ಅತ್ತ ಮಗನೊಟ್ಟಿಗೆ ಥಾಯ್ಲೆಂಡ್ ಫ್ಲೈಟ್ ಏರಿದ ದರ್ಶನ್; ಇತ್ತ ಫ್ಯಾನ್ಸ್ಗೆ ಗುಡ್ ನ್ಯೂಸ್
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದರ್ಶನ್ ಈ ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದೆ. ಹಾಡಿನ ಚಿತ್ರೀಕರಣಕ್ಕಾಗಿ ತಂಡ ವಿದೇಶದ ಫ್ಲೈಟ್ ಏರಿದೆ.
ಹಲವು ದಿನಗಳಿಂದ 'ಡೆವಿಲ್' ಟೀಂ ಹಾಡಿನ ಚಿತ್ರೀಕರಣಕ್ಕಾಗಿ ಹೊರ ದೇಶಕ್ಕೆ ಹೋಗುವ ಬಗ್ಗೆ ಚರ್ಚೆ ನಡೀತಿತ್ತು. ಅಂತೂ ಇಂತೂ ತಂಡ ನಿನ್ನೆ(ಜುಲೈ 15) ರಾತ್ರಿ ಥಾಯ್ಲೆಂಡ್ ವಿಮಾನ ಏರಿದೆ. ನಿರ್ದೇಶಕ ಪ್ರಕಾಶ್ ವೀರ್ ಜೊತೆ ದರ್ಶನ್ ಹಾಗೂ ಪುತ್ರ ವಿನೀಶ್ ವಿದೇಶಕ್ಕೆ ಹೊರಟರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಸ್ವಿಟ್ಜರ್ಲೆಂಡ್ನಲ್ಲಿ 'ಡೆವಿಲ್' ಸಿನಿಮಾ ಸಾಂಗ್ ಶೂಟಿಂಗ್ ಪ್ಲ್ಯಾನ್ ಮಾಡಿತ್ತು ಚಿತ್ರತಂಡ. ಆದರೆ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ದರ್ಶನ್ಗೆ ಯೂರೋಪ್ ವೀಸಾ ಸಿಗಲಿಲ್ಲ. ಹಾಗಾಗಿ ಥೈಲ್ಯಾಂಡ್ನ ಫುಕೆಟ್ನಲ್ಲಿ ಚಿತ್ರೀಕರಣಕ್ಕೆ ಯತ್ನಿಸಲಾಯಿತು. ನಟ ದರ್ಶನ್ಗೆ ವೀಸಾ ಸಿಕ್ಕ ಬಳಿಕ ತಂಡ ಅಲ್ಲಿಗೆ ಹೋಗಿ ತಲುಪಿದೆ. 10 ದಿನಗಳ ಕಾಲ ಅಲ್ಲಿನ ಸುಂದರ ಲೊಕೇಶನ್ಗಳಲ್ಲಿ ಒಂದು ಸಾಂಗ್ ಹಾಗೂ ಕೆಲ ಮಾಂಟೇಜ್ ಸನ್ನಿವೇಶಗಳನ್ನು ಸೆರೆಹಿಡಿಯಲಿದೆ.
ಚಿತ್ರತಂಡ ವಿದೇಶಕ್ಕೆ ತೆರಳುವ ಮುನ್ನ ಹೊಸ ಮೋಷನ್ ಪೋಸ್ಟರ್ ರಿಲೀಸ್ ಬಗ್ಗೆ ಅಪ್ಡೇಟ್ ಸಿಕ್ಕಿದೆ. 'ಡೆವಿಲ್' ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ. ಹಾಗಾಗಿ ಜುಲೈ 19ರಂದು ರಾತ್ರಿ 8 ಗಂಟೆಗೆ ಹೊಸ ಮೋಷನ್ ಪೋಸ್ಟರ್ನಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡಲು ತಂಡ ಮುಂದಾಗಿದೆ. ಈ ಬಗ್ಗೆ ಶ್ರೀಜೈಮಾತಾ ಕಂಬೈನ್ಸ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಲಭ್ಯವಾಗಿದೆ.
"ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ'ದಿ ಡೆವಿಲ್' ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19ರ ಶನಿವಾರದಂದು ಸಂಜೆ 8 ಗಂಟೆಗೆ ನಮ್ಮ ಸೋಶಿಯಲ್ ಮೀಡಿಯಾ ಪೇಜ್ ಹಾಗು ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲೂ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ" ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ದರ್ಶನ್ ಕಾಂಬಿನೇಷನ್ನಲ್ಲಿ 'ತಾರಕ್' ಸಿನಿಮಾ ಮಾಡಿದ್ದ ಪ್ರಕಾಶ್ 'ಡೆವಿಲ್' ಚಿತ್ರಕ್ಕೂ ಕೈ ಜೋಡಿಸಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನದ ಉದಯ್ಪುರದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಶೇಡ್ಗಳಿರುವ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಪಾತ್ರದಲ್ಲಿ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಅಕ್ಟೋಬರ್ ಕೊನೆ ವಾರದಲ್ಲಿ 'ಡೆವಿಲ್' ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ 'ಡೆವಿಲ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಕಾರಣಾಂತರಗಳಿಂದತಡವಾಗುತ್ತಿದೆ. ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿದ್ದಾರೆ. ಅದೆಲ್ಲಕ್ಕಿಂತ ಮುನ್ನ 'ಡೆವಿಲ್' ಸಿನಿಮಾ ತೆರೆಗೆ ಬರಬೇಕಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡೋಕೆ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











