿದ್ದಾರೆ. ದರ್ಶನ್ ಅವರ ಮಿತ್ರರಲ್ಲಿ ಒಬ್ಬರಾದ ಸಾಧು ಕೋಕಿಲ ಸಹ ತಂಡದಲ್ಲಿದ್ದಾರೆ. ಇನ್ನೂ ಹಲವು ಸೆಲೆಬ್ರಿಟಿಗಳು ಉಸಿರು ತಂಡದ ಸದಸ್ಯರಾಗಿದ್ದಾರೆ.

ಹಲವು ಸೆಲೆಬ್ರಿಟಿಗಳು ತಂಡದಲ್ಲಿದ್ದಾರೆ
ಬೆಂಗಳೂರಿನಲ್ಲಿ ಆಮ್ಲಜನಕ ಸಿಲಿಂಡರ್ಗಳ ತೀವ್ರ ಕೊರತೆ ಕಾಡಿದ ಸಂದರ್ಭದಲ್ಲಿ ಚಿತ್ರಸಾಹಿತಿ ಕವಿರಾಜ್ ಅವರು ಕೆಲವು ಸಮಾನ ಮನಸ್ಕ ಗೆಳೆಯರ ಬಳಗೊಂದಿಗೆ ಸೇರಿ 'ಉಸಿರು' ತಂಡ ಸ್ಥಾಪನೆ ಮಾಡಿದ್ದಾರೆ. ತಂಡದಲ್ಲಿ ಸಾಧು ಕೋಕಿಲ, ಕವಿತಾ ಲಂಕೇಶ್, ದಿನಕರ್ ತೂಗುದೀಪ, ನೀತು ಶೆಟ್ಟಿ, ಸಂಚಾರಿ ವಿಜಯ್, ಚೈತನ್ಯ, ಸುಂದರ್ ಇನ್ನೂ ಹಲವರು ಇದ್ದಾರೆ.


Click it and Unblock the Notifications











