ದರ್ಶನ್ ನಟನೆಯ ಆ ರೀಮಿಕ್ಸ್ ಸಿನಿಮಾ ಮರುಬಿಡುಗಡೆಗೆ ಸಜ್ಜು
ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಪ್ರಯತ್ನ ಇತ್ತೀಚೆಗೆ ಹೆಚ್ಚಾಗಿದೆ. ನಿರ್ಮಾಪಕರು, ವಿತರಕರು ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಕೆಲ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡ್ತಿವೆ. ಇದೀಗ ದರ್ಶನ್ ನಟನೆಯ ರೀಮಿಕ್ಸ್ ಸಿನಿಮಾವೊಂದು ಮತ್ತೆ ತೆರೆಗೆ ಬರ್ತಿದೆ.
ರೀಮೆಕ್ ಗೊತ್ತು. ಯಾವುದು ರೀಮಿಕ್ಸ್ ಎನ್ನುವ ಪ್ರಶ್ನೆ ಕೆಲವರನ್ನು ಕಾಡಬಹುದು. ಒಂದು ಸಿನಿಮಾ ರೀಮೆಕ್ ರೈಟ್ಸ್ ಪಡೆದು ಅದನ್ನು ಬೇರೆ ಭಾಷೆಗೆ ಮಾಡುವುದು ರೀಮೆಕ್ ಸಿನಿಮಾಗಳು. ಆದರೆ ಎರಡ್ಮೂರು ಸಿನಿಮಾಗಳ ಕಥೆಗಳನ್ನು ಮಿಕ್ಸ್ ಮಾಡಿ ಒಂದು ಸಿನಿಮಾ ಮಾಡುವ ಪ್ರಯತ್ನಗಳು ಕೆಲವೊಮ್ಮೆ ನಡೆದಿದೆ.

ಉಪೇಂದ್ರ ನಟನೆಯ 'ಐಶ್ವರ್ಯ' ಅದಕ್ಕೆ ಉತ್ತಮ ಉದಾಹರಣೆ. ತಮಿಳಿನ 'ಗಜಿನಿ' ಹಾಗೂ ತೆಲುಗಿನ 'ಮನ್ಮಥುಡು' ಚಿತ್ರಗಳ ಕಥೆಯನ್ನು ಅಲ್ಲಲ್ಲಿ ಮಿಕ್ಸ್ ಮಾಡಿ ಇಂದ್ರಜಿತ್ ಲಂಕೇಶ್ 'ಐಶ್ವರ್ಯ' ಚಿತ್ರ ಕಟ್ಟಿಕೊಟ್ಟಿದ್ದರು. ಓಂ ಪ್ರಕಾಶ್ ರಾವ್ ಕೂಡ ಇದೇ ರೀತಿಯ ಪ್ರಯತ್ನವನ್ನು 'ಕಲಾಸಿಪಾಳ್ಯ', 'ಮಂಡ್ಯ' ಸಿನಿಮಾಗಳಲ್ಲಿ ಮಾಡಿದ್ದರು.
ತಮಿಳಿನ 'ಧೂಳ್', 'ಕಾಕ್ಕಾ ಕಾಕ್ಕ' ಹೀಗೆ ನಾಲ್ಕೈದು ಸಿನಿಮಾ ಕಥೆಗಳನ್ನು ಸೇರಿಸಿ 'ಕಲಾಸಿಪಾಳ್ಯ' ಸಿನಿಮಾ ಮಾಡಲಾಗಿತ್ತು. ಅದೇ ರೀತಿ ತೆಲುಗಿನ 'ಇಂದ್ರ' ಹಾಗೂ 'ಸಾಂಬ' ಸಿನಿಮಾ ಕಥೆಗಳನ್ನು ಸೇರಿಸಿ 'ಮಂಡ್ಯ' ಚಿತ್ರ ಕಟ್ಟಿಕೊಟ್ಟಿದ್ದರು. ಇದೇ ಸಿನಿಮಾ ಮುಂದಿನ ವಾರ ರೀ-ರಿಲೀಸ್ ಆಗುತ್ತಿದೆ. ಇದು ಸಹಜವಾಗಿಯೇ ದರ್ಶನ್ ಅಭಿಮಾನಿಗಳಿಗೆ ಸಂತಸ ತಂದಿದೆ.
ಮೇ 16ರಂದು ನಗರದ ಪ್ರಸನ್ನ ಸೇರಿದಂತೆ ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ 'ಮಂಡ್ಯ' ಸಿನಿಮಾ ರೀ-ರಿಲೀಸ್ ಆಗ್ತಿದೆ. ಓಂ ಪ್ರಕಾಶ್ ರಾವ್ ಸ್ವತಃ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆ ರಕ್ಷಿತಾ ಹಾಗೂ ರಾಧಿಕಾ ನಾಯಕಿಯರಾಗಿ ನಟಿಸಿದ್ದರು. ಗುರುಕಿರಣ್ ಸಂಗೀತದಲ್ಲಿ ಚಿತ್ರ ಹಾಡುಗಳು ಹಿಟ್ ಆಗಿತ್ತು. 19 ವರ್ಷಗಳ ಬಳಿಕ ಈ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ.

'ಕಲಾಸಿಪಾಳ್ಯ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಅದೇ ಕಾಂಬಿನೇಷನ್ನಲ್ಲಿ 'ಮಂಡ್ಯ' ಸಿನಿಮಾ ನಿರ್ಮಾಣವಾಗಿತ್ತು. ಇದು ಪಕ್ಕಾ ದರ್ಶನ್ ಅಭಿಮಾನಿಗಳಿಗೆ ಅಂತ ಮಾಡಿದ್ದ ಸಿನಿಮಾ. ಊರಿಗಾಗಿ ತನ್ನವರಿಗಾಗಿ ಪ್ರಾಣ ಕೊಡುವುದಕ್ಕೂ ಪ್ರಾಣ ತೆಗೆಯುವುದಕ್ಕೂ ಹಿಂದು ಮುಂದು ನೋಡದ ನಾಯಕ ಈಶ್ವರ್(ದರ್ಶನ್). ಈ ಹಾದಿಯಲ್ಲಿ ಭದ್ರಯ್ಯ(ಧರ್ಮ)ನನ್ನು ಈಶ್ವರ್ ಎದುರು ಹಾಕಿಕೊಳ್ಳುತ್ತಾನೆ. ಊರಿನಲ್ಲಿ ರಕ್ತಪಾತ ಹೆಚ್ಚಾದಾಗ ಕೆಲ ವರ್ಷಗಳ ಕಾಲ ಅಜ್ಞಾತದಲ್ಲಿ ಇದ್ದು ಬಿಡುತ್ತಾನೆ. ಗಣೇಶ್ ಎಂದು ಹೆಸರು ಬದಲಿಸಿಕೊಂಡು ಸುಮ್ಮನಿದ್ದುಬಿಡುತ್ತಾನೆ.
ಊರಿನಲ್ಲಿ ಮತ್ತೆ ಭದ್ರಯ್ಯನ ಅಟ್ಟಹಾಸ ಹೆಚ್ಚಾದಾಗ ತನ್ನವರಿಗಾಗಿ ಈಶ್ವರ್ ಮತ್ತೆ ಊರಿಗೆ ವಾಪಸ್ ಬರುತ್ತಾನೆ. ಭದ್ರಯ್ಯನನ್ನು ಮಟ್ಟಹಾಕಿ ಊರಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದು 'ಮಂಡ್ಯ' ಚಿತ್ರದ ಒನ್ಲೈನ್ ಸ್ಟೋರಿ. ಗುರುಕಿರಣ್ ಸಂಗೀತದಲ್ಲಿ ಒಂದೆರಡು ಹಾಡುಗಳು ಹಿಟ್ ಆಗಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡರೂ ದೊಡ್ಡಮಟ್ಟದಲ್ಲಿ ಗೆದ್ದಿರಲಿಲ್ಲ. ಆದರೆ ನಿರ್ಮಾಪಕರಿಗೆ ನಷ್ಟವಾಗಲಿಲ್ಲ. ಬಿ, ಸಿ ಸೆಂಟರ್ಗಳಲ್ಲಿ ಸಿನಿಮಾ ಸದ್ದು ಮಾಡಿತ್ತು.
'ಶಾಸ್ತ್ರಿ', 'ಕರಿಯ', 'ನವಗ್ರಹ' ಸೇರಿ ದರ್ಶನ್ ನಟನೆಯ ಕೆಲ ಸಿನಿಮಾಗಳು ಇತ್ತೀಚೆಗೆ ರೀ-ರಿಲೀಸ್ ಆಗಿತ್ತು. ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಇದೀಗ 'ಮಂಡ್ಯ' ಸಿನಿಮಾ ಮತ್ತೆ ತೆರೆಗೆ ಬರುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ನಟ ದರ್ಶನ್ ಬ್ಯುಸಿಯಾಗಿದ್ದಾರೆ. ವರ್ಷಾಂತ್ಯಕ್ಕೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದ್ದು ಇನ್ನಿಲ್ಲದ ಕುತೂಹಲ ಮೂಡಿಸಿದೆ.


Click it and Unblock the Notifications











