Darshan: "ಕೋಟಿ ಕೊಟ್ರೂ ಬರಲ್ಲ .. ಸ್ನೇಹಕ್ಕೆ ರೆಸ್ಪೆಕ್ಟ್".. ಶಾಸಕ ಸತೀಶ್ ರೆಡ್ಡಿ ಬಗ್ಗೆ ದರ್ಶನ್ ಹೇಳಿದ್ದೇನು?
ದರ್ಶನ್ ಹಾಗೂ ಅವರ ಸ್ನೇಹಿತರ ವರ್ಗವೇ ಬೇರೆ. ಸಿನಿಮಾದ ಸಹೋದ್ಯೋಗಿಗಳ ಜೊತೆ ಎಷ್ಟು ಆತ್ಮೀಯತೆ ಇರುತ್ತೋ.. ಅದಕ್ಕಿಂತ ಹೆಚ್ಚು ರಾಜಕೀಯ ಮುಖಂಡರೊಂದಿಗೆ ಒಡನಾಡವಿದೆ. ಇತ್ತೀಚೆಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಜೊತೆ ದರ್ಶನ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕ್ಷೇತ್ರದ ಜನರಿಗಾಗಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ದರ್ಶನ್ ಹಾಗೂ ಸುಮಲತಾ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ದರ್ಶನ್ ತಮ್ಮ ಹಾಗೂ ಸತೀಶ್ ರೆಡ್ಡಿ ಜೊತೆಗಿನ ಒಡನಾಡದ ಬಗ್ಗೆ ಮಾತಾಡಿದ್ದಾರೆ.

ದರ್ಶನ್ ಏನೇ ಮಾತಾಡಿದ್ರೂ ಅದ್ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತೆ. ಯಾರಿಗೆ ತಟ್ಟಬೇಕೋ ಅವರಿಗೆ ತಟ್ಟುತ್ತೆ. ಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ದರ್ಶನ್ ಪದೇ ಪದೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಜೊತೆ ಕಾಣಿಸಿಕೊಳ್ಳುತ್ತಿರುವುದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ದುಡ್ಡಿಗಲ್ಲ.. ಸ್ನೇಹಕ್ಕೆ ಮರ್ಯಾದೆ"-ದರ್ಶನ್
ನಿನ್ನೆ(ಮಾರ್ಚ್ 19) ಬೊಮ್ಮನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್ ಪ್ರೀತಿ, ಸ್ನೇಹದ ಬಗ್ಗೆ ಮಾತಾಡಿದ್ದಾರೆ. ಸತೀಶ್ ಜೊತೆ ಯಾಕೆ ಪದೇ ಪದೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಇವತ್ತು ಇಲ್ಲಿಗೆ ಏನಕ್ಕೆ ಬಂದಿದ್ದೀನಿ ಅಂದ್ರೆ, ಮೊದಲನೆಯದಾಗಿ ಹೇಳುತ್ತೇನೆ. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿಗೆ ನಾನು ಬರುತ್ತೇನೆ. ಯಾವುದೇ ಅಧಿಕಾರ ಆಗಲಿ, ಎಷ್ಟೇ ದೊಡ್ಡ ವ್ಯಕ್ತಿ ಆದರೂ, ಕೋಟಿ ಕೊಡುತ್ತೀನಿ ಅಂದರೂ, ನೀನು ಅಲ್ಲೇ ಇರಪ್ಪ. ನಾನು ಇಲ್ಲೇ ಇರುತ್ತೀನಿ. ಯಾಕಂದ್ರೆ, ನನಗೂ ನಿನಗೂ ಆಗಿಬರಲ್ಲ ಅಂತ ಹೇಳುತ್ತೀನಿ." ಎಂದು ಹೇಳಿದ್ದಾರೆ.
"ದುಡ್ಡೇನು ಇವತ್ತಲ್ಲ. ನಾಳೆನೂ ದುಡಿದುಕೊಳ್ಳಬಹುದು. ಆದರೆ, ಸ್ನೇಹಕ್ಕೆ ತುಂಬಾನೇ ಮರ್ಯಾದೆ ಕೊಡುತ್ತೇನೆ. ಅಂದ್ಕೊಳ್ಳಬಹುದು ಯಾವಾಗಲೂ ದರ್ಶನ್ ಸತೀಶ್ ಸರ್ ಜೊತೆನೇ ನೋಡೋದು ಅಂತ. ನಿಮಗೆ ನೆನಪಿರಬಹುದು. 10 ವರ್ಷದ ಹಿಂದೆ, ಅವರ 45 ವರ್ಷದ ಹುಟ್ಟಿದ ಹಬ್ಬದ ದಿನ, ಅಂಬರೀಶ್ ಅಪ್ಪಾಜಿ ಅವರು ನಾನು ಹಾಗೇ ಸಾಧು ಕೋಕಿಲಾ ಇವರ ಬರ್ತ್ಡೇ ಸೆಲೆಬ್ರೆಷನ್ಗೆ ಬಂದಿದ್ದು ಇದೇ ಬೊಮ್ಮನಹಳ್ಳಿಗೆ. ಅವತ್ತಿಂದ ಇದೇ ಒಡನಾಟ." ಎಂದು ದರ್ಶನ್ ವೇದಿಕೆ ಮೇಲೆ ಹೇಳಿದ್ದಾರೆ.

ಹರೀಶ್ ರೈ ಸತೀಶ್ ರೆಡ್ಡಿ ಸಹಾಯಹಸ್ತ
ಇದೇ ಕಾರ್ಯಕ್ರಮದಲ್ಲಿ 'ಕೆಜಿಎಫ್' ಖ್ಯಾತಿಯ ಹರೀಶ್ ರೈಗೆ ಸತೀಶ್ ರೆಡ್ಡಿ ಸಹಾಯ ಹಸ್ತ ಚಾಚಿದ್ದರ ಬಗ್ಗೆ ಮಾತಾಡಿದ್ದಾರೆ. "ಈ ವ್ಯಕ್ತಿ ಬಗ್ಗೆ ನಾನು ಮಾತಾಡೋಕೆ ಏಕೆ ಇಷ್ಟ ಪಡುತ್ತೇನೆ ಅಂದ್ರೆ, ನಿಮಗೊಂದು ಸಣ್ಣ ಉದಾಹರಣೆ ಕೊಡುತ್ತೀನಿ. ಯಾವ ವ್ಯಕ್ತಿ ಎರಡು ವರ್ಷ ಕೋವಿಡ್ನಲ್ಲಿ ತನ್ನವರನ್ನು ಕಾಪಾಡಿಕೊಂಡನೋ ಆತ ಒಬ್ಬ ಎಂಎಲ್ಎ ಆಗುವುದಕ್ಕೆ ಸಾಧ್ಯ ಅಂತ ಹೇಳುತ್ತೀನಿ. ನಾನು ನೋಡಿದಂತೆ ಸತೀಶಣ್ಣ ತುಂಬಾನೇ ಕೆಲಸ ಮಾಡಿದ್ದಾರೆ. ಅಷ್ಟು ಸಾಕು." ಎಂದು ವೇದಿಕೆ ಮೇಲೆ ದರ್ಶನ್ ಹೇಳಿದ್ದಾರೆ.
"ಕೊನೆ ಬಾರಿ ಇಲ್ಲೊಂದು ಕಾರ್ಯಕ್ರಮಕ್ಕೆ ಬಂದ್ವಿ ನಾವು. ಆಗಸ್ಟ್ 15, ಇದೇ ಸ್ಟೇಡಿಯಂಗೆ ಬಂದಿದ್ದೆವು. ಆ ಕಾರ್ಯಕ್ರಮ ಮುಗಿದ ಮೇಲೆ ಅವರ ಮನೆಯಲ್ಲಿ ಕೂತಿದ್ದೆವು. ನಿಮಗೆಲ್ಲ ಗೊತ್ತಿರಬಹುದು, ನಮ್ಮ ಕಲಾವಿದರೊಬ್ಬರು ಹರೀಶ್ ರೈ ಅಂತ ಹೇಳಿ, ಅವರು ಕ್ಯಾನ್ಸರ್ನಿಂದ ತುಂಬಾನೇ ನರಳುತ್ತಿದ್ದರು. ಅವಾಗ ಕೂತಾಗ ಒಂದು ಮಾತು ಹೇಳಿದೆ. ಅಲ್ಲಣ್ಣ ನೀವೆಲ್ಲ ಇದ್ದೀರ, ಒಬ್ಬ ಕಲಾವಿದನಿಗೆ ಹೀಗೆಲ್ಲ ಆಗಿದೆ ನೀವು ನೋಡಿದ್ರಾ? ಅಂತ. ಇಲ್ಲ ಗೊತ್ತಾಗಿಲ್ಲ ಅಂದ್ರು, ಆಗ ಸತೀಶ್ ಅಣ್ಣ, ಸೀನಣ್ಣ ಹಾಗೂ ಎಲ್ಲಾ ಸ್ನೇಹಿತರು ತುಂಬಾ ದೊಡ್ಡ ಮೊತ್ತವನ್ನು ಒಬ್ಬ ಕಲಾವಿದನಿಗೆ ಒಳ್ಳೆಯದಾಗಲಿ ಅಂತ. ಈಗ ಅವರು ಚೇತರಿಸಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಸತೀಶ್ ಅಣ್ಣ ಕಾರಣ." ಹರೀಶ್ ರೈಗೆ ಸತೀಶ್ ರೆಡ್ಡಿ ಮಾಡಿದ ಸಹಾಯದ ಬಗ್ಗೆ ದರ್ಶನ್ ಮಾತಾಡಿದ್ದಾರೆ.
ಇಷ್ಟೇ ಅಲ್ಲದೆ ಸತೀಶ್ ರೆಡ್ಡಿಯನ್ನು ಮತ್ತೊಮ್ಮೆ ಗೆಲ್ಲಿಸುವಂತೆ, ಈ ಬಾರಿ ಮಂತ್ರಿ ಮಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. "ಮೂರು ಬಾರಿ ಶಾಸಕರನ್ನಾಗಿ ಮಾಡಿದ್ದೀರ. ಅವರನ್ನು ಮಂತ್ರಿ ಮಾಡುವ ಅವಕಾಶ ನಿಮಗಿದೆ. ಈ ಬಾರಿ ನೀವೆಲ್ಲ ಕೈ ಹಿಡಿದರೆ, ಈ ಬಾರಿ ಅವರು ಮಂತ್ರಿ ಆಗುತ್ತಾರೆ." ಎಂದು ಶಾಸಕ ಸತೀಶ್ ರೆಡ್ಡಿ ಪರವಾಗಿ ಪ್ರಚಾರ ಮಾಡಿದ್ದಾರೆ.


Click it and Unblock the Notifications











