ಮುನಿರತ್ನ ಹೀಗೆ ಮಾಡಿದ್ರೆ 'ಕುರುಕ್ಷೇತ್ರ' ಇನ್ನೂ ಎತ್ತರಕ್ಕೆ ಹೋಗ್ತಿತ್ತು.!
Recommended Video
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರಕ್ಕೆ ಬಹಳ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ನಿರೀಕ್ಷೆಯಂತೆ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ವಾರಾಂತ್ಯದಲ್ಲೇ 30 ಕೋಟಿವರೆಗೂ ಗಳಿಕೆ ಕಂಡು ಹೊಸ ದಾಖಲೆ ಬರೆದಿದೆ.
ಹಾಗಿದ್ದರೂ ಕುರುಕ್ಷೇತ್ರ ಚಿತ್ರತಂಡದ ಬಗ್ಗೆ ಕೆಲವರಿಗೆ ನಿರಾಸೆಯಾಗಿದೆ. ಯಾಕಂದ್ರೆ, ಚಿತ್ರತಂಡ ಸ್ವಲ್ಪ ಕೆಡಿಸಿಕೊಂಡಿದ್ದರೆ ಕುರುಕ್ಷೇತ್ರ ಚಿತ್ರವನ್ನ ಇನ್ನೊಂದು ಲವೆಲ್ ಗೆ ತೆಗೆದುಕೊಂಡು ಹೋಗಬಹುದಿತ್ತು. ಆದ್ರೆ, ಆ ಅವಕಾಶವನ್ನ ಕೈಚೆಲ್ಲಿದ್ದಾರೆ ಎಂಬ ಬೇಸರವೂ ಕಾಡುತ್ತಿದೆ.
ಹೌದು, ಬಹಳ ಕಷ್ಟಪಟ್ಟು, ಎರಡು ವರ್ಷದವರೆಗೂ ಆ ಚಿತ್ರಕ್ಕಾಗಿ ಕೆಲಸ ಮಾಡಿ, ದೊಡ್ಡ ಬಂಡವಾಳ ಹಾಕಿ, ಅಷ್ಟೊಂದು ಕಲಾವಿದರನ್ನ ಸೇರಿಸಿ ಸಿನಿಮಾ ಮಾಡಿದ್ದ ನಿರ್ಮಾಪಕ ಮುನಿರತ್ನ, ಪ್ರಚಾರದಲ್ಲಿ ಇನ್ನು ಸ್ವಲ್ಪ ಜಾಗೃತಿ ವಹಿಸಿದ್ದರೇ ಕುರುಕ್ಷೇತ್ರ ಚಿತ್ರವನ್ನ ಕನ್ನಡ ಇಂಡಸ್ಟ್ರಿಯ ಕಳಶ ಮಾಡಬಹುದಿತ್ತು. ಅಷ್ಟಕ್ಕೂ, ಮುನಿರತ್ನ ಏನೆಲ್ಲಾ ಮಾಡಬಹುದಿತ್ತು? ಮುಂದೆ ಓದಿ......

ಏಕಕಾಲದಲ್ಲಿ ಬಿಡುಗಡೆ ಮಾಡಬೇಕಿತ್ತು
ಕುರುಕ್ಷೇತ್ರ ಸಿನಿಮಾ ಎಲ್ಲಾ ಐದು ಭಾಷೆಯಲ್ಲೂ ಒಂದೇ ದಿನ ಬಿಡುಗಡೆಯಾಗಬೇಕಿತ್ತು. ಇಷ್ಟು ದಿನ ಕಾಯಿಸಿದ್ದ ನಿರ್ಮಾಪಕರು ಇದಕ್ಕಾಗಿ ಇನ್ನೊಂದಿಷ್ಟು ದಿನ ಮುಂದಕ್ಕೆ ಹಾಕಿದ್ದರೇ ಏನೂ ಆಗುತ್ತಿರಲಿಲ್ಲ. ಆಗ ಇಡೀ ದೇಶಾದ್ಯಂತ ಕುರುಕ್ಷೇತ್ರ ಅಬ್ಬರ ಸ್ವಲ್ಪ ಮಟ್ಟಿಗೆ ಹೆಚ್ಚಾಗುತ್ತಿತ್ತು. ಆದರೆ, ಆಗಸ್ಟ್ 9 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾತ್ರ ಬಂತು. ಆಗಸ್ಟ್ 15 ರಂದು ತಮಿಳಿನಲ್ಲಿ ತೆರೆಕಂಡಿತು. ಹಿಂದಿ ಮತ್ತು ಮಲಯಾಳಂನಲ್ಲಿ ಇನ್ನು ತೆರೆಕಂಡಿಲ್ಲ.

ಬೇರೆ ಭಾಷೆಯಲ್ಲಿ 'ಸ್ಟಾರ್' ಪ್ರಚಾರ ಮಾಡಬೇಕಿತ್ತು
ಸಹಜವಾಗಿ ಬೇರೆ ಭಾಷೆಯ ನಟರು ಕರ್ನಾಟಕದಲ್ಲಿ ತಮ್ಮ ಚಿತ್ರಗಳನ್ನ ಪ್ರಚಾರ ಮಾಡಬೇಕಾದರೇ, ಇಲ್ಲಿನ ಸ್ಟಾರ್ ಗಳನ್ನ ಆಹ್ವಾನಿಸುವುದು, ಅವರ ಬಗ್ಗೆ ಮಾತನಾಡುವುದನ್ನ ಮಾಡ್ತಾರೆ. ಆದರೆ, ಕುರುಕ್ಷೇತ್ರ ತಂಡ ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ ಸುದ್ದಿಗೋಷ್ಠಿ ಮಾಡಿತು. ಇದರಲ್ಲಿ ಕುರುಕ್ಷೇತ್ರ ತಂಡ ಮಾತ್ರ ಭಾಗಿಯಾಗಿತ್ತು. ಅಲ್ಲಿ ಅರ್ಜುನ್ ಸರ್ಜಾ ಬಿಟ್ಟರೇ ಉಳಿದವರಿಗೆಲ್ಲ ಇಂಡಸ್ಟ್ರಿ ಹೊಸತಾಗಿತ್ತು. ಒಂದು ವೇಳೆ ಅಲ್ಲಿನ ಸ್ಟಾರ್ ಗಳಿಂದ ಆಡಿಯೋ ಅಥವಾ ಟ್ರೈಲರ್ ರಿಲೀಸ್ ಮಾಡಿಸಿದ್ದರೇ ಕುರುಕ್ಷೇತ್ರದ ಕೂಗು ಮತ್ತಷ್ಟು ಜೋರಾಗುತ್ತಿತ್ತು.

ಮೇಕಿಂಗ್ ವಿಡಿಯೋ ಪರಿಣಾಮಕಾರಿಯಾಗಿ ಬಳಸಬಹುದಿತ್ತು
'ಕುರುಕ್ಷೇತ್ರ' ಸಿನಿಮಾದ ಮೇಕಿಂಗ್ ಬಗ್ಗೆ ಅತಿ ಹೆಚ್ಚು ಪ್ರಚಾರ ಮಾಡಬಹುದಿತ್ತು. ಅದಕ್ಕಾಗಿ ಹಾಕಲಾಗಿದ್ದ ಸೆಟ್, ವೇಷಭೂಷಣ, ಆಭರಣಗಳು, ಪೌರಾಣಿಕ ವಸ್ತುಗಳ ಬಳಕೆ, ಗ್ರಾಫಿಕ್ಸ್ ತಂತ್ರಜ್ಙಾನ ಇದೆಲ್ಲದರ ಬಗ್ಗೆ ಪ್ರತ್ಯೇಕ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ ಜನರನ್ನ ಸೆಳೆಯಬಹುದಿತ್ತು. ಬಹುತೇಕ ಎಲ್ಲ ಕಲಾವಿದರ ಮೇಕಿಂಗ್ ವಿಡಿಯೋವನ್ನ ಬೇರೆ ಬೇರೆಯಾಗಿ ಮಾಡಿ ಪ್ರಚಾರ ಮಾಡಬಹುದಿತ್ತು. ಬಾಹುಬಲಿ ಮಾಡಿದ್ದು ಇದೇ, ಕೆಜಿಎಫ್ ಬಳಸಿಕೊಂಡಿದ್ದು ಇದೇ ತಂತ್ರವನ್ನೆ.

ದುರ್ಯೋಧನನ ತಯಾರಿ ತೋರಿಸಬೇಕಿತ್ತು
ಕುರುಕ್ಷೇತ್ರ ಸಿನಿಮಾದ ಪ್ರಮುಖ ನಟ ದರ್ಶನ್, ಈ ಸಿನಿಮಾಗೆ ಎಷ್ಟು ಕಷ್ಟಪಟ್ಟಿದ್ದಾರೆ, ಅವರ ತಯಾರಿ ಹೇಗಿತ್ತು, ಸೆಟ್ ಗೆ ಬರುವುದಕ್ಕೆ ಮುಂಚೆ ಅವರ ತಯಾರಿ, ವೇಷಭೂಷಣ, ಆ ಗೆಟಪ್, ಡೈಲಾಗ್ ಅಭ್ಯಾಸ ಹೀಗೆ ದುರ್ಯೋಧನ ಪಾತ್ರದ ಬಗ್ಗೆ ಹೆಚ್ಚು ಫೋಕಸ್ ಮಾಡಿ ಮೇಕಿಂಗ್ ವಿಡಿಯೋ ಮೂಲಕ ಪ್ರಚಾರ ಮಾಡಬೇಕಿತ್ತು. ದುರ್ಯೋಧನ ಪಾತ್ರದ ಮೇಕಿಂಗ್ ಬಿಟ್ಟಿದ್ರೆ ಅದರ ಅಬ್ಬರ ಎಲ್ಲೋ ಹೋಗ್ತಿತ್ತು.

ಕನ್ನಡ ಕಲಾವಿದರನ್ನೇ ಪ್ರಯತ್ನಿಸಬೇಕಿತ್ತು
ಕುರುಕ್ಷೇತ್ರ ಸಿನಿಮಾ ಎಲ್ಲ ಕಲಾವಿದರು ಆಯಾ ಪಾತ್ರಗಳಿಗೆ ಸೂಕ್ತವಾಗಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ, ಆದರೆ, ಅರ್ಜುನ (ಸೋನು ಸೂದ್) ಮತ್ತು ಭೀಮ (ಡ್ಯಾನಿಶ್) ಕನ್ನಡದವರೇ ಆಯ್ಕೆ ಮಾಡಿಕೊಂಡಿದ್ದರೇ, ಕುರುಕ್ಷೇತ್ರ ಮತ್ತಷ್ಟು ಪರಿಪೂರ್ಣವಾಗಿರುತ್ತಿತ್ತು. ಈ ನಿಟ್ಟಿನಲ್ಲಿ ಮುನಿರತ್ನ ಅವರು ಬಹುತೇಕ ಕಲಾವಿದರನ್ನ ಸಂಪರ್ಕಿಸಿದ್ದರು. ಆದ್ರೆ, ಅವರ ಕಾಲ್ ಶೀಟ್ ಸಿಗದ ಕಾರಣ ಅಂತಿಮವಾಗಿ ಇವರನ್ನ ಕರೆದುಕೊಂಡ ಬರಬೇಕಾಯಿತು ಎನ್ನುವುದು ನಾವು ಗಮನಿಸಬೇಕು.

ಎಲ್ಲ ಇಂಡಸ್ಟ್ರಿಯಿಂದಲೂ ಕರೆತರಬಹುದಿತ್ತು
ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತೀರ್ಮಾನಿಸಿದ ನಂತರ ಮುನಿರತ್ನ ಅವರು ಸ್ವಲ್ಪ ಮಾರುಕಟ್ಟೆ ದೃಷ್ಟಿಯಿಂದ ಯೋಚನೆ ಮಾಡಬೇಕಿತ್ತು. ಅಂದ್ರೆ, ಕನ್ನಡ ಕಲಾವಿದರ ಜೊತೆಗೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಇಂಡಸ್ಟ್ರಿಯ ಕಲಾವಿದರನ್ನ ಆಯ್ಕೆ ಮಾಡಬಹುದಿತ್ತು. ಆಗ, ಎಲ್ಲ ಭಾಷೆಯವರಿಗೂ ತಲುಪಿಸುವಲ್ಲಿ ಸುಲಭವಾಗುತ್ತಿತ್ತು. ಆಗ ಸೋನು ಸೂದ್, ಡ್ಯಾನಿಶ್, ಜೊತೆಗೆ ಮತ್ತಷ್ಟು ಕಲಾವಿದರ ಬಲ ಸೇರುತ್ತಿತ್ತು.

ಇದನ್ನೆಲ್ಲ ಮೀರಿ ಗೆದ್ದಿದ್ದಾರೆ
ಇದನ್ನೆಲ್ಲ ಪಕ್ಕಕ್ಕೆ ಇಟ್ಟರೆ, ಮುನಿರತ್ನ ಅವರು ತಮ್ಮ ಧೈರ್ಯದಿಂದ ಕುರುಕ್ಷೇತ್ರ ಚಿತ್ರವನ್ನ ಮಾಡಿ ಗೆದ್ದಿದ್ದಾರೆ. ಇದು ನಿರ್ಮಾಪಕರ ಸಿನಿಮಾ ಎನ್ನುವ ಮಟ್ಟಕ್ಕೆ ಪ್ಲಾನ್ ಮಾಡಿ ಸಕ್ಸಸ್ ಕಂಡಿದ್ದಾರೆ. ಇದರ ಜೊತೆಗೆ ಈ ಮೇಲಿನ ಅಂಶಗಳ ಬಗ್ಗೆ ಸ್ವಲ್ಪ ಚಿಂತಿಸಿದ್ದರೇ ಭಾರತೀಯ ಚಿತ್ರರಂಗವನ್ನ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಬಹುದಿತ್ತು.


Click it and Unblock the Notifications











