ದರ್ಶನ್ ಕನಸು 'ವೀರ ಮದಕರಿ ನಾಯಕ' ಇನ್ನು ಈಡೇರುವುದು ಕಷ್ಟ? ಈ ಐತಿಹಾಸಿಕ ಸಿನಿಮಾವನ್ನು ಮರೆತು ಬಿಡಬೇಕಾ?
ರೇಣುಕಾಸ್ವಾಮಿ ಮರ್ಡರ್ ಕೇಸ್ ದರ್ಶನ್ ವೃತ್ತಿ ಬದುಕಿಗೆ ದೊಡ್ಡ ಪೆಟ್ಟು ಕೊಡಬಹುದು. ಕನ್ನಡ ಚಿತ್ರರಂಗದ ನಿರ್ಮಾಪಕ ಕೆ. ಮಂಜು ಲೆಕ್ಕಾಚಾರ ಏನೇ ಇದ್ದರೂ, ದರ್ಶನ್ ಸಿನಿಮಾ ಬದುಕಿಗೆ ಇದೊಂದು ಕಪ್ಪು ಚುಕ್ಕು ಆಗಿರುವುದಂತೂ ನಿಜ. ಮರ್ಡರ್ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಸದ್ಯಕ್ಕಂತೂ ಹೊರಬರುವುದು ಅನುಮಾನ. ಇಂತಹ ಸಂದರ್ಭದಲ್ಲಿ 'ವೀರ ಮದಕರಿ' ಸಿನಿಮಾ ಸದ್ದು ಮಾಡುತ್ತಿದೆ.
'ವೀರ ಮದಕರಿ' ದರ್ಶನ್ ಬಹಳ ಹಿಂದೆನೇ ನಟಿಸಬೇಕಿದ್ದ ಸಿನಿಮಾ. ರಾಕ್ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣಕ್ಕೂ ಮುಂದಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಒಂದಿಷ್ಟು ಈ ಸಿನಿಮಾದ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೂ, ಮಧ್ಯದಲ್ಲಿಯೇ ನಿಲ್ಲಿಸಬೇಕಾಗಿ ಬಂದಿತ್ತು.

ಹಾಗಂತ 'ವೀರ ಮದಕರಿ' ಸಿನಿಮಾ ಮಾಡಬೇಕು ಅನ್ನೋದು ದರ್ಶನ್ ಅವರ ಇತ್ತೀಚೆಗಿನ ಆಸೆಯಲ್ಲ. ದರ್ಶನ್ ಚಿತ್ರರಂಗಕ್ಕೆ ಆರಂಭದ ದಿನಗಳಲ್ಲಿಯೇ 'ವೀರ ಮದಕರಿ' ಸಿನಿಮಾ ಮಾಡಬೇಕು ಅಂತ ಆಸೆ ಪಟ್ಟಿದ್ದರು. ಆದರೆ, ಈ ಸಿನಿಮಾ ಮಾಡುವುದಕ್ಕೆ ಪ್ರಯತ್ನ ಪಟ್ಟಾಗಲೆಲ್ಲ ದರ್ಶನ್ಗೆ ನಿರಾಸೆ ಆಗಿದ್ದೇ ಹೆಚ್ಚು. ಮುಂದೆ ಇಂತಹದ್ದೊಂದು ಐತಿಹಾಸಿಕ ಮಾಡುವ ಎಲ್ಲಾ ಅವಕಾಶವೂ ಇತ್ತು. ಆದ್ರೀಗ ಅವರೇ ತಮ್ಮ ಕೈಯಾರೇ ಕಳೆದುಕೊಂಡಂತಾಗಿದೆ.
ಚಿತ್ರದುರ್ಗದ ಹುಲಿ ಮದಕರಿ ನಾಯಕ ಚರಿತ್ರೆಯನ್ನು ಕೇಳವುದೇ ಖುಷಿ. ಇಂತಹ ಐತಿಹಾಸಿಕ ಪುರುಷ ಸಾಹಸವನ್ನು ದರ್ಶನ್ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದರು. ಆದ್ರೀಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಮುಂದೆ ಇಂತಹ ಸಿನಿಮಾವನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ? ಒಂದು ವೇಳೆ ಐತಿಹಾಸಿಕ ಮಹಾಪುರುಷರ ಚರಿತ್ರೆಯಲ್ಲಿ ನಟಿಸಿದರೆ, ಜನರು ಒಪ್ಪುತ್ತಾರೆಯೇ ಅನ್ನೋ ಪ್ರಶ್ನೆ ಚಿತ್ರರಂಗದಲ್ಲಿ ಎದುರಾಗಿದೆ.
ಹೇಳಿ ಕೇಳಿ ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಮದಕರಿ ನಾಯಕನಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅದರಲ್ಲೂ ಚಿತ್ರದುರ್ಗ ಹಾಗೂ ಸುತ್ತಮುತ್ತ ಮದಕರಿ ನಾಯಕ ಆರಾಧಿಸುವ ಜನರಿಗೇನು ಕಮ್ಮಿಯಿಲ್ಲ. ಆದ್ರೀಗ ದರ್ಶನ್ ಅದೇ ಊರಿನ ತನ್ನ ಅಭಿಮಾನಿ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಈಗ ಜೈಲಿನಿಂದ ಹೊರ ಬಂದು ಆರೋಪ ಮುಕ್ತನಾದರೂ, ಒಂದಿಷ್ಟು ವರ್ಷ ಗ್ಯಾಪ್ ಕೊಟ್ಟು ಮತ್ತೆ ವೀರ ಮದಕರಿ ಸಿನಿಮಾದಲ್ಲಿ ನಟಿಸಿದರೆ, ಜನರು ಒಪ್ಪುತ್ತಾರೆಯೇ? ಅನ್ನುವ ಪ್ರಶ್ನೆಯಂತೂ ಎದುರಾಗಿದೆ.

ದರ್ಶನ್ ಈಗಾಗಲೇ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಚಿತ್ರರಂಗದಲ್ಲಿರುವ ಸೂಪರ್ಸ್ಟಾರ್ಗಳ ಪೈಕಿ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದು ದರ್ಶನ್ ಮಾತ್ರ. ಅದಕ್ಕೆ ಸಾಕ್ಷಿ 'ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ'. ಈ ಕಾರಣಕ್ಕೆ ' ವೀರ ಮದಕರಿ ನಾಯಕ' ಕೂಡ ಅವರಿಗೂ ಸೂಕ್ತ ಅನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ಹೀಗಾಗಿ 'ವೀರ ಮದಕರಿ ನಾಯಕ' ಸಿನಿಮಾ ಕೂಡ ಸೆಟ್ಟೇರಿತ್ತು. ರಾಕ್ಲೈನ್ ವೆಂಕಟೇಶ್ ನಿರ್ಮಾಣ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನವಿತ್ತು. ಕೆಲವು ದಿನಗಳ ಕಾಲ ಕೇರಳದಲ್ಲಿ ಚಿತ್ರೀಕರಣ ಕೂಡ ನಡೆದಿತ್ತು. ಬಳಿಕ ಹಲವು ಕಾರಣಗಳಿಗೆ ಆ ಸಿನಿಮಾವನ್ನು ಸ್ಥಗಿತಗೊಳಿಸಲಾಯಿತು. ಆದ್ರೀಗ ರೇಣುಕಾಸ್ವಾಮಿ ಮರ್ಡರ್ ಕೇಸ್ ದರ್ಶನ್ ಕನಸಿನ ಸಿನಿಮಾವನ್ನು ಶಾಶ್ವತವಾಗಿ ಅವರಿಂದ ಕಿತ್ತುಕೊಳ್ಳುತ್ತಾ? ಅನ್ನೋ ಅನುಮಾನ ಮೂಡಿದೆ.
ಸ್ಯಾಂಡಲ್ವುಡ್ನಲ್ಲಿ ಹೆಸರು ಹೇಳಲು ಇಚ್ಚಿಸದ ಕೆಲ ನಿರ್ಮಾಪಕರು ಕೂಡ ಇಂತಹದ್ದೇ ಆತಂಕವನ್ನು ಹೊರ ಹಾಕಿದ್ದಾರೆ. ಚಿತ್ರದುರ್ಗ ಹಾಗೂ ಅದರ ಸುತ್ತಮುತ್ತಲಿನ ಜನರಿಗೆ ದರ್ಶನ್ ಮೇಲೆ ಸಿಟ್ಟಿರಬಹುದು. ಒಂದು ವೇಳೆ ಸಿನಿಮಾ ನಿರ್ಮಾಣ ಆದರೂ, ಆ ಭಾಗಗಳಲ್ಲಿ ಓಡುವುದು ಅನುಮಾನ. ಹೀಗಾಗಿ ಅವರ ಕನಸಿನ ಸಿನಿಮಾವನ್ನು ಶಾಶ್ವತವಾಗಿ ಮರೆಯಬೇಕಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ವೀರ ಮದಕರಿ ನಾಯಕ' ಸಿನಿಮಾ ಸೆಟ್ಟೇರಿದಾಗ ಸುದೀಪ್ ಅಭಿಮಾನಿಗಳು ಕೂಡ ಅಸಮಧಾನ ಹೊರಹಾಕಿದ್ದರು. ಅವರ ಸಮುದಾಯದ ಸ್ವಾಮೀಜಿ ಕೂಡ ಅಖಾಡಕ್ಕೆ ಇಳಿದು ವಿರೋಧ ವ್ಯಕ್ತಪಡಿಸಿದ್ದರು. ಒಂದ್ವೇಳೆ ಮತ್ತೆ ಈ ಸಿನಿಮಾ ಆರಂಭ ಆದರೆ, ಮತ್ತೆ ಮದಕರಿ ನಾಯಕನ ಸಮುದಾಯ ಕೂಡ ವಿರೋಧ ವ್ಯಕ್ತ ಪಡಿಸುವ ಸಾಧ್ಯತೆಯಿದೆ. ಇನ್ನೊಂದು ಕಡೆ ಈಗಾಗಲೇ ಅನೌನ್ಸ್ ಆಗಿರುವ 'ವೀರ ಸಿಂಧೂರ ಲಕ್ಷ್ಮಣ'ದ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











