ದರ್ಶನ್ ಬಿಡುಗಡೆ ಬಗ್ಗೆ ಖ್ಯಾತ ಜ್ಯೋತಿಷಿಯ ಭವಿಷ್ಯ
ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿ 4 ತಿಂಗಳು ಕಳೆದಿದೆ. ಈಗಾಗಲೇ ಐವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಆರೋಪಿಗಳು ಜಾಮೀನು ಕೋರಿ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ನಲ್ಲಿ ಅಕ್ಟೋಬರ್ 28ಕ್ಕೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ನೆಚ್ಚಿನ ನಟ ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದು ವಕೀಲರ ಮೂಲಕ ಜಾಮೀನು ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ಆಗಾಗ್ಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೆಲ ಜ್ಯೋತಿಷಿಗಳು ಕೂಡ ದರ್ಶನ್ ಭವಿಷ್ಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಸದ್ಯ ಡಾ. ಲಕ್ಷ್ಮೀಕಾಂತ ಆಚಾರ್ಯರು ನೀಡಿರುವ ಹೇಳಿಕೆ ಸದ್ದು ಮಾಡ್ತಿದೆ.

ಕೆಲ ದಿನಗಳ ಹಿಂದೆಯೇ ಡಾ. ಲಕ್ಷ್ಮೀಕಾಂತ ಆಚಾರ್ಯರು ಮಾತನಾಡಿ ಕಾರ್ತಿಕ ಮಾಸದ ಅಂತ್ಯದ ವೇಳೆಗೆ ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ಬರುತ್ತಾರೆ ಎಂದು ಹೇಳಿಕೆ ನೀಡಿದ್ದರು. ತಾವು ಈ ಬಗ್ಗೆ ಮಾತನಾಡುವಾಗಲೇ ಮುಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದ್ದಾಳೆ ಎಂದು ಹೇಳಿದ್ದರು. ಆಶ್ವಯುಜ ಮಾಸ ಹಾಗೂ ಕಾರ್ತಿಕ ಮಾಸದ ನಡುವೆ ದರ್ಶನ್ ಬಿಡುಗಡೆ ಆಗುತ್ತಾರೆ ಎಂದು ಅವರು ಹೇಳಿರುವುದಾಗಿ ವರದಿ ಆಗಿದೆ.
ಸದ್ಯ ಆಶ್ವಯುಜ ಮಾಸದ ಅಂತ್ಯದಲ್ಲಿದ್ದು ಶೀಘ್ರದಲ್ಲೇ ಕಾರ್ತಿಕ ಮಾಸ ಶುರುವಾಗಲಿದೆ. ಅಂದರೆ ಇನ್ನೊಂದು ವಾರದಲ್ಲಿ ದರ್ಶನ್ ಬಿಡುಗಡೆ ಆಗುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಅಭಿಮಾನಿಗಳು ಸಹ ಅಂತಾದೊಂದು ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ದರ್ಶನ್ ಪರ ಹಿರಿಯ ವಕೀಲರಾದ ಕೆವಿ ನಾಗೇಶ್ ಹೈಕೋರ್ಟ್ನಲ್ಲಿ ಕೂಡ ವಾದ ಮಂಡಿಸಲಿದ್ದಾರೆ. ಈಗಾಗಲೇ ದರ್ಶನ್ ಆರೋಗ್ಯ ಸಮಸ್ಯೆ ವಿಚಾರವನ್ನು ನ್ಯಾಯಾಧೀಶರ ಮುಂದಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ನ್ಯಾಯಾಧೀಶರು ದರ್ಶನ್ ಆರೋಗ್ಯಸ್ಥಿತಿ ಮಾಹಿತಿ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬೆನ್ನು ನೋವಿನ ಸಮಸ್ಯೆಯಿಂದ ನಟ ದರ್ಶನ್ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಬೆನ್ನುಹುರಿ ಸಮಸ್ಯೆ ಬಹುವಾಗಿ ಕಾಡುತ್ತಿದೆ ಎನ್ನಲಾಗ್ತಿದೆ. ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್ನಿಂದ ಹೊರಗೆ ಬಂದು ಹೋಗಲು ದರ್ಶನ್ ನೋವಿನಿಂದ ಬಳಲುತ್ತಿರುವುದು ಗೊತ್ತಾಗುತ್ತಿದೆ. ತಿಂಡಿ- ತಿನಿಸು ಬ್ಯಾಗ್ ಹೊತ್ಯೊಯ್ಯಲು ಕಷ್ಟಪಡುತ್ತಿದ್ದಾರೆ. ಅಕ್ಟೋಬರ್ 28ಕ್ಕೆ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಬಾರಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುತ್ತಾ ಕಾದು ನೋಡಬೇಕಿದೆ.
ಮತ್ತೊಂದು ಕಡೆ ದರ್ಶನ್ ನಟನೆಯ 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗುತ್ತಿದೆ. ನವೆಂಬರ್ 8ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ದಿನಕರ್ ತೂಗುದೀಪ್ ಘೋಷಣೆ ಮಾಡಿದ್ದಾರೆ. ಅದೇ ದಿನ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಕೂಡ ತೆರೆಗೆ ಬರಲಿದೆ. 'ನವಗ್ರಹ' ಸಿನಿಮಾ ಬಿಡುಗಡೆಯಾದ 16 ವರ್ಷಕ್ಕೆ ಸರಿಯಾಗಿ ಮತ್ತೆ ಬರುತ್ತಿರುವುದು ವಿಶೇಷ.
'ನವಗ್ರಹ' ಸಿನಿಮಾ ರಿಲೀಸ್ ವೇಳೆಗೆ ದರ್ಶನ್ ಸಹ ಜಾಮೀನು ಪಡೆದು ಹೊರಬರುತ್ತಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ದೊಡ್ಡಮಟ್ಟದಲ್ಲೇ ಸಿನಿಮಾ ರೀ-ರಿಲೀಸ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಪ್ರಚಾರ ಆರಂಭವಾಗಿದೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲೇ ಸಿನಿಮಾ ನಿರ್ಮಾಣವಾಗಿತ್ತು. ದರ್ಶನ್ ಜೊತೆಗೆ ಕನ್ನಡ ಚಿತ್ರರಂಗ ಖ್ಯಾತ ಖಳನಟರ ಮಕ್ಕಳು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಈ ಚಿತ್ರವನ್ನು ರೀ-ರಿಲೀಸ್ ಮಾಡುವಂತೆ ಬಹಳ ದಿನಗಳಿಂದ ಕೇಳುತ್ತಲೇ ಇದ್ದರು.


Click it and Unblock the Notifications











