ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಆರೋಪಕ್ಕೆ ತೂಗುದೀಪ ಅಕೌಂಟೆಂಟ್ ದೀಪಕ್ ತಿರುಗೇಟು
ಸಾಲದ ಸುಳಿಗೆ ಸಿಲುಕಿ 7 ವರ್ಷ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದರು. ದಿಢೀರನೆ ಊರು ಬಿಟ್ಟು ಹೋಗಿದ್ದೇಕೆ? ಏಳೆಂಟು ಕೋಟಿ ಸಾಲ ಮಾಡಿಕೊಂಡಿದ್ದೇಕೆ? ದರ್ಶನ್ ಜೊತೆಗಿನ ಒಡನಾಟ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಲ್ಲಿ ಸ್ಪಷ್ಟನೆ ನೀಡಿದ್ದರು. ತಮ್ಮ ತಪ್ಪಿಗೆ ಪಶ್ಚಾತ್ತಾಪ ಕೂಡ ಪಟ್ಟಿದ್ದಾರೆ. ಆದಷ್ಟು ಬೇಗ ಎಲ್ಲರ ಸಾಲ ವಾಪಸ್ ಕೊಡುವ ಭರವಸೆಯ ಮಾತುಗಳನ್ನಾಡಿದ್ದಾರೆ.
ದರ್ಶನ್ ಹಾಗೂ ಮಲ್ಲಿಕಾರ್ಜುನ್ ಅವರದ್ದು 15 ವರ್ಷಗಳ ಒಡನಾಟ. ತಮ್ಮ ಸಹೋದರನಂತೆ ಮಲ್ಲಿ ಅವರನ್ನು ದರ್ಶನ್ ನೋಡಿಕೊಳ್ಳುತ್ತಿದ್ದರು. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆ ಜವಾಬ್ದಾರಿ ವಹಿಸಿದ್ದರು. ತಮ್ಮ ಮ್ಯಾನೇಜರ್ ಹುದ್ದೆಯನ್ನು ಕೊಟ್ಟಿದ್ದರು. ಇದರ ಜೊತೆ ಜೊತೆಗೆ ಮಲ್ಲಿ ಸಿನಿಮಾ ನಿರ್ಮಾಣ, ವಿತರಣೆ ಕೂಡ ಮಾಡುತ್ತಿದ್ದರು. ಮುಖ್ಯವಾಗಿ 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ ಸಮಸ್ಯೆ ಆಗಿತ್ತು. ಮಲ್ಲಿ ಊರು ಬಿಡಲು ಇದು ಒಂದು ಕಾರಣ.

ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ 'ಪ್ರೇಮಬರಹ'. ಮಲ್ಲಿಕಾರ್ಜುನ್ ಈ ಚಿತ್ರದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಸಿನಿಮಾ ತೆರೆಕಂಡು ಕೆಲ ವಾರಗಳ ಬಳಿಕ ಅರ್ಜುನ್ ಸರ್ಜಾ ಅವರಿಗೆ ಮಲ್ಲಿಕಾರ್ಜುನ್ ಒಂದಷ್ಟು ಲೆಕ್ಕ ತೋರಿಸಿದ್ದರು. ಅದರಲ್ಲಿ ತಪ್ಪು ಕಂಡುಬಂದಿತ್ತು. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ದೀಪಕ್ ಟೈಪ್ ಮಾಡಿ ಕೊಟ್ಟ ಲೆಕ್ಕವನ್ನು ನಾನು ಸರಿಯಾಗಿ ನೋಡದೇ ಅರ್ಜುನ್ ಸರ್ಜಾ ಅವರಿಗೆ ಕೊಟ್ಟಿದ್ದೆ ಎಂದು ಮಲ್ಲಿ ಈಗ ಹೇಳಿದ್ದಾರೆ.
ಮಲ್ಲಿಕಾರ್ಜುನ್ ಹೇಳಿದ್ದ ಲೆಕ್ಕವನ್ನೇ ನಾನು ಮಾಡಿದ್ದೆ. ಅವರು ಹೇಳಿದಂತೆ ಲೆಕ್ಕ ಹಾಕಿ ಟೈಪ್ ಮಾಡಿಕೊಟ್ಟಿದ್ದೆ. ನನ್ನಿಂದ ಯಾವುದೇ ತಪ್ಪು ಆಗಿಲ್ಲ ಎಂದು ಇದೀಗ ದೀಪಕ್ ಗಂಗಾಧರ್ ತಿರುಗೇಟು ನೀಡಿದ್ದಾರೆ. ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ 'ಪ್ರೇಮಬರಹ' ಸಿನಿಮಾ ವಿಚಾರವಾಗಿ ಮಾತನಾಡುವಾಗ ನನ್ನ ಬಗ್ಗೆ ಹೇಳಿರುವುದು ತಪ್ಪು ಎಂದಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ದೀಪಕ್ ಈ ಬಗ್ಗೆ ಮಾತನಾಡಿದ್ದಾರೆ.

ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ದೀಪಕ್ ಐದಾರು ವರ್ಷ ಕೆಲಸ ಮಾಡಿದ್ದರು. 2013ರಲ್ಲಿ 'ಬುಲ್ಬುಲ್' ಚಿತ್ರದಿಂದ ಆರಂಭಿಸಿ 2017ರವರೆಗೆ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. "ಎಲ್ಲಾ ವ್ಯವಹಾರ ಮಲ್ಲಿಕಾರ್ಜುನ್ ನೋಡಿಕೊಳ್ತಿದ್ರು.. ಎಲ್ಲರೂ ನಾಮಕಾವಸ್ತೆಗೆ ಇದ್ದರೂ ಸಂಪೂರ್ಣ ಹಿಡಿತ ಇವರ ಕೈಯಲ್ಲೇ ಇತ್ತು. ಥಿಯೇಟರ್ ಬಾಡಿಗೆ, ಪರ್ಸೆಂಟೆಜ್ ಸೇರಿದಂತೆ ಎಲ್ಲಾ ಹಣಕಾಸಿನ ವ್ಯವಹಾರ ಅವರ ಕೈಯಲ್ಲಿತ್ತು. ಅವ್ರು ಹೇಳಿದ್ದನ್ನು ಮಾತ್ರ ನಾವು ಮಾಡ್ತಿದ್ವಿ. ನಮ್ಮ ತಪ್ಪಿನಿಂದ, ನನ್ನ ಟೈಪಿಂಗ್ ತಪ್ಪಿನಿಂದ ಹೀಗಾಯ್ತು ಎಂದು ಮಲ್ಲಿಕಾರ್ಜುನ್ ಹೇಳ್ತಿದ್ದಾರೆ. ಅದು ತಪ್ಪು, ಸುಳ್ಳು. ಏನು ನಡೆದಿದ್ಯೋ ಎಲ್ಲವನ್ನು ಮಲ್ಲಿಕಾರ್ಜುನ್ ಮಾಡಿದ್ದು" ಎಂದಿದ್ದಾರೆ.
ಅರ್ಜುನ್ ಸರ್ಜಾ ಸರ್ ಹೇಳಿದ ಬಳಿಕ ಕರೆಕ್ಷನ್ ಮಾಡಿದ್ದು ನಿಜ. ಆದ್ರೆ ಮೊದ್ಲು ಅಕೌಂಟ್ ಮಾಡಿದ್ದು ಮಲ್ಲಿಕಾರ್ಜುನ್, ಬಳಿಕ ಅದನ್ನು ಸರಿಪಡಿಸಿದ್ದು ಕೂಡ ಅವ್ರೇ.. ಅವ್ರು ಪಕ್ಕ ಕೂತು ಲೆಕ್ಕ ಮಾಡಿಸ್ತಿದ್ರು.. ನಾವು ಟೈಮ್ ಮಾಡಿ ಪ್ರಿಂಟ್ ಕೊಡುವುದು ಮಾತ್ರ ನಮ್ಮ ಕೆಲಸವಾಗಿತ್ತು. 'ಪ್ರೇಮಬರಹ' ಚಿತ್ರದ ಕಲೆಕ್ಷನ್, ಆ ಲೆಕ್ಕ ಎಷ್ಟು ಎನ್ನುವುದು ಮರೆತು ಹೋಗಿದೆ ಎಂದು ದೀಪಕ್ ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.
ಮಲ್ಲಿಕಾರ್ಜುನ್ ವಿರುದ್ಧ ಅರ್ಜುನ್ ಸರ್ಜಾ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೀತಿದೆ. ಮಲ್ಲಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿತ್ತು. ಕಳೆದ ವರ್ಷ ಬೇಲ್ ಪಡೆದಿದ್ದರು. ವರ್ಷದ ಹಿಂದೆಯೇ ಮಲ್ಲಿಕಾರ್ಜುನ್ ಬೆಂಗಳೂರಿಗೆ ಬಂದು ಹೋಗಿದ್ದರು. ದಿನಕರ್ ಅವರನ್ನು ಕೂಡ ಭೇಟಿ ಮಾಡಿದ್ದಾಗಿ ಹೇಳಿದ್ದಾರೆ. ಆಗ ದರ್ಶನ್ ಬೇಲ್ ಪಡೆದು ಹೊರಗಡೆ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಅವರನ್ನು ಭೇಟಿ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications