ಜೈಲಿನ ಒಳಗೆ ತೆಗೆದ ದರ್ಶನ್ ಫೋಟೊ ಹೇಗೆ ಹೊರಬಂತು? ಪುನೀತ್ ಕೆರೆಹಳ್ಳಿ ಪ್ರಶ್ನೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 3 ರಾತ್ರಿ ಕಳೆದಿದ್ದಾರೆ. ಯಾವುದೇ ವಿಐಪಿ ಟ್ರೀಟ್ಮೆಂಟ್ ಸಿಗದೇ ಕಂಗಾಲಾಗಿದ್ದಾರೆ. ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುನ್ನ ಪೊಲೀಸರು ಕ್ಲಿಕ್ಕಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಜೈಲಿನ ಒಳಗೆ ತೆಗೆದ ದರ್ಶನ್ ಫೋಟೊ ಹೊರ ಬಂದಿದ್ದು ಹೇಗೆ ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ.
ವೈರಲ್ ಫೋಟೊದಲ್ಲಿ ದರ್ಶನ್ ತಲೆ ಬೋಳಿಸಿಕೊಂಡಿರುವ ಲುಕ್ನಲ್ಲಿ ನೋಡಬಹುದು. ದರ್ಶನ್ ಇತ್ತೀಚೆಗೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮುಡಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್ ಹೊಸ ಲುಕ್ ವೈರಲ್ ಆಗುತ್ತಿದೆ. ತರಹೇವಾರಿ ಕಾಮೆಂಟ್ಸ್ ಬರುತ್ತಿದೆ. ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ದರ್ಶನ್ ವಿಗ್ ಹಾಕಿಕೊಳ್ಳುತ್ತಾರೆ ಎಂದು ಸುದ್ದಿ ಆಗಿತ್ತು. ಇದೀಗ ವಿಗ್ ಇಲ್ಲದೇ ತಲೆ ಬೋಳಿಸಿಕೊಂಡು ಲುಕ್ ಬದಲಾಗಿದೆ.

ವೈರಲ್ ಫೋಟೊ ಬಗ್ಗೆ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಟ್ವೀಟ್ ಮಾಡಿದ್ದಾರೆ. "ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ ಜೈಲಿನಲ್ಲಿ ಮೊಬೈಲ್ ಬಳಕೆ ಇಲ್ಲ ಅದರೂ ಜೈಲಿನ ಒಳಗೆ ವೆಬ್ ಕ್ಯಾಮರಾದಲ್ಲಿ ತೆಗೆದ ಫೋಟೊ ಹೊರಗೆ ಮಾಧ್ಯಮಗಳಿಗೆ ಬರುತ್ತೆ ಅಂದರೆ? ಅದು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ಫೋಟೊ ಹೊರಗೆ ಬಂದಿದೆ ಅಂದರೆ ಈ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವುದು ಮನದಟ್ಟಾಗುತ್ತಿದೆ. ಮಾನ್ಯ ಡಿಜಿಪಿ ಎಂ. ಎ ಸಲೀಂ ಅವರೆ ಕೂಡಲೇ ಈ ಫೋಟೊ ಹೊರಗೆ ಹಾಕಿದ ನಿಮ್ಮ ಇಲಾಖೆಯವರ ವಿರುದ್ಧ ಕ್ರಮ ಜರುಗಿಸಿ" ಎಂದು ಬರೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದ 7 ಮಂದಿ ಆರೋಪಿಗಳು ಮತ್ತೆ ಜೈಲು ವಾಸ ಅನುಭವಿಸುವಂತಾಗಿದೆ. ಆರೋಪಿಗಳನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಆರೋಪಿಗಳು ದಿನದ 24 ಗಂಟೆ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುತ್ತಿದ್ದಾರೆ. ಕಾರಿಡಾರ್ನಲ್ಲಿ ವಾಕ್ ಮಾಡಲು ಕೂಡ ಅವಕಾಶ ಸಿಗುತ್ತಿಲ್ಲ. ಜೈಲು ಸಿಬ್ಬಂದಿ ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ದರ್ಶನ್ ಇರುವ ಜೈಲು ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಪುಸ್ತಕ ಓದಲು ಮಾತ್ರ ಅವಕಾಶ ಇದೆ. ಜೈಲು ಸಿಬ್ಬಂದಿ ಕೂಡ ಆರೋಪಿಗಳ ಜೊತೆ ಮಾತನಾಡಲು ಅವಕಾಶವಿಲ್ಲ. ಕಳೆದ ವರ್ಷ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿದ್ದರು. ಫೋಟೊವೊಂದು ವೈರಲ್ ಆಗಿ ಭಾರೀ ವಿವಾದವಾಗಿತ್ತು. ಬಳಿಕ ಎಲ್ಲಾ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಿದ್ದರು. ದರ್ಶನ್ ಬಳ್ಳಾರಿ ಜೈಲಿಗೆ ಹೋಗಬೇಕಾಯಿತು.
ಇನ್ನು ಜೈಲಿನ ಒಳಗೆ ಇರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮುಖಾಂತರ ಅಭಿಮಾನಿಗಳಿಗೆ ಒಂದು ಸಂದೇಶ ರವಾನಿಸಿದ್ದಾರೆ. 'ಡೆವಿಲ್' ಸಿನಿಮಾ ವಿಚಾರವಾಗಿ ದರ್ಶನ್ ಸೂಚನೆಯನ್ನು ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೋಟ್ಯಂತರ ರೂಪಾಯಿ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ 'ಡೆವಿಲ್' ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ" ಎಂದಿದ್ದಾರೆ.


Click it and Unblock the Notifications











