'ಡೆವಿಲ್' ಶೂಟಿಂಗ್ ವೇಳೆ ಬೆನ್ನುನೋವಿನಿಂದ ಕುಸಿದು ಬಿದ್ದಿದ್ದ ದರ್ಶನ್; ವೀಡಿಯೋ ಬಿಟ್ಟ ಫ್ಯಾನ್ಸ್
ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಅವರಿಗೆ ಹೈಕೋರ್ಟ್ನಿಂದ ರೆಗ್ಯುಲರ್ ಜಾಮೀನು ಸಿಕ್ಕಿತ್ತು. ಆದರೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಕೂಡಲೇ ದರ್ಶನ್ ಅವರನ್ನು ವಶಕ್ಕೆ ಪಡೆಯುವಂತೆ ಸೂಚಿಸಿತ್ತು.
ಕಳೆದ ವರ್ಷ ಜೂನ್ 11ರಂದು ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ವಿಚಾರ ವಿವಾದ ಸೃಷ್ಟಿಸಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಬೆನ್ನು ನೋವಿನಿಂದ ಬಳಲಿದ್ದರು. ಕೂಡಲೇ ಸರ್ಜರಿ ಮಾಡಿಸಬೇಕು ಎಂದು ವಕೀಲರು ವಾದಿಸಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಕೊಡಿಸಿದ್ದರು.

ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದು ದರ್ಶನ್ ಬಿಡುಗಡೆ ಆಗಿದ್ದರು. ಆದರೆ ಡಿಸೆಂಬರ್ನಲ್ಲಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಬಳಿ ಡಿಸ್ಚಾರ್ಜ್ ಆಗಿದ್ದರು. ಬಳಿಕ ಕೆಲ ತಿಂಗಳ ವಿಶ್ರಾಂತಿ ಪಡೆದಿದ್ದರು. ಮೈಸೂರಿನಲ್ಲಿ ಸರ್ಜರಿ ಮಾಡಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಮಾಡಿಸಿಕೊಳ್ಳಲಿಲ್ಲ. ಮಾರ್ಚ್ನಲ್ಲಿ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
ಚಿತ್ರೀಕರಣ ವೇಳೆ ಕೂಡ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ಚಿತ್ರಕ್ಕೆ ಸಂಭಾಷಣೆ ಬರೆದಿರುವ ಕಾಂತರಾಜ್ ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ದರ್ಶನ್ ಬೆನ್ನು ನೋವು ತಾಳಲಾರದೇ ಚಿತ್ರೀಕರಣದ ಸೆಟ್ನಲ್ಲೇ ಮಲಗಿಬಿಟ್ಟರು ಎಂದಿದ್ದರು. ಅದಕ್ಕೆ ಸಂಬಂಧಿಸಿದ ಮೇಕಿಂಗ್ ವೀಡಿಯೋವನ್ನು ಇದೀಗ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. "ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ರವರು ಬೆನ್ನು ನೋವಿನಲ್ಲೂ ಡೆವಿಲ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದರ್ಶನ್ ಸರ್ ರವರ ಬೆನ್ನು ನೋವಿನ ಸತ್ಯ" ಎಂದು ವೀಡಿಯೋ ಪೋಸ್ಟ್ ಮಾಡಲಾಗಿದೆ.
ದರ್ಶನ್ ಬೆನ್ನು ನೋವಿನ ನೆಪವೊಡ್ಡಿ ಸರ್ಜರಿ ಮಾಡಿಸಬೇಕು ಎಂದು ಹೇಳಿ ಜಾಮೀನು ಪಡೆದಿದ್ದಾರೆ. ಆದರೆ ಯಾವುದೇ ಚಿಕಿತ್ಸೆ ಪಡೆದಿಲ್ಲ, ಸರ್ಜರಿಯನ್ನೂ ಮಾಡಿಸಿಕೊಂಡಿಲ್ಲ. ಆದರೆ ವಿದೇಶಕ್ಕೆ ತೆರಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಹಾಗಾಗಿ ಬೆನ್ನು ನೋವು ಎಂಬ ಕಾರಣ ಸಮಂಜಸವಾಗಿಲ್ಲ ಎಂದು ಸರ್ಕಾರಿ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ಅದಕ್ಕೆ ಸಂಬಂಧಿಸಿ ಫೋಟೋ, ವಿಡಿಯೋ ಸಾಕ್ಷ್ಯ ಕೋರ್ಟ್ ಮುಂದಿಟ್ಟಿದ್ದರು. ಇದು ಕೂಡ ದರ್ಶನ್ ಜಾಮೀನು ರದ್ದಾಗಲು ಒಂದು ಕಾರಣ ಎನ್ನಲಾಗುತ್ತದೆ.
ನಟ ದರ್ಶನ್ ಅವರಿಗೆ ಬೆನ್ನು ನೋವು ಇರುವುದು ನಿಜ, ಇವತ್ತಿಗೂ ಅದರಿಂದ ಬಳಲುತ್ತಿದ್ದಾರೆ. 'ಡೆವಿಲ್' ಚಿತ್ರೀಕರಣದ ವೇಳೆಯೂ ಬೆನ್ನು ನೋವಿನಿಂದ ಎಷ್ಟು ಕಷ್ಟಪಟ್ಟಿದ್ದಾರೆ ನೋಡಿ ಎಂದು ಈಗ ವೀಡಿಯೋ ವೈರಲ್ ಮಾಡ್ತಿದ್ದಾರೆ. "ನಾಯಕಿಯನ್ನು ಭುಜದ ಮೇಲೆ ಹೊತ್ತುಕೊಂಡು ಬರುವ ಸನ್ನಿವೇಶ ಚಿತ್ರೀಕರಣ ನಡೀತಿತ್ತು. ಬೇಡ ಎಂದರೂ ಕೇಳದೇ ದರ್ಶನ್ ತಾವೇ ಆಕೆಯನ್ನು ಹೊತ್ತುಕೊಂಡು ಬಂದರು. ಬಳಿಕ ನೋವು ತಾಳಲಾರದೇ ಕುಸಿದು ಮಲಗಿಬಿಟ್ಟರು. ಆ ಸಮಯದಲ್ಲಿ ನಾನು ಅಲ್ಲೇ ಇದ್ದೆ. ಕಣ್ಣಾರೆ ಆ ದೃಶ್ಯ ನೋಡಿದ್ದೆ" ಎಂದು ಕಾಂತರಾಜ್ ನೆನಪಿಸಿಕೊಂಡಿದ್ದಾರೆ.
ಪ್ರಕಾಶ್ ನಿರ್ದೇಶನದಲ್ಲಿ 'ಡೆವಿಲ್' ಸಿನಿಮಾ ಮೂಡಿ ಬರ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್ ಹಾಗೂ ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿದ್ದರು. ಅಜನೀಶ್ ಲೋಕನಾಥ್ ಸಂಗೀತದಲ್ಲಿ 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











