'ಸಂಭವಾಮಿ ಯುಗೇ ಯುಗೇ' ಟ್ರೈಲರ್ ನೋಡಿದ್ರಾ? ರೇಣುಕಾಸ್ವಾಮಿ ಕೊಲೆ ಹೋಲುವ ದೃಶ್ಯ ಕಾಕತಾಳಿಯವೇ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಎಲ್ಲಿ ನೋಡಿದರೂ, ದರ್ಶನ್ ವಿರುದ್ಧ ಆಕ್ರೋಶದ ಮಾತುಗಳೇ ಕೇಳಿ ಬರುತ್ತಿವೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಮತ್ತು ಅವರ ಗ್ಯಾಂಗ್ ವಿಚಾರಣೆಯನ್ನು ಎದುರಿಸುತ್ತಿದೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯ ಅಷ್ಟೇ ಅಲ್ಲ, ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಹಲ್ಚಲ್ ಮೂಡಿಸಿದೆ. ಆದರೆ, ಕಾಕತಾಳೀಯವೋ ಏನೋ? ಇಲ್ಲೊಂದು ಸಿನಿಮಾದ ಟ್ರೈಲರ್ನಲ್ಲಿ ರೇಣುಕಾಸ್ವಾಮಿ ಮೃತದೇಹ ಸಿಕ್ಕಿದ ರೀತಿಯಂತಹ ದೃಶ್ಯವಿದೆ. ಆ ದೃಶ್ಯ ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಅಂದ್ಹಾಗೆ ಆ ಸಿನಿಮಾ ಯಾವುದು ಅಂತೀರಾ 'ಸಂಭವಾಮಿ ಯುಗೇ ಯುಗೇ'. ಯುವ ಪ್ರತಿಭೆಗಳ ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಟ್ರೈಲರ್ ನೋಡಿದವರಿಗೆ ಒಂದು ದೃಶ್ಯ ಗಮನ ಸೆಳೆದಿದೆ. ಆ ದೃಶ್ಯವನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವಂತೆಯೇ ಇದೆ. ಅಷ್ಟಕ್ಕೂ ಈ ದೃಶ್ಯಕ್ಕೂ, ಈ ಕೇಸ್ಗೂ ಸಂಬಂಧವಿಲ್ಲ. ಆದರೆ, ಸಿನಿಮಾ ಬಿಡುಗಡೆ ಸಮಯದಲ್ಲಿಯೇ ರೇಣುಕಾಸ್ವಾಮಿ ಹತ್ಯೆಯಾಗಿದ್ದು ಕಾಕತಾಳೀಯ ಅಷ್ಟೇ.
'ಸಂಭವಾಮಿ ಯುಗೇ ಯುಗೇ' ಸಿನಿಮಾ ಥೀಮ್ ಬೇರೆನೇ ಇದೆ. ಹಳ್ಳಿಯ ಯುವಕರು ವಿದ್ಯಾವಂತರಾದ ಮೇಲೆ ನಗರ ಸೇರುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಯುವಕರೇ ಇಲ್ಲದಂತಾಗಿದೆ. ಇದು ದೇಶದ ಸದ್ಯದ ಪರಿಸ್ಥಿತಿ. ಹೀಗೇ ಆದರೆ, ಹೊಲ, ತೋಟಗಳನ್ನು ನೋಡುವವರು ಯಾರು? ಅನ್ನೋದು ಆತಂಕವಿದೆ. ಇದನ್ನೇ ಎಳೆಯಾಗಿ ಇಟ್ಟುಕೊಂಡು 'ಸಂಭವಾಮಿ ಯುಗೇ ಯುಗೇ' ಸಿನಿಮಾ ಮಾಡಲಾಗಿದೆ.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜಯ್ ಶೆಟ್ಟಿ, ನಿಶಾ ರಜಪೂತ್, ಸುಧಾರಾಣಿ ಸೇರಿದಂತೆ ಹಲವು ಪ್ರಮುಖ ನಟರುಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಯುವಕರು ಶಿಕ್ಷಣ ಮುಗಿಸಿ ಪಟ್ಟಣ ಸೇರಿದರೆ ಏನಾಗುತ್ತೆ? ಅಲ್ಲಿಯೇ ಉಳಿದು ಕೊಂಡರೆ ಹಳ್ಳಿಗಳನ್ನು ನೋಡಿ ಕೊಳ್ಳುವವರು ಯಾರು? ಇದರಿಂದ ಮುಂದಿನ ತಲೆಮಾರಿನ ಕಥೆ ಏನಾಗುತ್ತೆ? ಅನ್ನುವುದನ್ನು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಈ ಸಿನಿಮಾದಲ್ಲಿ ಹೇಳಿದ್ದಾರೆ.
ಆದರೆ, ಈ ಗಂಭೀರ ಕಥೆಯನ್ನು ಎಂಟರ್ಟೈನಿಂಗ್ ಆಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ 'ಸಂಭವಾಮಿ ಯುಗೇ ಯುಗೇ' ಸಿನಿಮಾದಲ್ಲಿ ಕೆಲವು ಮಾಸ್ ಎಲಿಮೆಂಟ್ಗಳನ್ನು ಸೇರಿಸಲಾಗಿದೆ. ಕಥೆ ಸಾಗುವ ಈ ಹಂತದಲ್ಲಿ ಮೃತದೇಹವೊಂದು ಗುರುತೇ ಸಿಗದ ರೀತಿಯಲ್ಲಿ ಪತ್ತೆಯಾಗುವಂತಹ ದೃಶ್ಯ ಈ ಸಿನಿಮಾದ ಟ್ರೈಲರ್ನಲ್ಲಿ ನೋಡಬಹುದು. ಅದಕ್ಕೆ ಈ ಟ್ರೈಲರ್ ನೋಡಿ.
ಹಾಗಂತ 'ಸಂಭವಾಮಿ ಯುಗೇ ಯುಗೇ' ಸಿನಿಮಾದ ಈ ದೃಶ್ಯಕ್ಕೂ ರೇಣುಕಾಸ್ವಾಮಿ ಕೊಲೆ ಕೇಸ್ಗೂ ಯಾವುದೇ ಸಂಬಂಧವಿಲ್ಲ. ಹಾಗೇ ಹೋಲಿಕೆ ಆಗುತ್ತಿರುವುದು ಕೇವಲ ಕಾಕತಾಳೀಯವಷ್ಟೇ. ಈ ಸಿನಿಮಾ ಶೂಟಿಂಗ್ ಮುಗಿದೆ ಹಲವು ತಿಂಗಳುಗಳೇ ಆಗಿವೆ. ಇದೇ ಜೂನ್ 21ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿಯನ್ನು ನಡೆಸಿದೆ.


Click it and Unblock the Notifications











