ರಾಜ್ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆ
ಡಾ.ರಾಜ್ಕುಮಾರ್ ಅವರು ನಮ್ಮನ್ನು ಅಗಲಿ ಹದಿನೈದು ವರ್ಷಗಳಾದವು. ಇಂದು ಅವರ ಹದಿನೈದನೇ ಪುಣ್ಯಸ್ಮರಣೆ. ಸಿನಿರಂಗದ ಹಲವಾರು ಮಂದಿ ಇಂದು ರಾಜ್ಕುಮಾರ್ ಅವರನ್ನು ಅವರ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
ನಟ ದರ್ಶನ್ ಅವರು ಟ್ವೀಟ್ ಮೂಲಕ ಡಾ.ರಾಜ್ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದು, 'ನಮ್ಮ ಕರುನಾಡಿಗೆ ಅಪಾರ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಸದಾ ರಾಜನಾಗಿ ಉಳಿದಿರುವ ಅಣ್ಣಾವ್ರು ಡಾ ರಾಜ್ ರವರ ಪುಣ್ಯಸ್ಮರಣೆಯಿಂದು. ಮರೆಯಲಾಗದ ಮಾಣಿಕ್ಯ' ಎಂದಿದ್ದಾರೆ.
ದರ್ಶನ್ ಅವರು ಎಳವೆಯಿಂದಲೂ ರಾಜ್ಕುಮಾರ್ ಅವರ ಅಭಿಮಾನಿ ಮತ್ತು ಅಣ್ಣಾವ್ರ ಬಗ್ಗೆ ವಿಶೇಷ ಗೌರವ ಉಳ್ಳವರು. ಈ ಬಗ್ಗೆ ಹಲವು ಬಾರಿ ಅವರು ಮಾತನಾಡಿದ್ದಾರೆ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರೂ ಸಹ ರಾಜ್ಕುಮಾರ್ ಅವರ ಬಗ್ಗೆ ವಿಶೇಷ ಗೌರವ ಹೊಂದಿದ್ದರು.

ದರ್ಶನ್ ಮಾತ್ರವೇ ಅಲ್ಲದೆ, ನಟ ಜಗ್ಗೇಶ್ ಅವರೂ ಸಹ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. 'ನಮ್ಮ ತಂದೆಯವರು ತೀರಿಕೊಂಡಾಗ ಹೇಗೆ ಭಾಸವಾಗಿತ್ತೊ ಹಾಗೆಯೇ ರಾಜ್ಕುಮಾರ್ ಅವರು ತೀರಿಕೊಂಡಾಗಲೂ ಆಗಿತ್ತು' ಎಂದಿದ್ದಾರೆ ನಟ ಜಗ್ಗೇಶ್.
ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಸಿನಿಮಾ ರಂಗದ ಹಲವಾರು ಮಂದಿ ಕಲಾವಿದರು ಇಂದು ಕಂಠೀರವ ಸ್ಟುಡಿಯೋಕ್ಕೆ ಬಂದು ರಾಜ್ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
Recommended Video
ಸಿನಿಮಾ ನಟ-ನಟಿಯರು ಮಾತ್ರವೇ ಅಲ್ಲದೆ ಹಲವಾರು ಮಂದಿ ಸಿನಿಪ್ರೇಮಿಗಳು, ಅಭಿಮಾನಿಗಳು ಸಹ ಡಾ.ರಾಜ್ಕುಮಾರ್ ಅಗಲಿದ ದಿನದ ಬಗ್ಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಹಲವೆಡೆ ರಾಜ್ಕುಮಾರ್ ಪುತ್ಥಳಿಗೆ ಇಂದು ವಿಶೇಷ ಪೂಜೆಗಳನ್ನು ಸಹ ಮಾಡಲಾಗಿದೆ.


Click it and Unblock the Notifications











