"ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು": 'ಕಾಟೇರ' ಮಾಸ್ತಿ ಡೈಲಾಗ್ಸ್ ಹವಾ
ಬಹುನಿರೀಕ್ಷಿತ 'ಕಾಟೇರ' ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ದರ್ಶನ್ ಮಾಸ್ ಅವತಾರಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೊಸ ಅವತಾರದಲ್ಲಿ ನೆಚ್ಚಿನ ನಟನನ್ನು ನೋಡಿ ಖುಷಿಯಾಗಿದ್ದಾರೆ. ಡಿಸೆಂಬರ್ 19ಕ್ಕೆ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಕಾಯುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಕಾಟೇರ' ಝಲಕ್ ಹೊರಬಿದ್ದಿತ್ತು. ಭರ್ಜರಿ ಆಕ್ಷನ್ ಜೊತೆಗೆ ಎಮೋಷನ್ ಸೇರಿಸಿ ಹಳ್ಳಿ ಸೊಗಡಿನ ಕಥೆಯನ್ನು ತರುಣ್ ಸುಧೀರ್ ಮತ್ತವರ ತಂಡ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 70ರ ದಶಕದ ಮೂಡ್ ಕ್ರಿಯೇಟ್ ಮಾಡಿ ನೋಡುಗರನ್ನು ಟ್ರೈಲರ್ ಒಳಕ್ಕೆ ಸೆಳೆದುಕೊಂಡು ಭೀಮನಳ್ಳಿಯ ರಕ್ತಸಿಕ್ತ ಅಧ್ಯಾಯವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಬಹುತೇಕ ಗೆದ್ದಿದ್ದಾರೆ.

ತರುಣ್ ಸುಧೀರ್, ಜಡೇಶ್ ಹಂಪಿ ಕಥೆ, ಚಿತ್ರಕಥೆಗೆ ಇಡೀ ತಂಡದ ಬೆಂಬಲ ಸಿಕ್ಕಿದೆ. ಸುಧಾಕರ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಹಾಗೂ ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಕಥೆಗೆ ತಕ್ಕಂತೆ ಹಳ್ಳಿ ಭಾಷೆಯ ಮಾಸ್ತಿ ಪದಗಳನ್ನು ಪೋಣಿಸಿ ಚಿತ್ರಕ್ಕೆ ಡೈಲಾಗ್ಸ್ ಬರೆದಿದ್ದಾರೆ. ಅದರ ಸಣ್ಣ ಝಲಕ್ ಟ್ರೈಲರ್ನಲ್ಲಿ ಕೇಳಬಹುದಾಗಿದೆ.
"ಒಂದು ಬಂದೂಕ್ ಅಲ್ಲ ನೂರ್ ಪಿರಂಗಿನೆ ಅಡ್ಡ ಬಂದ್ರು ನನ್ ತಡ್ದು ನಿಲ್ಸಕ್ಕಾಗಲ್ಲ" ಎನ್ನುವ ದರ್ಶನ್ ಖಡಕ್ ಡೈಲಾಗ್ ಅಭಿಮಾನಿಗಳ ಮನಗೆದ್ದಿದೆ. "ಎಲ್ಲಾ ಹಾವುಗಳು ತಲೆ ಎತ್ತುತಾವೆ ಧಣಿ, ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತೋದು" ಸಾಲುಗಳು ಕೂಡ ಇಷ್ಟವಾಗುತ್ತದೆ.
ಬರೀ ದರ್ಶನ್ ಪಾತ್ರಕ್ಕೆ ಮಾತ್ರವಲ್ಲ ಬೇರೆ ಪಾತ್ರಗಳಿಗೂ ಜಬರ್ದಸ್ತ್ ಡೈಲಾಗ್ಗಳಿವೆ. ಜಗಪತಿ ಬಾಬು "ಇವ್ರೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಎನ್ನುವ ಡೈಲಾಗ್ ಕೂಡ ಸಾಕಷ್ಟು ಜನಕ್ಕೆ ಇಷ್ಟವಾಗಿದೆ. ನಾಯಕನ ಪಾತ್ರದ ಬಗ್ಗೆ ಬಿಲ್ಡಪ್ ಕೊಡುವ ವಿನೋದ್ ಆಳ್ವ ಪಾತ್ರದ ಡೈಲಾಗ್ಸ್ ಸಹ ಚೆನ್ನಾಗಿದೆ. "ಅವ್ನು ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹೊತ್ಕೊಂಡು ಹೋಗುವವನಲ್ಲ. ಗರ್ಭಗುಡಿಗೆ ನುಗ್ಗಿ ದ್ಯಾವ್ರನ್ನೆ ಹೊತ್ಕೊಂಡು ಹೋಗುವವನು, ಊರ್ ಹೆಂಗುಸ್ರು ಹಟ್ಟಿ ಮುಂದೆ ನೀರಾಕಕ್ಕೆ ಹೆದ್ರುತಾರೆ, ಯಾಕ್ ಗೊತ್ತಾ...? ಅವ್ನು ಬೀದಿನೆಲ್ಲ ರಕ್ತದಲ್ಲಿ ಸಾರ್ಸ್ಬಿಟ್ಟು ಹೋಗಿದ್ದ" ಎನ್ನುವ ಸಾಲುಗಳು ಮಜವಾಗಿದೆ.

ಈ ಹಿಂದೆ ಮೋಷನ್ ಪೋಸ್ಟರ್ ಬಿಟ್ಟಾಗಲೇ "ಪ್ರತೀ ಮಚ್ಚು ಎರಡ್ ದಪ ಕೆಂಪಾಗ್ತೈತೆ.. ಬೆಂಕೀಲಿ ಬೆಂದಾಗ.. ರಕ್ತದಲ್ಲಿ ನೆಂದಾಗ" ಎನ್ನುವ ಖಡಕ್ ಡೈಲಾಗ್ ಹೊರಬಿದ್ದಿತ್ತು. ಇನ್ನು ಕಳೆದ ವರ್ಷ ಥೀಮ್ ಪೋಸ್ಟರ್ನಲ್ಲೇ "ಹಿಂದಿರೋವ್ರಿಗೆ ದಾರಿ.. ಮುಂದಿರೋವ್ನದು ಜವಾಬ್ದಾರಿ" ಎಂದು ಬರೆದು ಕುತೂಹಲ ಮೂಡಿಸಲಾಗಿತ್ತು. 'ಕಾಟೇರ' ಚಿತ್ರದಲ್ಲಿ ಸಂಭಾಷಣೆ ಹೈಲೆಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಸದ್ಯ ಟ್ರೈಲರ್ನಲ್ಲಿರುವ ಡೈಲಾಗ್ಸ್, ಒನ್ಲೈನರ್ಗಳು ಬರೀ ಸ್ಯಾಂಪಲ್ ಅಷ್ಟೇ. ಇಡೀ ಸಿನಿಮಾದಲ್ಲಿ ಇಂತಹ ಸಾಕಷ್ಟು ಇಂಟ್ರೆಸ್ಟಿಂಗ್ ಸಾಲುಗಳಿವೆ. ಟ್ರೈಲರ್ ಲಾಂಚ್ ಈವೆಂಟ್ನಲ್ಲಿ ಮಾತನಾಡುತ್ತಾ ಹುಬ್ಬಳ್ಳಿ ಜನರನ್ನು ಉದ್ದೇಶಿಸಿ ಮಾಸ್ತಿ ಖಡಕ್ ಡೈಲಾಗ್ ಹೊಡೆದಿದ್ದರು. "ಗೊತ್ತಿರೋ ಗಂಡಸ್ರು ಎಲ್ಲಾ ಕಡೆ ಇರ್ತಾರೆ , ಗತ್ತು ಇರೋ ಗಂಡಸ್ರು ಇಲ್ಲಿ ಮಾತ್ರ ಇರ್ತಾರೆ" ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದ್ದರು.
ಮಾಸ್ ಸಬ್ಜೆಕ್ಟ್ ಸಿನಿಮಾಗಳಿಗೆ ಡೈಲಾಗ್ಸ್ ಬಹಳ ಮುಖ್ಯವಾಗುತ್ತದೆ. ಸನ್ನಿವೇಶಗಳನ್ನು ಎಲಿವೇಷನ್ ಮಾಡೋಕೆ ಸಂಭಾಷಣೆ ಸಹಕಾರಿಯಾಗುತ್ತದೆ. ಮಾಸ್ತಿ ತಮ್ಮ ಮೊನಚಾದ ಸಂಭಾಷಣೆಯಿಂದ ಸದ್ದು ಮಾಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಬಂದಿದ್ದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲೂ ಅವರ ಡೈಲಾಗ್ಸ್ ಗಮನ ಸೆಳೆದಿತ್ತು. ಇದೀಗ 'ಕಾಟೇರ' ಚಿತ್ರದಲ್ಲೂ ಅದೇ ಮ್ಯಾಜಿಕ್ ಮುಂದುವರೆಯುವ ಸುಳಿವು ಸಿಕ್ಕಿದೆ.


Click it and Unblock the Notifications











