Darshan: ಎರಡೂ ಕಿಡ್ನಿ ಕಳೆದುಕೊಂಡ ಅಭಿಮಾನಿಗೆ ದಾಸ ದರ್ಶನ್ ಸಹಾಯಹಸ್ತ
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ಪ್ರಾಣಿ-ಪಕ್ಷಿ ಪ್ರೀತಿ ಹಾಗೂ ಸೇವಾಗುಣದಿಂದಲೂ ಇಷ್ಟವಾಗುತ್ತಾರೆ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋದು ದರ್ಶನ್ ನಿಯಮ. ಸಂಕಷ್ಟಕ್ಕೆ ಸಿಲುಕಿರುವ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆದರೆ ಅದು ಸುದ್ದಿ ಆಗದಂತೆ ನೋಡಿಕೊಳ್ಳುತ್ತಾರೆ.
ಸಾಕಷ್ಟು ಜನ ನಟ ದರ್ಶನ್ ಬಳಿ ಸಹಾಯ ಕೇಳಿ ಬರುತ್ತಾರೆ. ಅಂತಹವರಿಗೆ ಚಾಲೆಂಜಿಂಗ್ ಸ್ಟಾರ್ ಸಹಾಯ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಅಂದಾಗ ಅವರ ಆಸೆ ಈಡೇರಿಸಿದ್ದಾರೆ. 14 ವರ್ಷಗಳಿಂದ ತಮ್ಮ ಭೇಟಿಗಾಗಿ ಕಾಯುತ್ತಿದ್ದ ಸುದೀಪ್ ಎಂಬ ಅಭಿಮಾನಿಯನ್ನು ಇತ್ತೀಚೆಗೆ ದರ್ಶನ್ ಭೇಟಿ ಮಾಡಿದ್ದರು. ಆತ ನೆಚ್ಚಿನ ನಟನನ್ನು ನೋಡಬೇಕು ಎನ್ನುವ ಬಯಕೆಯಿಂದ ಪರಿತಪಿಸಿ ಖಿನ್ನತೆಗೆ ಜಾರಿದ್ದರು.

ಇದೀಗ ಕಿಡ್ನಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿಯೊಬ್ಬರಿಗೆ ಇತ್ತೀಚೆಗೆ ನಟ ದರ್ಶನ್ ನೆರವಾಗಿದ್ದಾರೆ. ರಕ್ಷಾಬಂಧನ ಸಂಭ್ರಮದ ವೇಳೆ ಆದರ್ಶ್ ಎಂದು ಅಭಿಮಾನಿಯೊಬ್ಬರು ತಮ್ಮ ಕಷ್ಟವನ್ನು ನೆಚ್ಚಿನ ನಟನ ಬಳಿ ಕೇಳಿಕೊಂಡಿದ್ದರು. ಕೂಡಲೇ ಆತನಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮಾಡಿ ಮಾತನಾಡಿದ್ದಾರೆ.
"ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಆದರ್ಶ್. ನಾನು ದರ್ಶನ್ ಅವರ ಅಭಿಮಾನಿ. ನನ್ನ ಎರಡೂ ಕಿಡ್ನಿ ಫೇಲ್ಯೂರ್ ಆಗಿತ್ತು. ದರ್ಶನ್ ಸರ್ನ ಭೇಟಿ ಮಾಡುವ ಆಸೆ ಇತ್ತು. ನಾಗರಾಜ್ ಅಣ್ಣನನ್ನು ಕೇಳಿಕೊಂಡೆ. ಅವರು ಭೇಟಿ ಮಾಡಿಸಿದರು. ಸಹಾಯ ಮಾಡಿದರು. ದರ್ಶನ್ ಸರ್ಗೂ ಗೋವಿಂದಣ್ಣನಿಗೂ ಧನ್ಯವಾದ" ಎಂದು ಅಭಿಮಾನಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಆದರ್ಶ್ ಮಾತನಾಡಿರುವ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದರ್ಶನ್ ಸಹಾಯಗುಣವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ ದಾಸ ದರ್ಶನ್ ಈಗ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ.
ತರುಣ್ ಸುಧೀರ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕ್ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಆರಾಧನಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್ ತಾರಾಗಣದಲ್ಲಿದ್ದಾರೆ.
ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ 'ಕಾಟೇರ' ಚಿತ್ರಕ್ಕಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದೆ. ಒಂದು ದೊಡ್ಡ ಶೆಡ್ಯೂಲ್ ಜೊತೆಗೆ ಸಾಂಗ್ಸ್ ಶೂಟಿಂಗ್ ಮಾತ್ರ ಬಾಕಿಯಿದೆ. ದಸರಾ ಸಂಭ್ರಮದಲ್ಲಿ 'ಕಾಟೇರ' ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಆದರೆ ಶೂಟಿಂಗ್, ಪ್ರೀ ಪ್ರೊಡಕ್ಷನ್, ಪ್ರಮೋಷನ್ ಎಲ್ಲದ್ದಕ್ಕೂ ಇನ್ನು ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ.
ನವೆಂಬರ್ನಲ್ಲಿ 'ಗರಡಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಯಶಸ್ ಸೂರ್ಯ ಸಹೋದರನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದು ಉಸ್ತಾದ್ ಆಗಿ ಕುಸ್ತಿ ಪಟ್ಟುಗಳನ್ನು ಹಾಕಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಬರುವ ದರ್ಶನ್ ಫೈಟ್ ಹೈಲೆಟ್ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿದೆ. ಬಿ. ಸಿ ಪಾಟೀಲ್ ಸಿನಿಮಾ ನಿರ್ಮಾಣ ಮಾಡಿ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











