ದರ್ಶನ್ ಸರ್ ಬೇರೆಯವರನ್ನು ಬಳಸಿಕೊಂಡು 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡೋಣ ಅಂದ್ರು ಸ್ಕ್ರಿಪ್ಟ್ ಕೊಡ್ತೀನಿ- ತರುಣ್
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ನಲ್ಲಿ ಜಾಮೀನು ಪಡೆದು ಬಂದು ಸಹಜ ಜೀವನಕ್ಕೆ ಮರಳಿದ್ದ ದರ್ಶನ್ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿತ್ತು. 'ಡೆವಿಲ್' ಸಿನಿಮಾ ಶೂಟಿಂಗ್ ಮುಗಿದ ಬಳಿಕ ಮತ್ತೆ ಜೈಲು ಸೇರುವಂತಾಗಿತ್ತು.
ದರ್ಶನ್ ನಟಿಸಬೇಕಿದ್ದ ಸಿನಿಮಾಗಳು ತಡವಾಗುತ್ತಿವೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿದ್ದರು. ಮಾತುಕತೆ ನಡೆದಿತ್ತು. ಅದೆಲ್ಲವೂ ನಿಂತು ಹೋಗಿದೆ. ಶೀಘ್ರದಲ್ಲೇ ದರ್ಶನ್ ಜಾಮೀನು ಪಡೆದು ಹೊರ ಬರುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು, ಆಪ್ತರು ದರ್ಶನ್ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಜೋಗಿ ಪ್ರೇಮ್, ತರುಣ್ ಸುಧೀರ್ ಆದಷ್ಟು ಬೇಗ ದರ್ಶನ್ ಜೊತೆ ಸಿನಿಮಾ ಮಾಡುವ ಕನಸು ಕಾಣುತ್ತಿದ್ದಾರೆ.

ಆದಷ್ಟು ಬೇಗ ದರ್ಶನ್ ಸಂಕಷ್ಟದಿಂದ ಪಾರಾಗಿ ಬರಬೇಕು. ಮೊದಲಿನಿಂದ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಅವರ ಆಪ್ತರ ಆಸೆಯಾಗಿದೆ. ಬಹಳ ಹಿಂದೆಯೇ ತರುಣ್ ಸುಧೀರ್ ನಿರ್ದೇಶನದಲ್ಲಿ ಸಿಂಧೂರ ಲಕ್ಷ್ಮಣ ಜೀವನಾಧರಿತ ಸಿನಿಮಾ ಘೋಷಣೆ ಆಗಿತ್ತು. ದರ್ಶನ್ ಸೂಚನೆಯಂತೆ ತರುಣ್ ಚಿತ್ರಕಥೆ ಸಿದ್ಧಪಡಿಸಿದ್ದರು. ಉಮಾಪತಿ ಶ್ರೀನಿವಾಸ್ ಸಿನಿಮಾ ನಿರ್ಮಾಣ ಮಾಡಬೇಕಿತ್ತು. ದರ್ಶನ್ ಹಾಗೂ ಉಮಾಪತಿ ಭಿನ್ನಾಭಿಪ್ರಾಯಗಳಿಂದ ದೂರಾದ ಬಳಿಕ 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ಮೀಡಿಯಾ ಹೌಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನಲಾಯಿತು.
ದರ್ಶನ್ ಕಾಂಬಿನೇಷನ್ನಲ್ಲಿ 'ಯಜಮಾನ' ಹಾಗೂ 'ಕ್ರಾಂತಿ' ಬಳಿಕ ಶೈಲಜಾ ನಾಗ್ ಸಿಂಧೂರ ಲಕ್ಷ್ಮಣ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಅಷ್ಟರಲ್ಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗುವಂತಾಯಿತು. ಇದೀಗ ತರುಣ್ ಸುಧೀರ್ ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಿಟ್ಟರೆ ಬೇರೆ ಯಾರಿಗೂ ಆ ಸಿನಿಮಾ ಮಾಡಲ್ಲ ಎಂದಿದ್ದಾರೆ.

ತರುಣ್ ಸುಧೀರ್ ನಿರ್ಮಾಣದ 'ರಾಕ್ಷಸ' ಎಂಬ ವೆಬ್ ಸೀರಿಸ್ ಬಿಡುಗಡೆ ಆಗ್ತಿದೆ. ಇದೇ ಸಮಯದಲ್ಲಿ ಬಾಸ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಹೇಳಿದ್ದಾರೆ. ಈ ವೇಳೆ ಸಿಂಧೂರ ಲಕ್ಷ್ಮಣ ಬಯೋಪಿಕ್ ಸಿನಿಮಾ ವಿಚಾರವೂ ಪ್ರಸ್ತಾಪವಾಗಿದೆ. ದರ್ಶನ್ ಅವರು ಚಿತ್ರಕಥೆ ಮಾಡಲು ಹೇಳಿದ್ರು, ಹಾಗಾಗಿ ಅವರಿಗೆ ಮಾತ್ರವೇ ಈ ಸಿನಿಮಾ ಮಾಡ್ತೀನಿ, ಬೇರೆ ಯಾರಿಗೂ ಮಾಡಲ್ಲ ಎಂದಿದ್ದಾರೆ.
ಸಿಂಧೂರ ಲಕ್ಷ್ಮಣ ಯಾವಾಗ ಎನ್ನುವ ಪ್ರಶ್ನೆಗೆ "ಈಗಿನ ಸನ್ನಿವೇಶದಲ್ಲಿ ಯಾವಾಗ ಅಂತ ಹೇಳುವುದು ಕಷ್ಟ. ದರ್ಶನ್ ಸರ್ ಅಂತ ಮಾಡಿರುವ ಸ್ಕ್ರಿಪ್ಟ್. ಅವ್ರು ಯಾವಾಗ ಮಾಡೋಣ ಎಂದು ಹೇಳ್ತಾರೋ ಆಗ ಸಿನಿಮಾ ಆಗುತ್ತೆ. ನನಗೆ ಅವಕಾಶ ಬಂದರೆ ಶೇ. 100ರಷ್ಟು ನ್ಯಾಯ ಒದಗಿಸ್ತೀನಿ. ದರ್ಶನ್ ಸರ್ ಬೇರೆಯವರನ್ನು ಬಳಸಿಕೊಂಡು ಸಿನಿಮಾ ಮಾಡೋಣ ಅಂದ್ರು ಸ್ಕ್ರಿಪ್ಟ್ ಕೊಡ್ತೀನಿ. ಆದರೆ ದರ್ಶನ್ ಸರ್ ಮಾಡಿದ್ರೆ, ಚೆನ್ನಾಗಿರುತ್ತೆ. ಅವ್ರೇ ನಿರ್ಧಾರ ತಗೋಬೇಕು" ಎಂದಿದ್ದಾರೆ.
ದರ್ಶನ್ ಸರ್ ನಟಿಸಿದ್ರೆ ಮಾತ್ರ ನಾನು ಸಿಂಧೂರ ಲಕ್ಷ್ಮಣ ಸಿನಿಮಾ ಮಾಡ್ತೀನಿ. ಬೇರೆಯವರಿಗೆ ನಾನು ಖಂಡಿತ ಮಾಡಲ್ಲ ಎಂದು ತರುಣ್ ಹೇಳಿದ್ದಾರೆ. "ಐತಿಹಾಸಿಕ ಕಥೆ ಆಗಿರುವುದರಿಂದ ಯಾರು ಬೇಕಾದರೂ ಸಿನಿಮಾ ಮಾಡಬಹುದು. ನಾನು ಅವರಿಗಂತ ಚಿತ್ರಕಥೆ ಮಾಡಿದ್ದು, ಹಾಗಾಗಿ ಅವ್ರು ನಟಿಸಿದ್ರೆ ನಿರ್ದೇಶನ ಮಾಡ್ತೀನಿ. ಇಲ್ಲ ಅಂದ್ರೆ ಮಾಡಲ್ಲ. ಅವ್ರು ಹೇಳಿದ್ದಕ್ಕೆ ಕಥೆ ಮಾಡಿದ್ದು ಹಾಗಾಗಿ ಅವರಿಗೆ ಸ್ಕ್ರಿಪ್ಟ್ ಮೀಸಲು..ಸಿಂಧೂರ ಲಕ್ಷ್ಮಣ ಅಂದಾಕ್ಷಣ ದರ್ಶನ್ ಸರ್ ನೆನಪಾಗ್ತಾರೆ. ಆತ ಅಜಾನುಬಾಹು. ಹಾಗಾಗಿ ದರ್ಶನ್ಗೆ ಸರ್ಗೆ ಆ ಪಾತ್ರ ಸೂಕ್ತ" ಎಂದು ತರುಣ್ ವಿವರಿಸಿದ್ದಾರೆ.
'ಕಾಟೇರ' ಬಳಿಕ ತರುಣ್ ನಿರ್ದೇಶನದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಸಿದ್ಧತೆ ನಡೀತಿದೆ. ಎಲ್ಲದ್ದಕ್ಕೂ ಸ್ಕ್ರಿಪ್ಟ್ ಮುಖ್ಯ.. 3 ಸಿನಿಮಾ ಬಂದಿದೆ. ಮುಂದಿನ ಸಿನಿಮಾ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು. ಅದೇ ಪ್ರಯತ್ನದಲ್ಲಿದ್ದೇನೆ ಎಂದಿದ್ದಾರೆ.


Click it and Unblock the Notifications











