'ಧರಣಿ' ಸಾಂಗ್ ಝಲಕ್ ಹೇಗಿದೆ? ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರೆಟಿಗಳಲ್ಲಿ ಮನವಿ ಮಾಡಿದ್ದೇನು?
ಬಹುನಿರೀಕ್ಷಿತ 'ಕ್ರಾಂತಿ' ಚಿತ್ರದ ಗಾನಬಜಾನಾ ಶುರುವಾಗುವ ಸಮಯ ಹತ್ತಿರ ಬರ್ತಿದೆ. ಇದೇ ಶನಿವಾರ ಮೈಸೂರಿನಲ್ಲಿ ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಲೋಕಾರ್ಪಣೆ ಮಾಡ್ತಿದೆ. ನಿಮ್ಮ 'ಕ್ರಾಂತಿ' ಹಾಡನ್ನು ನೀವೇ ಬಿಡುಗಡೆ ಮಾಡಿ ಎಂದು ತಮ್ಮ ಸೆಲೆಬ್ರೆಟಿ(ಅಭಿಮಾನಿಗಳಿಗೆ)ಗಳಿಗೆ ನಟ ದರ್ಶನ್ ಕರೆ ಕೊಟ್ಟಿದ್ದಾರೆ.
ವಿ. ಹರಿಕೃಷ್ಣ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಮಾಡಿದ್ದಾರೆ. ದರ್ಶನ್- ಹರಿ ಕಾಂಬಿನೇಷನ್ ಆಲ್ಬಮ್ಗಳೆಲ್ಲಾ ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ 'ಕ್ರಾಂತಿ' ಸಾಂಗ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರತಂಡ ಸಿನಿಮಾ ಪ್ರಚಾರಕ್ಕೆ ಚಾಲನೆ ನೀಡಿದೆ. ಇದೀಗ ಫಸ್ಟ್ ಲಿರಿಕಲ್ ಸಾಂಗ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ 'ಕ್ರಾಂತಿ' ಚಿತ್ರದ ಹಾಡುಗಳನ್ನು ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
'ಕ್ರಾಂತಿ' ಚಿತ್ರದಲ್ಲಿ ಕನ್ನಡ ಸರ್ಕಾರಿ ಶಾಲೆಗಳ ಕುರಿತು ಚರ್ಚಿಸಲಾಗಿದೆ. ಸೂಪರ್ ಹಿಟ್ 'ಯಜಮಾನ' ಕಾಂಬಿನೇಷನ್ನಲ್ಲೇ ಈ ಸಿನಿಮಾ ಕೂಡ ಮೂಡಿ ಬರ್ತಿದೆ. ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದರೆ ಕ್ರೇಜಿಸ್ಟಾರ್ ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಸುಮಲತಾ ಅಂಬರೀಶ್ರಂತಹ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ.

'ಧರಣಿ' ಸಾಂಗ್ ಪ್ರೋಮೊ ರಿಲೀಸ್
'ಕ್ರಾಂತಿ' ಅಪ್ಪಟ ಕನ್ನಡ ಮಣ್ಣಿನ ಕಥೆಯ ಸಿನಿಮಾ. "ಧರಣಿ ಮಂಡಲ ಮಧ್ಯದಲಿ ಮೆರೆವ ಕನ್ನಡ ದೇಶದಲ್ಲಿ" ಎಂದು ಶುರುವಾಗುವ ಮೊದಲ ಸಾಂಗ್ ಪ್ರೋಮೊ ಬಿಡುಗಡೆಯಾಗಿದೆ. ಜನಪ್ರಿಯ ಗೋವಿನ ಹಾಡನ್ನು ನೆನಪಿಸುವ ಸಾಲುಗಳೊಂದಿಗೆ 'ಧರಣಿ' ಸಾಂಗ್ ಶುರುವಾಗುತ್ತದೆ. ಚಿತ್ರದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಈ ಹಾಡು ಮೂಡಿ ಬರುವಂತೆ ಕಾಣುತ್ತಿದೆ. ಸಂತೋಷ್ ಕೊರಿಯೋಗ್ರಫಿಯಲ್ಲಿ ಕ್ಯಾಮರಾಮನ್ ಕರುಣಾಕರ್ ಸಾಂಗ್ ಸೆರೆ ಹಿಡಿದಿದ್ದಾರೆ.

ದರ್ಶನ್ ಸ್ಪೆಷಲ್ ಅನೌನ್ಸ್ಮೆಂಟ್
ಇನ್ನು ಸಾಂಗ್ ಪ್ರೋಮೊ ಜೊತೆಗೆ ದರ್ಶನ್ ತಮ್ಮ ಸೆಲೆಬ್ರೆಟಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಸಾಂಗ್ ರಿಲೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. "ಕರ್ನಾಟಕದ ಎಲ್ಲಾ ಚಿತ್ರಪ್ರೇಮಿಗಳಿಗೆ ಹಾಗೂ ನನ್ನ ಸೆಲೆಬ್ರೆಟಿಗಳಿಗೆ ಸಿಹಿಸುದ್ದಿ. ನಿಮ್ಮ 'ಕ್ರಾಂತಿ', ನಮ್ಮದಲ್ಲ 'ನಿಮ್ಮ ಕ್ರಾಂತಿ' ಚಿತ್ರದ ಮೊದಲ ಹಾಡನ್ನು ಮೈಸೂರಿನ ಇಣಕಲ್ ರಸ್ತೆಯಲ್ಲಿರುವ ವಿಜಯಾ ಥಿಯೇಟರ್ ಮುಂದೆ ಬಿಡುಗಡೆ ಮಾಡುತ್ತಿದ್ದೇವೆ. ಅದು ಕೂಡ ನಿಮ್ಮ ಸಮ್ಮುಖದಲ್ಲಿ. ನೀವೆಲ್ಲಾ ಅಲ್ಲಿ ಬಂದು ನಿಮ್ಮ ಸಿನಿಮಾ ಬಗ್ಗೆ ನಿಮಗೇನು ಎನ್ನಿಸುತ್ತದೆ ಹೇಳಿ" ಎಂದಿದ್ದಾರೆ.

ನಾನೊಬ್ಬ ನಿರೂಪಕನಾಗಿ ಬರ್ತೀನಿ
"10ನೇ ತಾರೀಖು ನಾವು ಮೈಸೂರಿಗೆ ಬರ್ತೀವಿ. ನಮ್ಮ ಇಡೀ ಚಿತ್ರತಂಡ ಜೊತೆಗೆ ಇರುತ್ತದೆ. ಆದರೆ ಒಂದು ವಿಶೇಷ ಏನಂದರೆ ನಾನು ಅಂದು ನಾಯಕ ನಟನಾಗಿ ನಿಮ್ಮ ಮುಂದೆ ಬರುವುದಿಲ್ಲ. ಒಬ್ಬ ನಿರೂಪಕನಾಗಿ ಬರ್ತೀನಿ. ನೀವು ಬನ್ನಿ ನಿಮ್ಮ 'ಕ್ರಾಂತಿ' ಚಿತ್ರದ ಮೊದಲ ಹಾಡನ್ನು ನೀವೇ ಬಿಡುಗಡೆ ಮಾಡಿ" ಎಂದು ದರ್ಶನ್ ಮನವಿ ಮಾಡಿದ್ದಾರೆ.

ಜನವರಿ 26ಕ್ಕೆ 'ಕ್ರಾಂತಿ' ರಿಲೀಸ್
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ರಾಜ್ಯೋತ್ಸವ ಸಂಭ್ರಮದಲ್ಲೇ 'ಕ್ರಾಂತಿ' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಈ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಜನವರಿ 26ಕ್ಕೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಮೇಲೆ ಅಕ್ಷರ 'ಕ್ರಾಂತಿ' ಶುರುವಾಗಲಿದೆ. ಅದಕ್ಕೂ ಮುನ್ನ ಸಿನಿಮಾ ಸಾಂಗ್ಸ್, ಟ್ರೈಲರ್ ಬಿಡುಗಡೆಯಾಗಲಿದೆ.


Click it and Unblock the Notifications











