twitter
    For Quick Alerts
    ALLOW NOTIFICATIONS  
    For Daily Alerts

    ರಾಜಕಾರಣಿ ಮಲ್ಲಿಕಾರ್ಜುನ್ ಹುಟ್ಟುಹಬ್ಬಕ್ಕೆ ದರ್ಶನ್ ಸೇರಿ ತಾರೆಯರ ದಂಡು!

    By ದಾವಣಗೆರೆ ಪ್ರತಿನಿಧಿ
    |

    ರಾಜಕಾರಣಿಗಳು ಸಿನಿಮಾ ನಟರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಮೊದಲಿನಿಂದಲೂ ನಡೆದು ಬಂದಿದೆ. ಚುನಾವಣೆ ಬಂತೆಂದರೆ ನಮ್ಮ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯಗಳ ಸಿನಿಮಾ ತಾರೆಯರನ್ನೂ ಪ್ರಚಾರಕ್ಕೆ ಎಳೆತಂದು ಜೊತೆಯಲ್ಲಿ ನಿಂತು ಫೋಸು ನೀಡುತ್ತಾರೆ.

    ತಮ್ಮ ಖಾಸಗಿ ಕಾರ್ಯಕ್ರಮಗಳಿಗೂ ಸಿನಿಮಾ ತಾರೆಯರನ್ನು ಕರೆತಂದು ತಮ್ಮ ಮೌಲ್ಯ ಹೆಚ್ಚು ಮಾಡಿಕೊಳ್ಳುವ ಯತ್ನ ಮಾಡುತ್ತಾರೆ. ಮದುವೆಗಳಿಗೆ, ಹುಟ್ಟುಹಬ್ಬಗಳಿಗೆ ಸಿನಿಮಾ ತಾರೆಯರನ್ನು ಆಹ್ವಾನಿಸಿ ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಾರೆ.

    ಇದೀಗ ದಾವಣಗೆರೆಯ ಜನಪ್ರಿಯ ರಾಜಕಾರಣಿ, ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಇವರ ಹುಟ್ಟುಹಬ್ಬಕ್ಕೆ ನಟ ದರ್ಶನ್ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ತಾರೆಯರನ್ನು ಕರೆಯಲಾಗುತ್ತಿದೆ.

    ಸೆಪ್ಟೆಂಬರ್ 22 ರಂದು ಕಾಂಗ್ರೆಸ್ ಮುಖಂಡ ಎಸ್‌ಎಸ್ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಆಚರಣೆ ದಾವಣೆಗೆರೆಯ ನಗರದ ಬಾಪೂಜಿ ಎಂಬಿಎ ಕಾಲೇಜಿನ ಬೃಹತ್ ಮೈದಾನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಟ ದರ್ಶನ್, ಡಿಂಪಲ್ ಕ್ವೀನ್ ರಚಿತಾ ರಾಮ್, ಹಾಸ್ಯ ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಸ್ಯಾಂಡಲ್ ವುಡ್ ನ ಸಿನಿ ತಾರೆಯರು ಆಗಮಿಸಲಿದ್ದಾರೆ.

    ದರ್ಶನ್‌ ಗೆಳೆಯ ಎಸ್‌ಎಸ್ ಮಲ್ಲಿಕಾರ್ಜುನ್

    ದರ್ಶನ್‌ ಗೆಳೆಯ ಎಸ್‌ಎಸ್ ಮಲ್ಲಿಕಾರ್ಜುನ್

    ಸಂಜೆ ಆರು ಗಂಟೆಯಿಂದ ರಾತ್ರಿ 10ರವರೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಮ್ಯೂಸಿಕಲ್ ನೈಟ್ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ತೂಗುದೀಪ ಆಗಮಿಸುವ ಮೂಲಕ ಮಲ್ಲಿಕಾರ್ಜುನ್ ರ ಜನುಮ ದಿನಕ್ಕೆ ಶುಭ ಕೋರಲಿದ್ದಾರೆ. ರಸ ಮಂಜರಿಯ ಮೂಲಕ ಬಂದವರಿಗೆ ರಸದೌತಣ ನೀಡಲಾಗುತ್ತದೆ ಎಂದರು. ದರ್ಶನ್ ಹಾಗೂ ಎಸ್‌ಎಸ್ ಮಲ್ಲಿಕಾರ್ಜುನ್ ನಡುವೆ ಉತ್ತಮ ಸ್ನೇಹವಿದೆ. ಈ ಹಿಂದೆ ಕೆಲವು ಭಾರಿ ಇಬ್ಬರೂ ಆತ್ಮೀಯವಾಗಿ ಭೇಟಿಯಾಗಿದ್ದಾರೆ. ಇಬ್ಬರೂ ಸಹ ಪ್ರಾಣಿ ಪ್ರೇಮಿಗಳೇ ಆಗಿದ್ದು, ದರ್ಶನ್‌ಗೆ, ಮಲ್ಲಿಕಾರ್ಜುನ್ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದೀಗ ದರ್ಶನ್‌ರ ಫಾರ್ಮ್‌ ಹೌಸ್‌ನಲ್ಲಿದೆ.

    13 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್

    13 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್

    ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ರ 55ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಗರದ ಬಾಪೂಜಿ ಎಂಬಿಎ ಕಾಲೇಜಿನ ಸುಮಾರು 13 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದ್ದು, ಸೆ.22ರಂದು ಅದ್ಧೂರಿ ಹಾಗೂ ವೈಭವೋಪೇತವಾಗಿ ಆಚರಿಸಲು ಎಸ್ ಎಸ್ ಎಂ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದಕ್ಕಾಗಿ ಕಳೆದ 20 ದಿನಗಳಿಂದಲೂ ರಕ್ತದಾನ ಶಿಬಿರ, ಚೆಸ್, ಸ್ಕೇಟಿಂಗ್, ತಳ್ಳು ಗಾಡಿ ವ್ಯಾಪಾರಿಗಳಿಗೆ ಜರ್ಕಿನ್ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿ

    ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿ

    ಸೆ. 22 ರಂದು ಮಧ್ಯಾಹ್ನ 1. 30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಹೆಚ್. ಸಿ. ಮಹಾದೇವಪ್ಪ, ಶಾಸಕರಾದ ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್, ಎಸ್. ರಾಮಪ್ಪ, ಪಿ. ಟಿ. ಪರಮೇಶ್ವರ್ ನಾಯ್ಕ್, ಮಾಜಿ ಶಾಸಕರಾದ ಡಿ. ಬಿ. ಶಾಂತನಗೌಡ, ಹೆಚ್. ಪಿ. ರಾಜೇಶ್, ಬಸವಂತಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    60 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

    60 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

    ಇನ್ನು ಪ್ರಭಾ ಮಲ್ಲಿಕಾರ್ಜುನ್ ರ ನೇತೃತ್ವದಲ್ಲಿ 5555 ಮಂದಿ ರಕ್ತ ಸಂಗ್ರಹಿಸುವ ಮೂಲಕ ಗಿನ್ನಿಸ್ ದಾಖಲೆ ಬರೆಯಬೇಕೆಂಬ ನಿಟ್ಟಿನಲ್ಲಿ ಎಲ್ಲೆಡೆ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಈ ರಕ್ತವನ್ನು ಬಡವರಿಗೆ ನೀಡುವಂಥ ಮಾನವೀಯ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ, ಹರಪನಹಳ್ಳಿ, ಜಿಲ್ಲೆಯ ಏಳು ತಾಲೂಕುಗಳಿಂದ ಕನಿಷ್ಠ ನಾಲ್ಕೂವರೆಯಿಂದ 5 ಸಾವಿರ ಜನರು ಆಗಮಿಸಲಿದ್ದಾರೆ. ಈಗಾಗಲೇ ನಾವೆಲ್ಲರೂ ಪ್ರತಿ ತಾಲೂಕಿಗೆ ಹೋಗಿ ಈ ಬಗ್ಗೆ ಸಭೆ ನಡೆಸಿ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇವೆ. 60 ಸಾವಿರಕ್ಕೂ ಹೆಚ್ಚು ಜನರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ಊಟದ ವ್ಯವಸ್ಥೆ

    ಊಟದ ವ್ಯವಸ್ಥೆ

    ಸಮಾರಂಭಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನ, ಪ್ರಥಮ ಚಿಕಿತ್ಸೆ ನೀಡಲು ಸಣ್ಣದಾದ ಕ್ಲಿನಿಕ್ ಸಹ ತೆರೆಯಲಾಗುತ್ತದೆ. ಒಟ್ಟಿನಲ್ಲಿ ದಾವಣಗೆರೆಯಲ್ಲಿ ಅಂದು ಅದ್ದೂರಿ ಕಾರ್ಯಕ್ರಮ ನಡೆಸುವ ಮೂಲಕ ಮಲ್ಲಿಕಾರ್ಜುನ್ ಅವರಿಗೆ ಶಕ್ತಿ ತುಂಬುವ ಕೆಲಸ ನಡೆಸಲಾಗುತ್ತದೆ. ಇದು ಪಕ್ಷಕ್ಕೂ ಅನುಕೂಲವಾಗಲಿದೆ. ಜೊತೆಗೆ ಮತ್ತೆ ಮಲ್ಲಿಕಾರ್ಜುನ್ ಅವರು ಶಾಸಕರಾಗಿ, ಸಚಿವರಾಗಿ ಜಿಲ್ಲೆಯ ಮತ್ತಷ್ಟು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದರು.

    English summary
    Actor Darshan, Rachita Ram and many other sandalwood celebrities to attend politician SS Mallikarjuna's birthday program on Septermber 22.
    Monday, September 19, 2022, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X