ಸೆಂಚುರಿ ಬಾರಿಸಿದ 'ಕುರುಕ್ಷೇತ್ರ': 'ಚಕ್ರವ್ಯೂಹ'ದಲ್ಲಿ ನಿರ್ಮಾಪಕ ಮುನಿರತ್ನ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ ಶತದಿನ ಪೂರೈಸಿದೆ. ಕೆಲವು ಮಲ್ಟಿಫ್ಲೆಕ್ಸ್ ಹಾಗೂ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಲ್ಲಿ ನೂರು ದಿನ ಪೂರೈಸುವ ಮೂಲಕ ದರ್ಶನ್ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿ ಉಳಿದುಕೊಂಡಿದೆ.
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಹಲವು ಸವಾಲುಗಳನ್ನು ಎದುರಿಸಿ, ಟೀಕೆಗಳನ್ನು ಎದುರಿಸಿ, ಟ್ರೋಲ್ ಗಳನ್ನು ಎದುರಿಸಿ ಅಂತಿಮವಾಗಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತ್ತು. ಇದೀಗ, ಶತದಿನ ಪ್ರದರ್ಶನ ಕಾಣುವ ಮೂಲಕ ಸ್ಯಾಂಡಲ್ ವುಡ್ನಲ್ಲಿ ದಾಖಲೆ ಪುಟ ಸೇರಿದೆ.
ಆದರೆ, ಕುರುಕ್ಷೇತ್ರ ನಿರ್ಮಿಸಿದ ನಿರ್ಮಾಪಕ ಮುನಿರತ್ನ ಮಾತ್ರ ರಾಜಕೀಯ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಏನಿದು? ಮುಂದೆ ಓದಿ....

ಮೈಲುಗಲ್ಲಾಗಿ ಉಳಿಯಿತು 50ನೇ ಚಿತ್ರ
ದರ್ಶನ್ ವೃತ್ತಿ ಜೀವನದ 50ನೇ ಚಿತ್ರ ಕುರುಕ್ಷೇತ್ರ. ಲೆಕ್ಕಾಚಾರದಲ್ಲಿ 51ನೇ ಸಿನಿಮಾ ಆಗಿ ರಿಲೀಸ್ ಆದರೂ, ಮೊದಲ ಆರಂಭವಾಯ್ತು ಎಂಬ ಕಾರಣಕ್ಕೆ ಇದೇ ನನ್ನ 50ನೇ ಸಿನಿಮಾ ಎಂದು ದರ್ಶನ್ ಘೋಷಿಸಿದ್ದರು. ಹಾಗಾಗಿ, ಡಿ ಬಾಸ್ ಕೆರಿಯರ್ ನಲ್ಲಿ 50ನೇ ಚಿತ್ರ ಮೈಲುಗಲ್ಲಾಗಿ ಉಳಿದುಕೊಂಡಿದೆ. 50ನೇ ಸಿನಿಮಾ ನೂರು ದಿನ ಪ್ರದರ್ಶನ ಕಂಡಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

6 ಚಿತ್ರಮಂದಿರದಲ್ಲಿ ಸೆಂಚುರಿ ಬಾರಿಸಿದೆ
ಕುರುಕ್ಷೇತ್ರ ಸಿನಿಮಾ ನೂರು ದಿನ ಪೂರೈಸಿದೆ ಎಂದು ಸುದ್ದಿಯಾಗುತ್ತಿದ್ದಂತೆ, ಯಾವ ಚಿತ್ರಮಂದಿರದಲ್ಲಿ ಎಂಬ ಪ್ರಶ್ನೆ ಎದುರಾಗಿತ್ತು. ಒರೆಯನ್ ಮಾಲ್ ಒಂದು ಸ್ಕ್ರೀನ್, ರಾಕ್ ಲೈನ್ ಮಾಲ್ ಒಂದು ಸ್ಕ್ರೀನ್, ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರ, ರಾಣಿಬೆನ್ನೂರಿನ ವೀಣಾ ಚಿತ್ರಮಂದಿರ, ವನಗಸಂದ್ರದ ಬೃಂದಾ ಚಿತ್ರಮಂದಿರ, ಆನೇಕಲ್ ನ ಲಕ್ಷ್ಮಿನರಸಿಂಹ ಚಿತ್ರಮಂದಿರ ಶತದಿನ ಪೂರೈಸಿದೆ ಎಂದು ಚಿತ್ರತಂಡ ಪೋಸ್ಟರ್ ಗಳಲ್ಲಿ ಪ್ರಕಟ ಮಾಡಿದೆ.

ಕಲೆಕ್ಷನ್ನಲ್ಲಿ ಎರಡನೇ ಸ್ಥಾನ?
ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಕುರುಕ್ಷೇತ್ರ ದಾಖಲೆ ಬರೆದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೂರು ದಿನ ಪೂರೈಸಿರುವ ಪೌರಾಣಿಕ ಚಿತ್ರ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಮೊದಲ ಸ್ಥಾನದಲ್ಲಿ ಕೆಜಿಎಫ್ ಸ್ಥಾನ ಪಡೆದುಕೊಂಡಿದೆ. ದರ್ಶನ್ ಸಿನಿಮಾಗಳ ಪೈಕಿ ಕುರುಕ್ಷೇತ್ರವೇ ಮೊದಲ ಸ್ಥಾನದಲ್ಲಿದೆಯಂತೆ. ಆದರೆ, ಸ್ಯಾಂಡಲ್ ವುಡ್ ನಲ್ಲಿ ನಿಖರವಾದ ಅಂಕಿ ಅಂಶಗಳು ದೊರೆಯವುದು ಕಷ್ಟ.

ಚಕ್ರವ್ಯೂಹದಲ್ಲಿ ಮುನಿರತ್ನ!
ಈ ಕಡೆ ಕುರುಕ್ಷೇತ್ರ ಸಿನಿಮಾ ನೂರು ದಿನ ಪೂರೈಸಿದ ಸಂಭ್ರಮದಲ್ಲಿ ಡಿ ಬಾಸ್ ಅಭಿಮಾನಿಗಳಿದ್ದಾರೆ. ಆದರೆ ಆ ಕಡೆ ನಿರ್ಮಾಪಕ ಮುನಿರತ್ನ ಅವರು ಮಾತ್ರ, ಶಾಸಕತ್ವದಿಂದ ಅನರ್ಹರಾಗಿ ಉಪಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಸದ್ಯಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಉಪಚುನಾವಣೆ ಇಲ್ಲ. ಬಿಜೆಪಿ ಸೇರ್ಪಡೆಯಾಗಿರುವ ಮುನಿರತ್ನ ಮುಂದೆ ಎದುರಿಸಬೇಕಾಗಿರುವ ಸವಾಲುಗಳಿಗೆ ಸಜ್ಜಾಗುತ್ತಿದ್ದಾರೆ. ಕುರುಕ್ಷೇತ್ರ ನಿರ್ಮಿಸಿದ ನಿರ್ಮಾಪಕ ಈಗ ಒಂದು ರೀತಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಅನುಭವದಲ್ಲಿದ್ದಾರೆ.

ಹಿಂದಿಯಲ್ಲಿ ರಿಲೀಸ್ ಆಗಲೇ ಇಲ್ಲ
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಕುರುಕ್ಷೇತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ದಕ್ಷಿಣದ ನಾಲ್ಕು ಭಾಷೆಗಳಲ್ಲು ಕುರುಕ್ಷೇತ್ರ ಬಿಡುಗಡೆಯಾಗಿತ್ತು. ಇದುವರೆಗೂ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಲೇ ಇಲ್ಲ. ಕಾರಣ ಏನು ಎಂಬುದು ಸದ್ಯಕ್ಕೆ ಗೊಂದಲವಾಗಿಯೇ ಉಳಿದುಕೊಂಡಿದೆ.


Click it and Unblock the Notifications











