ವೃತ್ತಿ ಬದುಕು ಅಂತ್ಯ, ಅಮಾನವೀಯ ವರ್ತನೆ, ಸಹ ಕೈದಿಗಳಿಂದ ಬೆದರಿಕೆ ; ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡ ದರ್ಶನ್
ಹೆಚ್ಚೇನು ಇಲ್ಲ. ಮೂರು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು ಇದ್ದರು.
ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಮತ್ತೊಮ್ಮೆ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ. 8 ತಿಂಗಳಾಯ್ತು. ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ಜೈಲು ಪಾಲಾಗಿ 8 ತಿಂಗಳಾಯ್ತು. ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಆ ಭಾಗ್ಯ ಯಾವತ್ತು ಸಿಗುತ್ತೆ..? ಎನ್ನುವುದು ಸದ್ಯ ಗೊತ್ತಿಲ್ಲವಾದರು ಸದ್ಯ ದರ್ಶನ್ ಹೊರ ಬರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಜಾಮೀನು ಕೊಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ಕೆಲ ಆಘಾತಕಾರಿ ವಿಚಾರಗಳನ್ನು ಕೂಡ ದರ್ಶನ್ ತಮ್ಮ ಈ ಜಾಮೀನು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು TV9 ಕನ್ನಡ, ಪಬ್ಲಿಕ್ ಟಿವಿ, ನ್ಯೂಸ್ 18 ಸೇರಿ ಕನ್ನಡದ ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತು ವರದಿ ಮಾಡಿರುವ TV9 ಕನ್ನಡ, ಪಬ್ಲಿಕ್ ಟಿವಿ, ನ್ಯೂಸ್ 18 ಕನ್ನಡ ಮತ್ತು ಇನ್ನುಳಿದ ಮಾಧ್ಯಮಗಳು ನಿಯಮಗಳನ್ನು ಮೀರಿ ನನ್ನನ್ನು ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ಧಾರೆ ಎಂದು ವರದಿಯನ್ನು ಮಾಡಿವೆ.
ಕ್ವಾರಂಟೈನ್ ಸೆಲ್ನಲ್ಲಿರುವ ಹಿನ್ನೆಲೆ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಹಾನಿಯಾಗುತ್ತಿದೆ ಎಂದು ದರ್ಶನ್ ಹೇಳಿದ್ದು ಇದಲ್ಲದೇ ಸಹಕೈದಿಗಳಿಂದ ನಿರಂತರ ಬೆದರಿಕೆ, ನಿಂದನೆ ಮತ್ತು ಮೂದಲಿಕೆಯಂತಹ ಪ್ರಚೋದನೆಗಳು ಎದುರಾಗುತ್ತಿವೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಮುಂದುವರೆದು ಮಾಧ್ಯಮಗಳಲ್ಲಿ ನನ್ನ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರದಿಂದ, ಜೈಲಿನ ಒಳಗಿನ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ ಎಂದು ತಮ್ಮ ನೋವನ್ನು ಅರ್ಜಿಯ ಮೂಲಕ ದರ್ಶನ್ ಹಂಚಿಕೊಂಡಿದ್ದು ಇತರ ಕೈದಿಗಳಿಗೆ ಹೋಲಿಸಿದರೆ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಕುಟುಂಬಸ್ಥರ ಭೇಟಿಗೆ ಸಮಯಾವಕಾಶ ನೀಡುತ್ತಿಲ್ಲ, ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಹೊರಗಡೆಯಿಂದ ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ಕೂಡ ಅರ್ಜಿಯಲ್ಲಿ ವ್ಯಕ್ತಪಡಿಸಿರುವ ದರ್ಶನ್,ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಕನ್ನಡದ ದೃಶ್ಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಜೈಲು ಸಹವಾಸ ಮತ್ತು ಈ ಪ್ರಕರಣದಿಂದ ತಮ್ಮ ವೃತ್ತಿ ಬದುಕು ಅಂತ್ಯವಾಗುವ ಭೀತಿ ಕಾಡುತ್ತಿದೆ ಎಂದು ಕೂಡ ತಮ್ಮ ಆತಂಕ ವ್ಯಕ್ತಪಡಿಸಿರುವ ದರ್ಶನ, ವರ್ಷಕ್ಕೆ ಎರಡು ಮೂರು ಸಿನಿಮಾಗಳನ್ನು ನಾನು ಮಾಡುತ್ತಿದ್ದೆ, ಜಾಮೀನು ರದ್ದಾಗುವ ಸಮಯದಲ್ಲಿಯೂ ಕೂಡ ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆ ಮತ್ತು ಮೀಡಿಯಾ ಹೌಸ್ ಸ್ಟೂಡಿಯೋಸ್ನಂತಹ ದೊಡ್ಡ ಸಂಸ್ಥೆಗಳ ಚಿತ್ರಗಳನ್ನು ನಾನು ಒಪ್ಪಿಕೊಂಡಿದ್ದೆ ಎಂದು ಹೇಳಿದ್ದಾರೆ. ನಿರ್ಮಾಪಕರು ನನ್ನನ್ನು ನಂಬಿ ಈಗಾಗಲೇ 6 ಕೋಟಿ ರೂಪಾಯಿಯನ್ನು ಹೂಡಿದ್ದಾರೆ, ಆದರೆ ಈಗ ನನ್ನ ಈ ಸುದೀರ್ಘ ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ದರ್ಶನ್ ತೋಡಿಕೊಂಡಿದ್ದಾರೆ.
ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿರುವಂತೆ ಪ್ರಕರಣದ ತನಿಖೆ ಮತ್ತು ಸಾಕ್ಷ್ಯ ವಿಚಾರಣೆಯ ವಿಳಂಬದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ದರ್ಶನ್, ದೋಷಾರೋಪ ಪಟ್ಟಿಯಲ್ಲಿ 262 ಸಾಕ್ಷಿಗಳ ವಿಚಾರಣೆ ನಡೆಸಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಕಳೆದ 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ವಾದ ಮಂಡಿಸಿದ್ದಾರೆ. ಸದ್ಯಕ್ಕೆ ಈ ಪ್ರಕ್ರಿಯೆ ಮುಗಿಯುವ ಯಾವ ಲಕ್ಷಣ ಕಾಣದ ಹಿನ್ನೆಲೆ ಜಾಮೀನು ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ಧಾರೆ.
ದರ್ಶನ್ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ನಾಳೆ (ಮೇ 4) ಸೋಮವಾರ ನಡೆಯಲಿದೆ. ಸುಪ್ರೀಂ ಅಂಗಳದಲ್ಲಿ ನಡೆಯಲಿರುವ ಈ ವಿಚಾರಣೆ ಈಗ ಕುತೂಹಲ ಮೂಡಿಸಿದೆ.


Click it and Unblock the Notifications