ಬಿಜಿಎಸ್ ಉತ್ಸವ -2025 ವೇದಿಕೆಯಲ್ಲಿ ದರ್ಶನ್ ಪುತ್ರ ವಿನೀಶ್ ಜಬರ್ದಸ್ತ್ ಡ್ಯಾನ್ಸ್, ವೀಡಿಯೋ ವೈರಲ್
ಪುತ್ರನನ್ನು ಚಿತ್ರರಂಗಕ್ಕೆ ಕರೆತರುವುದಾಗಿ ದರ್ಶನ್ ಹೇಳುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಈಗಾಗಲೇ ವಿನೀಶ್ಗೆ ಬೆಂಬಲ ಸೂಚಿಸುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಜೈಕಾರ ಹಾಕುತ್ತಾರೆ. ಕುದುರೆ ಸವಾರಿ ಕೂಡ ವಿನೀಶ್ ಕಲಿಯುತ್ತಿದ್ದಾನೆ. ಇದೆಲ್ಲದರ ನಡುವೆ ಕಾಲೇಜ್ ಫೆಸ್ಟ್ನಲ್ಲಿ ಆತ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗ್ತಿದೆ.
ಎಸ್ಎಸ್ಎಲ್ಸಿ ಮುಗಿಸಿ ವಿನೀಶ್ ಈಗ ಫಸ್ಟ್ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇತ್ತೀಚೆಗೆ ನಟ ಶಿವರಾಜ್ಕುಮಾರ್ ಭೇಟಿ ವೇಳೆ ಈ ಬಗ್ಗೆ ಮಾತನಾಡಿದ್ದ. ಆ ವೀಡಿಯೋ ಸಹ ವೈರಲ್ ಆಗಿತ್ತು. ಇದೀಗ ತಮ್ಮ ಕಾಲೇಜಿನಲ್ಲಿ ವಿನೀಶ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವುದು ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತೇಲಿ ಬಿಡುತ್ತಿದ್ದಾರೆ.

ಬಿಜಿಎಸ್ ಉತ್ಸವ 2025 ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ದರ್ಶನ್ ಕೂಡ ಭಾಗಿ ಆಗಿದ್ದರು. ಪುತ್ರನ ಡ್ಯಾನ್ಸ್ ಪರ್ಫಾರ್ಮನ್ಸ್ ಕಣ್ತುಂಬಿಕೊಂಡಿದ್ದಾರೆ. ಪ್ರತಿವರ್ಷ ಬಿಜಿಎಸ್ ಉತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಕಾಶನಾಥ ಸ್ವಾಮೀಜಿ ಜೊತೆ ಕೂತು ವಿಜಯಲಕ್ಷ್ಮಿ ಮಗನ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ.
ದರ್ಶನ್ ಪ್ರಾಣಿ, ಪಕ್ಷಿ ಕಾಳಜಿ ಗೊತ್ತೇಯಿದೆ. ಪುತ್ರ ವಿನೀಶ್ ಕೂಡ ಅದರಲ್ಲಿ ಗಮನ ಹರಿಸಿದ್ದಾನೆ. ಪ್ರಕೃತಿ ವಿಕೋಪ, ಪ್ರಾಣಿ, ಪಕ್ಷಿ, ಪರಿಸರ ಸಂರಕ್ಷಣೆ ಥೀಮ್ನಲ್ಲಿ ಈ ಸ್ಪೆಷಲ್ ಡ್ಯಾನ್ಸ್ ಪರ್ಫಾರ್ಮನ್ಸ್ ಪ್ಲ್ಯಾನ್ ಮಾಡಿದ್ದರು. '777 ಚಾರ್ಲಿ' ಹಾಗೂ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಗೀತೆಗಳನ್ನು ಸೇರಿಸಿ ರೀಮಿಕ್ಸ್ ಮಾಡಿ ಥೀಮ್ ಸಾಂಗ್ ಸಿದ್ಧಪಡಿಸಲಾಗಿತ್ತು.
ಬಿಜಿಎಸ್ ಕಾಲೇಜಿನಲ್ಲಿ ವಿನೀಶ್ ಓದುತ್ತಿದ್ದಾನೆ. ಕಲರ್ಫುಲ್ ಕಾಸ್ಟ್ಯೂಮ್ನಲ್ಲಿ ವೇದಿಕೆ ಏರಿ ಹೆಜ್ಜೆ ಹಾಕಿರುವುದನ್ನು ನೋಡಬಹುದು. ಒಂದಷ್ಟು ಡ್ಯಾನ್ಸರ್ಸ್ ಅವನಿಗೆ ಸಾಥ್ ಕೊಟ್ಟಿರುವುದನ್ನು ನೋಡಬಹುದು. ಇತ್ತೀಚೆಗೆ ಅದೇ ಕಾಲೇಜಿನ ಆವರಣದಲ್ಲಿ ಶಿವರಾಜ್ಕುಮಾರ್ ನಟನೆಯ 'ಡ್ಯಾಡ್' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ವಿನೀಶ್ ಸೆಟ್ಗೆ ಭೇಟಿ ನೀಡಿ ಶಿವಣ್ಣನನ್ನು ಮಾತನಾಡಿಸಿದ್ದ. ಆತನ ಕೈ ಕುಲುಕಿ ಬೆನ್ನುತಟ್ಟಿ ಶಿವಣ್ಣ ಕುಶಲೋಪರಿ ವಿಚಾರಿಸಿದ್ದರು.
ಈಗಾಗಲೇ 'ಐರಾವತ' ಹಾಗೂ 'ಯಜಮಾನ' ಚಿತ್ರಗಳಲ್ಲಿ ಅಪ್ಪನ ಜೊತೆ ಸಣ್ಣ ಝಲಕ್ನಲ್ಲಿ ವಿನೀಶ್ ಕಾಣಿಸಿಕೊಂಡಿದ್ದು ಗೊತ್ತೇಯಿದೆ. 'ಯಜಮಾನ' ಸಿನಿಮಾ ಬಿಡುಗಡೆ ವೇಳೆ ಅಭಿಮಾನಿಗಳು ನರ್ತಕಿ ಚಿತ್ರಮಂದಿರದ ಮುಂದೆ 25 ಅಡಿ ಕಟೌಟ್ ಕೂಡ ಹಾಕಿ ಸಂಭ್ರಮಿಸಿದ್ದರು. ಸದ್ಯ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದನ್ನೆಲ್ಲಾ ಮರೆತು ತಾಯಿ ಜೊತೆ ವಿನೀಶ್ ಬೆಂಬಲವಾಗಿ ನಿಂತಿದ್ದಾನೆ. ಆಟ-ಪಾಠದ ಕಡೆ ಮುಖಮಾಡಿದ್ದಾರೆ.
'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 11ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದ ಚಿತ್ರೀಕರಣದ ವೇಳೆ ಉದಯ್ಪುರ್ ಹಾಗೂ ಬ್ಯಾಂಕಾಕ್ಗೆ ಅಪ್ಪ- ಅಮ್ಮನ ಜೊತೆ ವಿನೀಶ್ ಕೂಡ ಹೋಗಿದ್ದ. ಫಾರ್ಮ್ಹೌಸ್ನಲ್ಲಿ ಕುದುರೆ ಸವಾರಿ ಕಲಿಯುತ್ತಿರುವ ವಿನೀಶ್ ದುಬೈ ಪ್ರವಾಸದ ವೇಳೆ ಕುದುರೆ ಏರಿ ಸವಾರಿ ಮಾಡಿದ್ದ ವೀಡಿಯೋ ಸಹ ಸದ್ದು ಮಾಡಿತ್ತು. ಎರಡ್ಮೂರು ಬಾರಿ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ದರ್ಶನ್ ಮಾತನಾಡಿದ್ದರು. ಸದ್ಯ ಅವನು ಓದುತ್ತಿದ್ದಾನೆ. ಮುಂದೆ ನೋಡೋಣ. ಮೊದಲು ಕ್ಯಾಮರಾ ಹಿಂದೆ ಕೆಲಸ ಕಲಿಯಬೇಕು, ಆಮೇಲೆ ನಟನೆ ಎಲ್ಲಾ ಎಂದಿದ್ದರು.
ದರ್ಶನ್ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ 'ಡೆವಿಲ್' ಚಿತ್ರತಂಡದ ಜೊತೆ ನಿಂತಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಪ್ರಕಾಶ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.


Click it and Unblock the Notifications











