15 ದಿನ ಮುನ್ನ 'ಡೆವಿಲ್' ಸೆಲೆಬ್ರೇಷನ್ ಆರಂಭಿಸಿದ ದರ್ಶನ್ ಫ್ಯಾನ್ಸ್; ಮುಂದೈತೆ ಅಸಲಿ ಹಬ್ಬ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ನೆಚ್ಚಿನ ನಟನ ಚಿತ್ರವನ್ನು ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಹಬ್ಬದ ರೀತಿ ಸಿನಿಮಾ ಸ್ವಾಗತಿಸಿ ಗೆಲ್ಲಿಸೋ ಪಣ ತೊಟ್ಟಿದ್ದಾರೆ.
ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತದೆ. 2 ವರ್ಷಗಳ ಹಿಂದೆ 'ಕಾಟೇರ' ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದಕ್ಕಿಂತ ದೊಡ್ಡಮಟ್ಟದಲ್ಲಿ 'ಡೆವಿಲ್' ಸಿನಿಮಾ ಸದ್ದು ಮಾಡುವ ನಿರೀಕ್ಷೆಯಿದೆ. ಪ್ರಕಾಶ್ ನಿರ್ದೇಶನದ ಈ ಸಿನಿಮಾ ಟೀಸರ್, ಸಾಂಗ್ಸ್ ಈಗಾಗಲೇ ಹಿಟ್ ಲಿಸ್ಟ್ ಸೇರಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಆಗಲಿದೆ.

ಇತ್ತೀಚೆಗೆ 'ಡೆವಿಲ್' ಚಿತ್ರತಂಡ ರಾಜ್ಯಾದ್ಯಂತ ಇರುವ ಅಭಿಮಾನಿಗಳನ್ನು ಕರೆದು ಸಭೆ ನಡೆಸಿತ್ತು. ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ತೂಗುದೀಪ ಕೂಡ ಈ ವೇಳೆ ಹಾಜರಿದ್ದರು. ದೊಡ್ಡಮಟ್ಟದಲ್ಲಿ 'ಡೆವಿಲ್' ಸ್ವಾಗತಿಸಿ ಸೆಲೆಬ್ರೇಟ್ ಮಾಡಲು ಈ ವೇಳೆ ನಿರ್ಮಾನಿಸಿದ್ದಾರೆ. ಅಭಿಮಾನಿಗಳು ಕೂಡ ಇದಕ್ಕೆ ಸೈ ಎಂದಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲೇ ಸಿನಿಮಾ ತೆರೆಗೆ ಬರ್ತಿದೆ.
13 ವರ್ಷಗಳ ಹಿಂದೆ ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ಬಂದು ಗೆದ್ದಿತ್ತು. ಅಂದು ಕೂಡ ಅಭಿಮಾನಿಗಳು ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದರು. ದರ್ಶನ್ ಮೇಲೆ ಏನೇ ಆರೋಪಗಳಿದ್ದರೂ ಅಭಿಮಾನಿಗಳು ಮಾತ್ರ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ 'ಡೆವಿಲ್' ಚಿತ್ರವನ್ನು ಗೆಲ್ಲಿಸಲು ಮುಂದಾಗಿದ್ದಾರೆ. ದರ್ಶನ್ ಚಿತ್ರಗಳು ಹೆಚ್ಚು ಸದ್ದು ಮಾಡು ಚಿತ್ರಮಂದಿರಗಳ ಆವರಣದಲ್ಲಿ ಈಗಾಗಲೇ ಸೆಲೆಬ್ರೇಷನ್ ಶುರುವಾಗಿದೆ.
ಬ್ಯಾನರ್ ಕಟ್ಟಿ, ಕಟೌಟ್ ನಿಲ್ಲಿಸಿ ಪಟಾಕಿ ಸಿಡಿಸಿ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ ಆವರಣದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. 'ಡೆವಿಲ್' ಚಿತ್ರಕ್ಕೆ ಶುಭಾಶಯ ಕೋರಿ ಅಭಿಮಾನಿಗಳು ಬ್ಯಾನರ್ ಹಾಕಿಸುತ್ತಿದ್ದಾರೆ. ಡಿಸೆಂಬರ್ 12ಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ದಿನ ಮುನ್ನ ಅಂದ್ರೆ 11ರಂದು ಸಿನಿಮಾ ತೆರೆಗೆ ಬರಲಿದೆ.
ಲಾಂಗ್ ವೀಕೆಂಡ್ ಸಿಕ್ಕರೆ ಹೆಚ್ಚು ಜನ ಸಿನಿಮಾ ನೋಡುತ್ತಾರೆ ಎನ್ನುವ ಲೆಕ್ಕಾಚಾರದಿಂದ ಒಂದು ದಿನ ಮೊದಲು ಅಂದ್ರೆ ಗುರುವಾರವೇ ಸಿನಿಮಾ ಬಿಡುಗಡೆ ಆಗ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಸುದೀಪ್ ನಟನೆಯ 'ಮಾರ್ಕ್' ಹಾಗೂ '45' ಚಿತ್ರಗಳು ತೆರೆಗೆ ಬರ್ತಿವೆ. ಅದಕ್ಕೂ ಮುನ್ನ 2 ವಾರಗಳಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಪ್ರಯತ್ನ ಶುರುವಾಗಿದೆ. ಕೆವಿಎನ್ ಸಂಸ್ಥೆ 'ಡೆವಿಲ್' ಚಿತ್ರದ ವಿತರಣೆಗೆ ಬೆಂಬಲವಾಗಿ ನಿಂತಿದೆ.
'ತಾರಕ್' ಬಳಿಕ ದರ್ಶನ್ ಹಾಗೂ ಪ್ರಕಾಶ್ ಒಟ್ಟಿಗೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ರಚನಾ ರೈ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಅವಿನಾಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ 'ಡೆವಿಲ್' ಚಿತ್ರಕ್ಕಿದೆ.
'ಡೆವಿಲ್' ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಬಳಿಕ ಕೊಂಚ ಬಿಡುವು ಪಡೆದಿದ್ದರು. ಮತ್ತೆ ಚಿತ್ರೀಕರಣ ಆರಂಭಿಸುವ ವೇಳೆಗೆ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದು ದರ್ಶನ್ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಬಂದು ದರ್ಶನ್ ಚಿತ್ರೀಕರಣ ಮುಗಿಸಿದ್ದರು. ಬೆನ್ನು ನೋವಿನ ನಡುವೆಯೂ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಚಿತ್ರದ 3 ಹಾಡುಗಳು ಬಿಡುಗಡೆ ಆಗಿದೆ. ಇನ್ನೊಂದು ಹಾಡು ಶೀಘ್ರದಲ್ಲೇ ಹೊರಬರಲಿದೆ.


Click it and Unblock the Notifications











