ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ
'ಒಡೆಯ' ಸಿನಿಮಾದ ಪ್ರೆಸ್ ಮೀಟ್ ಕಾರ್ಯಕ್ರಮ ನಿನ್ನೆ (ಡಿಸೆಂಬರ್ 1) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿಯಾಗಿದ್ದು, ಸಿನಿಮಾದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ಒಡೆಯ' ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಸಂದೇಶ್, ಚಿತ್ರದ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟರು. ಸಿನಿಮಾದಲ್ಲಿ ನಾಯಕಿಯಾಗಿ ಸನಾ ತಿಮ್ಮಯ್ಯ ಹೇಗೆ ಆಯ್ಕೆಯಾದರು ಎಂದು ತಿಳಿಸಿದರು.
ಮೊದಲ ಸಿನಿಮಾದಲ್ಲಿಯೇ ದರ್ಶನ್ ಜೊತೆಗೆ ನಟಿಸುವ ಅವಕಾಶ ಸನಾ ತಿಮಯ್ಯ ಪಾಲಿಗೆ ಬಂದಿದೆ. ಸನಾ ತಿಮ್ಮಯ್ಯ ಹೆಸರು ಕೇಳಿದಾಗ ಈ ಹೊಸ ನಾಯಕಿ ಈ ಸಿನಿಮಾಗೆ ಹೇಗೆ ಆಯ್ಕೆ ಆದರು ಎನ್ನುವ ಪ್ರಶ್ನೆ ಬಂದಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. 'ಒಡೆಯ' ಸಿನಿಮಾ ತಂಡಕ್ಕೆ ಸನಾ ತಿಮ್ಮಯ್ಯ ಬರಲು ಪ್ರಮುಖ ಕಾರಣ ದರ್ಶನ್ ತಾಯಿ ಮೀನಾ ತೂಗುದೀಪ್.

ನಿರ್ಮಾಪಕರ ಬಳಿ ದರ್ಶನ್ ತಾಯಿ ಮನವಿ
ಸಂದೇಶ್ ಪ್ರೊಡಕ್ಷನ್ ನ ನಿರ್ಮಾಪಕ ಸಂದೇಶ್ ಅವರಿಗೆ ಕರೆ ಮಾಡಿದ ದರ್ಶನ್ ತಾಯಿ ಮೀನಾ ತೂಗುದೀಪ್ ಒಂದು ಮನವಿ ಮಾಡಿದರು. 'ಒಡೆಯ' ಸಿನಿಮಾಗೆ ಸನಾ ತಿಮ್ಮಯ್ಯ ಎಂಬ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಪ್ಪಾ ಎಂದು ಕೇಳಿಕೊಂಡರು. ನಾನು ಎಂದಿಗೂ, ಯಾವ ನಿರ್ಮಾಪಕ ಬಳಿಯೂ ಏನನ್ನು ಕೇಳಿಲ್ಲ. ನಿಮ್ಮ ಬಳಿ ಕೇಳುತ್ತಿದ್ದೇನೆ ಇದೊಂದು ಕೆಲಸ ಮಾಡಿಕೊಡಿ ಎಂದರಂತೆ.

ನಾಯಕಿಯನ್ನು ಯಾರೂ ನೋಡಿರಲಿಲ್ಲ
ಸನಾ ತಿಮ್ಮಯ್ಯ ಅವರನ್ನು ನಟ ದರ್ಶನ್ ಆಗಲಿ, ನಿರ್ಮಾಪಕ ಸಂದೇಶ್ ಆಗಲಿ, ನಿರ್ದೇಶಕ ಎಂ ಡಿ ಶ್ರೀಧರ್ ಆಗಲಿ ಯಾರೂ ಕೂಡ ನೋಡಿರಲಿಲ್ಲ. ದರ್ಶನ್ ತಾಯಿ ಸನಾ ತಿಮ್ಮಯ್ಯಗೆ ಒಂದು ಅವಕಾಶ ನೀಡಿ ಎಂದು ಸಂದೇಶ್ ಬಳಿ ಕೇಳಿದ್ದರು. ಮೀನಾ ತೂಗುದೀಪ್ ಮಾತಿಗೆ ಗೌರವ ನೀಡಿದ ಸಂದೇಶ್ ಅದೇ ರೀತಿ ಸನಾ ತಿಮ್ಮಯ್ಯರನ್ನು ಸಿನಿಮಾಗೆ ಆಯ್ಕೆ ಮಾಡಿದರು.

ತೂಗುದೀಪ ಪ್ರೊಡಕ್ಷನ್ಸ್ ಮತ್ತು ಸಂದೇಶ್ ಪ್ರೊಡಕ್ಷನ್ಸ್
''ನನಗೆ ತೂಗುದೀಪ ಪ್ರೊಡಕ್ಷನ್ಸ್ ಮತ್ತು ಸಂದೇಶ್ ಪ್ರೊಡಕ್ಷನ್ಸ್ ಎರಡೂ ಒಂದೇ. ಹಾಗಾಗಿ ನಾನು ಕೇಳುತ್ತಿದ್ದೇನೆ. ನನಗೆ ಕೇಳಲು ಅಧಿಕಾರ ಇದೆ. ಬೇರೆ ನಿರ್ಮಾಪಕರಾಗಿದ್ದರೆ ನಾನು ನಾಯಕಿ ಬಗ್ಗೆ ಮಾತನಾಡುತ್ತಿರಲಿಲ್ಲ. ನನ್ನ ಮಕ್ಕಳಿಗೂ ಕೇಳಿಲ್ಲ'' ಎಂದು ಹೇಳಿ ಸಂದೇಶ್ ಮುಂದೆ ಈ ಮನವಿ ಮಾಡಿಕೊಂಡರಂತೆ. ಈ ವಿಷಯ ನಿನ್ನೆಯ ವರೆಗೆ ದರ್ಶನ್ ಗೆ ಸಹ ತಿಳಿದಿರಲಿಲ್ಲವಂತೆ.

ದರ್ಶನ್ ತಾಯಿಗೆ ಒಡತಿಯ ಧನ್ಯವಾದ
''ನೀವು 'ಒಡೆಯ' ಸಿನಿಮಾಗೆ ನಾಯಕಿ ಆಗಲು ಮೀನಾ ತೂಗುದೀಪ್ ಕಾರಣ, ಅವರನ್ನು ಎಂದಿಗೂ ಮರೆಯಬೇಡಿ'' ಎಂದು ಸಂದೇಶ್ ನಾಯಕಿ ಸನಾ ತಿಮಯ್ಯಗೆ ಹೇಳಿದರು. ಸನಾ ತಿಮಯ್ಯ ಕೂಡ ದರ್ಶನ್ ತಾಯಿಗೆ ಮನಸಾರೆ ಧನ್ಯವಾದ ತಿಳಿಸಿದರು. ದರ್ಶನ್, ನಿರ್ದೇಶಕ ಹಾಗೂ ನಿರ್ಮಾಪಕರ ಸಹಕಾರವನ್ನು ನೆನೆದರು. ಇದು ನನ್ನ ಸುಂದರ ಕನಸು ಎಂದರು.


Click it and Unblock the Notifications











